ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಯುರೇಕಾ ರಾಜ್ಯಮಟ್ಟದ ವಿಜ್ಞಾನ ಶಿಬಿರ

0

  • ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಯಿಸಲು ನಿಖರತೆ, ತ್ವರಿತಗತಿ ಹಾಗೂ ಸಮಯ ನಿರ್ವಹಣೆ ಮುಖ್ಯ- ಡಾ. ಶ್ರುತಕೀರ್ತಿ

 

 

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಛಲ ಬಿಡದೆ ಧನಾತ್ಮಕ ಮನೋಭಾವದಿಂದ ಗುರಿಯೆಡೆಗೆ ಸಾಗಬೇಕು. ಇದಕ್ಕಾಗಿ ಸೂಕ್ತ ಸಿದ್ಧತಾ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡು ಅದರಂತೆ ಸಿದ್ಧತೆ ಮಾಡುತ್ತಾ ಗುರಿ ಸೇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಯಿಸಲು ನಿಖರತೆ, ತ್ವರಿತಗತಿ ಹಾಗೂ ಸಮಯ ನಿರ್ವಹಣೆ ಬಹಳ ಮುಖ್ಯ ಹಾಗೂ ಇದರೊಂದಿಗೆ ಉತ್ತಮ ಅವಲೋಕನ ಗುಣ ಇದ್ದರಂತೂ ಶ್ರಮ ಸಾರ್ಥಕವಾಗುತ್ತದೆ ಎಂದು ಶಿಕ್ಷಣ ತಜ್ಞ ಡಾ. ಶ್ರುತಕೀರ್ತಿ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ 12 ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾದ ಏಳನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಉತ್ತಮ ಅಂಕಗಳನ್ನು ಗಳಿಸುವುದು ಅತ್ಯಾವಶ್ಯಕ. ಆದರೆ ಕೇವಲ ಅಂಕ ಗಳಿಕೆಗಾಗಿ ಓದದೇ, ಜ್ಞಾನ ಸಂಪಾದನೆಗೆ ಓದಿದರೆ, ಅಂಕಗಳು ತಾನಾಗಿಯೇ ಬರುತ್ತವೆ. ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಎಲ್ಲಾ ಕ್ಷೇತ್ರದಲ್ಲೂ ಆರೋಗ್ಯಕರ ಸ್ಪರ್ಧೆ ನಡೆಸಬೇಕಾಗಿದೆ. ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕಾಗುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿಷಯದ ಆಳವಾದ ಅಧ್ಯಯನ ಮುಖ್ಯ. ಇಲ್ಲಿ ವಿದ್ಯಾರ್ಥಿಯು ತಾನು ಆಭ್ಯಾಸ ಮಾಡಿರುವ ವಿಷಯವನ್ನು ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿ ಅನ್ವಯಿಸಬಲ್ಲ ಎಂಬುದನ್ನೂ ಪರೀಕ್ಷಿಸಲಾಗುತ್ತದೆ. ಯಾರು ವಿಷಯವನ್ನು ಅರ್ಥ ಮಾಡಿಕೊಂಡು ಓದುತ್ತಾರೋ ಅವರಿಗೆ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು. ಇದರ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನು ನೀಡಿದರು.

ಎರಡನೇ ಅವಧಿಯಲ್ಲಿ ಐಒಟಿ ಲ್ಯಾಬ್ ನ ಉಪಯುಕ್ತತೆ ಬಗ್ಗೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ ಶಾಸ್ತ್ರೀ ವಿವಿಧ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here