ಅದೃಷ್ಟಕ್ಕಿಂತ ಕರ್ತವ್ಯ ನಿಷ್ಠೆ ಶ್ರೇಷ್ಠ – ವಿಶ್ವಕರ್ಮ ಮಹಿಳಾ ಮಂಡಳಿ ಮಹಾಸಭೆ, ವಾರ್ಷಿಕೋತ್ಸವ
ಪುತ್ತೂರು: ಅದೃಷ್ಟವನ್ನು ನಂಬಿ ಕೂರುವುದು ಸರಿಯಲ್ಲ. ಸತತ ಪರಿಶ್ರಮ ಹಾಗೂ ನಿಷ್ಠೆಯೇ ಯಶಸ್ಸಿನ ಸೂತ್ರ ಎಂದು ಮುರ ಹಿ.ಪ್ರಾ. ಶಾಲಾ ಸಹಶಿಕ್ಷಕಿ ಶೋಭಾ ಭೋಜರಾಜ್ ಅಭಿಪ್ರಾಯಪಟ್ಟರು. ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಏ. 30ರಂದು ನಡೆದ ವಿಶ್ವಕರ್ಮ ಮಹಿಳಾ ಮಂಡಳಿಯ 17ನೇ ವರ್ಷದ ಮಹಾಸಭೆ ಮತ್ತು ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಿಳೆಯರು ಇಂದು ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಮಾರು ಹೋಗುತ್ತಿದ್ದಾರೆ. ಇದರಿಂದಾಗಿ ಮನೆಯಲ್ಲಿ ಶಾಂತಿ ಇಲ್ಲದಂತಹ ಕೆಲಸ ಆಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಇದಕ್ಕೆ ಪೂರಕವಾಗಿ ಶಿಕ್ಷಣವನ್ನು ಪಡೆದುಕೊಂಡು, ಸುಸಂಸ್ಕೃತ ಸಮಾಜ ಕಟ್ಟಲು ಮಹಿಳೆಯರು ಮುಂದಾಗಬೇಕು. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಕೆಲಸ ಮಾಡಲು ಸ್ಥೈರ್ಯ ತುಂಬಬೇಕು. ಇಂದು ಮಹಿಳೆಯರು ಸಬಲರಾಗುತ್ತಿದ್ದಾರೆ. ಇನ್ನೊಂದೆಡೆ ಶೋಷಣೆಯೂ ಹೆಚ್ಚುತ್ತಿದೆ ಎಂದ ಅವರು, ಒಗ್ಗಟ್ಟಿನಿಂದ ಸಂಘವನ್ನು ಬಲಪಡಿಸಿ. ವಿದ್ಯಾರ್ಥಿವೇತನ, ಸಹಾಯಹಸ್ತ ಮೊದಲಾದ ಉತ್ತಮ ಕಾರ್ಯವನ್ನು ಮಹಿಳಾ ಮಂಡಳಿ ಮಾಡುತ್ತಾ ಬರುತ್ತಿದೆ. ಇನ್ನಷ್ಟು ಉತ್ತಮ ಕಾರ್ಯ ನಡೆಯಲಿ ಎಂದು ಹಾರೈಸಿದರು.
ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿನವೀನ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಸುರೇಶ್ ಆಚಾರ್ಯ ಕಾಣಿಯೂರು, ಮಂಡಳಿಯ ಸಲಹಾ ಸಮಿತಿ ಸದಸ್ಯ ರಮೇಶ್ ಆಚಾರ್ಯ ಮಾಮೇಶ್ವರ ಉಪಸ್ಥಿತರಿದ್ದರು. ಮಂಡಳಿ ಪ್ರ.ಕಾರ್ಯದರ್ಶಿ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ ವರದಿ ವಾಚಿಸಿದರು. ಶರ್ಮಿಳಾ ಹರಿಕೃಷ್ಣ ಅವರು ಅತಿಥಿಗಳನ್ನು ಪರಿಚಯಿಸಿದರು. ಉಷಾ ಸದಾನಂದ್ ಹಾಗೂ ಭವ್ಯಾ ವಾದಿರಾಜ್ ಕಾರ್ಯಕ್ರಮ ನಿರೂಪಿಸಿದರು. ಬೇಬಿ ಕೆ. ಆಚಾರ್ ವಂದಿಸಿದರು. ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.