-
- ಮೇ 7ರಂದು ಉಪ್ಪಿನಂಗಡಿಗೆ ಸ್ಮೈಲ್ ರ್ಯಾಲಿ ಆಗಮನ
- ಇಳಂತಿಲ ಸರಕಾರಿ ಶಾಲೆ ದತ್ತು ಸ್ವೀಕಾರ
ಉಪ್ಪಿನಂಗಡಿ: ದಂತ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ದಂತ ವೈದ್ಯರ ಸಲಹೆ ಪಡೆಯದೇ ಕಂಪೆನಿಗಳ ಆನ್ಲೈನ್ ಮೂಲಕ ದಂತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅಪಾಯಕಾರಿ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಭಾರತೀಯ ಆರ್ಥೊಡಾಂಟಿಕ್ ಸೊಸೈಟಿಯ ಸ್ಮೈಲ್ ರ್ಯಾಲಿ ಮೇ ೭ರಂದು ಉಪ್ಪಿನಂಗಡಿಗೆ ಆಗಮಿಸಲಿದೆ ಎಂದು ರ್ಯಾಲಿಯ ಸಂಯೋಜಕ ಡಾ. ಆಶಿತ್ ಎಂ.ವಿ. ತಿಳಿಸಿದರು.
ಅವರು ಮೇ ೪ರಂದು ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ನಗರ ಪ್ರದೇಶಗಳಲ್ಲಿ ಕಂಪೆನಿಗಳ ಆನ್ಲೈನ್ ಸೇವೆಯನ್ನು ಪಡೆದುಕೊಳ್ಳುವ ಕ್ರೇಜಿ ಮೂಡುತ್ತಿದ್ದು, ಹಲವಾರು ಅಡ್ಡ ಪರಿಣಾಮಗಳೊಂದಿಗೆ ಮುಖದ ಚಂದವನ್ನೇ ಕಳೆದುಕೊಳ್ಳುತ್ತಿರುವ ಘಟನಾವಳಿಗಳು ನಡೆಯುತ್ತಿದೆ. ಇದರ ಬಗ್ಗೆ ದೇಶದ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಅನಿವಾರ್ಯತೆ ಉದ್ಭವಿಸಿದ್ದು, ಈ ಹಿನ್ನೆಲೆಯಲ್ಲಿ ದೇಶದ ಮೂವತ್ತು ನಗರಗಳಲ್ಲಿ ಸ್ಮೈಲ್ ರ್ಯಾಲಿ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಇಳಂತಿಲ ಸರಕಾರಿ ಶಾಲೆ ದತ್ತು ಸ್ವೀಕಾರ:
ಇದೇ ಸಂಧರ್ಭದಲ್ಲಿ ಅಭಿಯಾನದ ಅಂಗವಾಗಿ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮಂಗಳೂರು ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ಅಂಡೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ ಅವರು, ಈ ಹಿನ್ನೆಲೆಯಲ್ಲಿ ಶಾಲೆಗೆ ಪ್ರಾಜೆಕ್ಟರ್, ಇನ್ವಾರ್ಟರ್, ಬ್ಯಾಟರಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರಥಮ್ ಶೆಟ್ಟಿ, ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನಿಯೋಜಿತ ಅಧ್ಯಕ್ಷ ಜಗದೀಶ್ ನಾಯಕ್, ಯುವ ವಾಹಿನಿ ಮಾಜಿ ಅಧ್ಯಕ್ಷ ಗುಣಕರ ಅಗ್ನಾಡಿ ಉಪಸ್ಥಿತರಿದ್ದರು.