ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಾಹಿನಿ ಕಾರ್ಯಗಾರ ಉದ್ಘಾಟನೆ

0

 

ಪುತ್ತೂರು: ಪ್ರಸ್ತುತ ಜಗತ್ತಿನಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಮುಂಬರುವ ದಿನಗಳಲ್ಲಿ ಭಾರತದ ಜಿಡಿಪಿ ಇತರ ದೇಶಗಳಿಗಿಂತ ಜಾಸ್ತಿ ಇರಲಿದ್ದು, ಇದಕ್ಕೆ ವಾಣಿಜ್ಯ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಹತ್ತನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿ.ಯು.ಸಿ. ಸೇರ ಬಯಸುವ ವಿದ್ಯಾರ್ಥಿಗಳಿಗೆ ಆಯೊಜಿಸಲಾದ ಒಂದು ದಿನದ ಕಾರ್ಯಗಾರ ‘ವಾಹಿನಿ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ದೇಶ ಅಭಿವೃದ್ಧಿ ಸಾಧಿಸಲು ಆರ್ಥಿಕತೆ ಅನ್ನುವುದು ಬಹಳ ಮುಖ್ಯ. ಒಂದು ದೇಶದ ಆರ್ಥಿಕತೆ ಸದೃಢ ವಾಗಬೇಕಾದರೆ ವಾಣಿಜ್ಯ ಕ್ಷೇತ್ರ ಸದೃಢ ವಾಗಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ವಾಣಿಜ್ಯ ಪದವಿ ಶಿಕ್ಷಣದಲ್ಲಿ ಅನೇಕ ವಿಭಾಗಗಳು ಬಂದಿವೆ. ಅನೇಕ ಹೊಸ ವಿಷಯಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಮಕ್ಕಳು ಸೇರುತಿದ್ದಾರೆ. ಇತರರ ಅನುಕರಣೆ ಬದಲು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಯಶಸ್ವಿಯಾಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ ಎಂ ವಹಿಸಿದ್ದರು.   ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೆ. ಎನ್ ಸುಬ್ರಹ್ಮಣ್ಯ, ಡಾ. ಕೃಷ್ಣಪ್ರಸನ್ನ ಕೆ, ಪ್ರಾಂಶುಪಾಲ ಮಹೇಶ ನಿಟಿಲಾಪುರ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಉಷಾ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ದೇವಿಪ್ರಸಾದ್ ಸ್ವಾಗತಿಸಿ ಶ್ರೀಧರ ಶೆಟ್ಟಿಗಾರ್ ವಂದಿಸಿದರು.

ಒಟ್ಟು ಮೂರು ಅವಧಿಯಲ್ಲಿ ಈ ಕಾರ್ಯಕ್ರಮ ರೂಪುಗೊಂಡಿತು. ಮೊದಲ ಅವಧಿಯಲ್ಲಿ ಪುತ್ತೂರಿನ ವಿವೇಕಾನಂದ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕ ಆಶ್ಲೇ ಡಿ’ಸೋಜಾ ರವರು ವಾಣಿಜ್ಯ ಕ್ಷೇತ್ರದಲ್ಲಿ ದೊರಕುವ ವಿಫುಲ ಅವಕಾಶಗಳು ಮತ್ತು ವಿದ್ಯಮಾನಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಎರಡನೇ ಅವಧಿಯಲ್ಲಿ ವಿವೇಕಾನಂದ ಸ್ನಾತಕೋತರ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕಿ ಡಾ| ವಿಜಯ ಸರಸ್ವತಿ ರವರು ವ್ಯಕ್ತಿತ್ವ ವಿಕಸನ ಮತ್ತು ಹತ್ತನೇ ತರಗತಿ ಬಳಿಕ ಶಿಕ್ಷಣ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತ ಮಾಹಿತಿಯನ್ನು ತಿಳಿಸಿದರು. ಮೂರನೇ ಅವಧಿಯಲ್ಲಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ರವರು ವಾಣಿಜ್ಯ ಕ್ಷೇತ್ರ ನಮಗೆ ಯಾಕೆ ಸ್ಪೂರ್ತಿ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸಿದರು.

LEAVE A REPLY

Please enter your comment!
Please enter your name here