- ರೂ.325 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ-ಮಠಂದೂರು
ಪುತ್ತೂರು: ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಯೋಗದಲ್ಲಿ ಆರ್ಯಾಪು ಗ್ರಾ.ಪಂನಿಂದ ಕಚೇರಿ ಆವರಣದಲ್ಲಿ ನಿರ್ಮಾಣಗೊಂಡ ನೇತಾಜಿ ಸುಭಾಷ್ಚಂದ್ರ ಭೋಸ್ ಸಭಾಂಗಣ ಉದ್ಘಾಟನೆ ಹಾಗೂ ಮನರೇಗಾ ಮತ್ತು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ವಿವಿಧ ಕಾಮಗಾರಿಗಳ ಉದ್ಘಾಟನೆಯು ಎ.30ರಂದು ನಡೆಯಿತು.
ನೇತಾಜಿ ಸುಭಾಷ್ಚಂದ್ರ ಭೋಸ್ ಸಭಾಂಗಣ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ರೂ.೩೨೫ಕೋಟಿ ವೆಚ್ಚದದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಅನುಷ್ಠಾನವಾಗಲಿದ್ದು ಟೆಂಡರ್ ಹಂತದಲ್ಲಿದೆ. ಇದರ ಮುಖಾಂತರ ನೇತ್ರಾವತಿ ನದಿಯಿಂದ ನೀರನ್ನು ಸರಬರಾಜು ಮಾಡಿ ಓವರ್ಹೆಡ್ ಟ್ಯಾಂಕ್ಗಳ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುವುದು ಎಂದರು. ಜಲ ಜೀವನ್ ಮಿಷನ್ ಮೂಲಕ ರೂ.೩.೫ಕೋಟಿ, ರಸ್ತೆ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಲಭ್ಯ ಕಲ್ಪಿಸಲು ಆರ್ಯಾಪು ಗ್ರಾ.ಪಂಗೆ ರೂ.೧೧.೫೫ ಕೋಟಿ ಅನುದಾನ ನೀಡಲಾಗಿದೆ. ಗ್ರಾಮೀಣ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆ ಉತ್ತೇಜನ ನೀಡಲು ಆರ್ಯಾಪು ಗ್ರಾ.ಪಂನಲ್ಲಿ ಜಾಗ ಗುರುತಿಸಲಾಗುವುದು ಎಂದು ಹೇಳಿದ ಶಾಸಕರು ಆಧುನಿಕತೆಯ ಮೈಗೂಡಿಸಿಕೊಂಡು ಗ್ರಾಮದ ಜನತೆಗೆ ಆಧುನಿಕ ರೀತಿಯಲ್ಲಿ ಸೇವೆ ನೀಡಬೇಕು. ಗಾಂಧಿಯವರ ಕೊಡುಗೆಗಳನ್ನು ಸ್ಮರಿಸಿಕೊಂಡು ಪರಿವರ್ತನೆ ಕಾಣಬೇಕು. ಇತರ ಪಂಚಾಯತ್ಗಳಿಗಿಂತ ಭಿನ್ನ ತೋರಿಸಬೇಕು ಎಂದು ಹೇಳಿದರು.
ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ರಾಮ ರಾಜ್ಯ ಎಲ್ಲಿಂದಲೋ ಪಡೆಯುವುದಲ್ಲ. ಅದು ನಮ್ಮ ಹೃದಯದಲ್ಲಿರಬೇಕು. ಅದಕ್ಕೆ ಇಂತದೇ ನೀತಿ ನಿಯಮಗಳಿಲ್ಲ. ನಾವು ಕೈಗೊಳ್ಳುವ ತೀರ್ಮಾಣಗಳು ಜನರಿಗೆ ಹಿತವಾಗಿರಬೇಕು ಎಂಬ ಸತ್ಯವನ್ನು ಅರಿತು ತೀರ್ಮಾಣ ಕೂಗೊಳ್ಳುವುದೇ ಗ್ರಾಮ ಸ್ವರಾಜ್ಯ, ರಾಮ ರಾಜ್ಯ ಎಂದರು. ಪಂಚಾಯತ್ನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಆಡಳಿತ ನಡೆಸುವುದಲ್ಲ. ಸ್ಥಳಿಯವಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಆಡಳಿತ ನಡೆಸುತ್ತಾರೆ. ಶೇ.೫೦ರಷ್ಟು ಮಹಿಳಾ ಮೀಸಲಾತಿಯು ನೀಡಲಾಗುತ್ತಿದ್ದು ವಿವಿಧ ಕಾಮಗಾರಿಗಳ ಚೆಕ್ ಸಹಿ ಮಾಡುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ ಎಂದರು. ಗ್ರಾಮದ ನಿಸ್ವಾರ್ಥ ಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಿರುವ ಪಂಚಾಯತ್ನ ಅಧಿಕಾರಿಗಳು ಅಭಿನಂದನೀಯರು. ಇಂತಹ ಕೆಲಸವನ್ನು ಎಲ್ಲಾ ಪಂಚಾಯತ್ಗಳಿಗೆ ವಿಸ್ತರಿಸಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಕೆ. ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಗ್ರಾಮ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಸಹಕರಿಸುವಂತೆ ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್ಮೆನ್ ರಾಮದಾಸ ಗೌಡ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಗೊಂಡ ವಿವಿಧ ಕಾಮಗಾರಿಗಳು:
ಕುರಿಯದಲ್ಲಿ ರೂ.೧೦ಲಕ್ಷದ ರಾಜೀವ ಗಾಂಧಿ ಸೇವಾ ಕೇಂದ್ರ, ಕಲ್ಲರ್ಪೆಯಲ್ಲಿ ರೂ.೬ಲಕ್ಷದ ಸ್ವಚ್ಚ ಸಂಕೀರ್ಣ, ಪಂಚಾಯತ್ ಕಚೇರಿ ಬಳಿ ರೂ.೧೫ಲಕ್ಷದ ನೇತಾಜಿ ಸುಭಾಷ್ ಚಂದ್ರ ಬೋಸ್ ಸಭಾಂಗಣ, ರೂ.೩.೮೦ಲಕ್ಷದ ಕೊಲ್ಯದಲ್ಲಿ ತಾಲೂಕಿನ ಪ್ರಥಮ ಸೋಲಾರ್ ಚಾಲಿತ ಕುಡಿಯುವ ನೀರಿನ ಪಂಪು ಉದ್ಘಾಟನೆಗೊಂಡಿತು.
ಪ್ರಥಮ ಬಾರಿಗೆ ಗ್ರಾಮ ಪುರಸ್ಕಾರ:
ತಾಲೂಕಿನಲ್ಲೇ ಪ್ರಥಮ ಬಾರಿಯಾಗಿ ಆರ್ಯಾಪು ಗ್ರಾ.ಪಂನಿಂದ ಗೌರವ ಗ್ರಾಮ ಪುರಸ್ಕಾರ ನೀಡಲಾಗಿದ್ದು, ಕಳೆದ ೩೭ ವರ್ಷಗಳಿಂದ ಕುರಿಯದಲ್ಲಿ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಮಣ್ಣ ಹಾಗೂ ಹಿರಿಯ ಅಂಚೆ ಪಾಲಕ ಅಬ್ದುಲ್ ರಹಿಮಾನ್ರವರಿಗೆ ಗೌರವ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಆರೋಗ್ಯ ಸಹಾಯಕಿ ದಮಯಂತಿ ಹಾಗೂ ದಾದಿಯರಾದ ವಂದನಾ ಹಾಗೂ ಕುಸುಮ, ಸ್ನಾತಕೋತ್ತರ ಪದವಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಎಂಎಸ್ಸಿಯಲ್ಲಿ ಚಿನ್ನದ ಪದಕ ಪಡೆದ ಹರ್ಷಿತ್ ಕುಮಾರ್ ಕೂರೇಲು, ಎಂಎಸ್ಸಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಸುಶ್ಮಿತಾ ಕೆ. ನೈತ್ತಾಡಿ, ಎಂ.ಕಾಂನಲ್ಲಿ ನಾಲ್ಕನೇ ರ್ಯಾಂಕ್ ಪಡೆದ ನಿರಿಷ್ಮಾ ಎನ್ ಸುವರ್ಣ, ಎಂ.ಕಾಂನಲ್ಲಿ ಐದನೇ ರ್ಯಾಂಕ್ ಪಡೆದ ರಕ್ಷಾ ಸಂಪ್ಯ, ಕೊರೋನಾ ಸಮಯದಲ್ಲಿ ಸುಮಾರು ೭೦೦ಕ್ಕೂ ಅಧಿಕ ಮಂದಿಗೆ ಆಹಾರದ ಕಿಟ್ ವಿತರಿಸಿದ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ, ಜಿಲ್ಲಾ ಸರ್ವೋತ್ತಮ ಪ್ರಶಸ್ತಿ ಪಡೆದ ಪಿಡಿಓ ನಾಗೇಶ್ ಎಂ., ಗುತ್ತಿಗೆದಾರರಾದ ಸುರೇಂದ್ರ ರೈ, ಉಸ್ಮಾನ್ ಚೆನ್ನಾವರವರನ್ನು ಸನ್ಮಾನಿಸಲಾಯಿತು.
ಕ್ರೀಡಾ ಸಾಮಾಗ್ರಿ ವಿತರಣೆ:
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲ, ಶ್ರೀ ವಿನಾಯಕ ಸ್ಪೋರ್ಟ್ಸ್ ಕ್ಲಬ್ ಸಂಟ್ಯಾರ್, ನವಚೇತನ ಯುವಕ ಮಂಡಲ ಸಂಪ್ಯ, ಸೂರ್ಯ ಯುವಕ ಮಂಡಲ ಇಡಬೆಟ್ಟು, ಶ್ರೀಕೃಷ್ಣ ಯುವಕ ಮಂಡಲ ಕಂಬಳತ್ತಡ್ಡ, ಯುವಕ ಮಂಡಲ ಮಾವಿನಕಟ್ಟೆ, ಹಿ.ಪ್ರಾ ಶಾಲೆಗಳಾದ ಹಂಟ್ಯಾರು, ಇಡಬೆಟ್ಟು, ಕುರಿಯ ಹಾಗೂ ಕುಂಜೂರುಪಂಜ ಅನುದಾನಿತ ಹಿ.ಪ್ರಾ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸವಲತ್ತು ವಿತರಣೆ:
ಪಂಚಾಯತ್ನಿಂದ ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ನೀರು ಸಂಗ್ರಹದ ಟ್ಯಾಂಕ್ ವಿತರಣೆ, ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾಮದ ೭೫ ಮನೆಗಳಿಗೆ ಸೋಲಾರ್ ವಿದ್ಯುದೀಕರಣ ಕಾರ್ಯಾದೇಶ ವಿತರಣೆ, ವಿಶೇಷ ಚೇತನ ಮೀಸಲು ನಿಧಿಯಿಂದ ನೀರಿನ ಟ್ಯಾಂಕ್ ವಿತರಣೆ ಹಾಗೂ ಸಂಜೀವಿನಿ ಒಕ್ಕೂಟಕ್ಕೆ ಸ್ವಚ್ಚ ಸಂಕೀರ್ಣದ ಕೀ ಹಸ್ತಾಂತರಿಸಲಾಯಿತು.
ಶಾಸಕರಿಗೆ ಮನವಿ:
ಕುರಿಯ ಓಟೆತ್ತಿಮಾರ್ ಪ.ಜಾತಿ ಕಾಲೋನಿಗೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಶಾಸಕ ಸಂಜೀವ ಮಠಂದೂರುರವರಲ್ಲಿ ಮನವಿ ಮಾಡಿದರು.
ದ್ವಿ.ದ ಲೆಕ್ಕಾ ಸಹಾಯಕ ಮೋನಪ್ಪ ಪ್ರಾರ್ಥಿಸಿದರು. ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಸ್ವಾಗತಿಸಿದರು. ಸದಸ್ಯರಾದ ವಸಂತ ಶ್ರೀ ದುರ್ಗಾ, ಪುರುಷೋತ್ತಮ ರೈ ಬೂಡಿಯಾರ್, ಪವಿತ್ರ ರೈ ಬಾಳಿಲ, ಪವಿತ್ರ ರೈ, ರೇವತಿ, ಹರೀಶ್ ನಾಯಕ್, ಅಶೋಕ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ, ದ್ವಿ.ದ ಲೆಕ್ಕಾ ಸಹಾಯಕ ಮೋನಪ್ಪ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನಡೆಯಿತು.