ಪುತ್ತೂರು: ಕೋರಂ ಕೊರತೆಯಿಂದಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಮುಂದೂಡಿಕೆಯಾದ ಘಟನೆ ನಡೆದಿದೆ. ಮೇ 4ರಂದು ಗ್ರಾ.ಪಂ. ಸಾಮಾನ್ಯ ಸಭೆ ನಿಗದಿ ಪಡಿಸಲಾಗಿತ್ತು. ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರ, ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಪುಷ್ಪಾ ಲೋಕಯ್ಯ ನಾಯ್ಕ ಕಠಾರ, ವಿಶ್ವನಾಥ ಕೃಷ್ಣಗಿರಿ ಮತ್ತು ಮೋಹಿನಿ ಜನಾರ್ದನ ಗೌಡ ಕೋಡಿರವರು ಮಾತ್ರ ಸಭೆಗೆ ಆಗಮಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ ಕೋರಿಯ, ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ಜಯಪ್ರಕಾಶ್ ಬದಿನಾರು, ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ ಮತ್ತು ಗೀತಾ ಮೊಗೇರ ಮೋನಡ್ಕರವರು ಗೈರು ಹಾಜರಾಗಿದ್ದರು.
11 ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಐವರು ಮಾತ್ರ ಸಭೆಗೆ ಹಾಜರಾಗಿದ್ದರಿಂದ ಕೋರಂ ಕೊರತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಪಿಡಿಓ ಚಿತ್ರಾವತಿ ಸಭೆಯನ್ನು ಮುಂದೂಡುವುದಾಗಿ ಪ್ರಕಟಿಸಿದರು. ಈ ಹಿಂದೆ ಬೆಜೆಪಿ ಬೆಂಬಲಿತ ಸದಸ್ಯ ವಿಶ್ವನಾಥ ಕೃಷ್ಣಗಿರಿ ಮತ್ತು ಕಾಂಗ್ರೆಸ್ ಬೆಂಬಲಿತ ಐವರು ಸದಸ್ಯರು ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದಾಗಿ ಸಭೆ ಮುಂದೂಡಲ್ಪಟ್ಟಿತ್ತು. ಆ ನಂತರದ ಸಾಮಾನ್ಯ ಸಭೆ ಸುಗಮವಾಗಿ ನಡೆದಿತ್ತು. ಇದೀಗ ಬೆಜೆಪಿ ಬೆಂಬಲಿತ ಗ್ರಾ.ಪಂ. ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್ ಬೆಂಬಲಿತ ಐವರು ಸದಸ್ಯರು ಗೈರು ಹಾಜರಾಗಿದ್ದರಿಂದ ಸಭೆ ಮುಂದೂಡಲ್ಪಟ್ಟಿದೆ.