ಲಂಚ,ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯತ್ ಆಗಿ ಒಳಮೊಗ್ರು

0

  • ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ, ಅಧಿಕಾರಿಗಳ ತೀರ್ಮಾನ

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ಅನ್ನು ಲಂಚ,ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯತ್ ಆಗಿ ಮಾಡಲು ಸದಸ್ಯರುಗಳು, ಅಧಿಕಾರಿಗಳು ದಿಟ್ಟ ತೀರ್ಮಾನ ಕೈಗೊಂಡಿದ್ದಾರೆ. ಇಲ್ಲಿ ಯಾವುದೇ ಲಂಚ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಸಾರ್ವಜನಿಕರು ನೇರವಾಗಿ ತಮ್ಮ ಸರಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಬಹುದು, ಲಂಚ,ಭ್ರಷ್ಟಾಚಾರ ಮುಕ್ತ ಪಂಚಾಯತ್ ಮಾಡುವಲ್ಲಿ ಗ್ರಾಮಸ್ಥರು ಕೂಡ ನಮ್ಮೊಂದಿಗೆ ಕೈಜೋಡಿಸಬೇಕು, ಅಧಿಕಾರಿಗಳು, ಸದಸ್ಯರುಗಳು ಸದಾ ಗ್ರಾಮಸ್ಥರ ಜೊತೆಗಿದ್ದೇವೆ ಎಂದು ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಹೇಳಿದರು.

 

ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಸಭಾಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಲಂಚ,ಭ್ರಷ್ಟಾಚಾರವನ್ನು ಕಡಿಮೆ ಮಾಡಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದ ಅಭಿವೃದ್ಧಿ ಅಧಿಕಾರಿಯವರು ಒಳಮೊಗ್ರುಗ್ರಾಪಂನಲ್ಲಿ ಗ್ರಾಮಸ್ಥರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಸರಕಾರದ ಸವಲತ್ತು, ಸೌಲಭ್ಯಗಳನ್ನು ಪಡೆದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಲಂಚ, ಭ್ರಷ್ಟಾಚಾರ ಮುಕ್ತ ಪಂಚಾಯತ್ ತೀರ್ಮಾನಕ್ಕೆ ಎಲ್ಲಾ ಸದಸ್ಯರುಗಳು ಒಮ್ಮತದ ಒಪ್ಪಿಗೆ ಸೂಚಿಸಿದರು.

ಸಂಚಾರಿ ಆರೋಗ್ಯ ಆಸ್ಪತ್ರೆ ವಾಹನ ನಿಲ್ಲಿಸಬೇಡಿ
ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ಭಾಗಗಳಿಗೆ ಸಂಚಾರಿ ಆರೋಗ್ಯ ಆಸ್ಪತ್ರೆ ವಾಹನ ಬರುತ್ತಿದ್ದು ಇದರಿಂದ ಬಹಳಷ್ಟು ಬಡಜನರಿಗೆ ಪ್ರಯೋಜನವಾಗಿದೆ. ಈ ವಾಹನ ಗ್ರಾಮೀಣ ಭಾಗಗಳಲ್ಲಿ ಸಂಚರಿಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಬಿಪಿ, ಶುಗರ್ ಇತ್ಯಾದಿಗಳ ಪರೀಕ್ಷೆಗೆ ಮತ್ತು ಶೀತ,ಕೆಮ್ಮು ಇತ್ಯಾದಿ ಸಾಮಾನ್ಯ ಖಾಯಿಲೆಗಳಿಗೆ ಔಷಧಿ ಪಡೆಯಲು ಅನುಕೂಲವಾಗುತ್ತಿದೆ. ಆದರೆ ಸರಕಾರ ಈ ವಾಹನವನ್ನು ನಿಲ್ಲಿಸುವ ಬಗ್ಗೆ ಚಿಂತನೆ ಮಾಡುತ್ತಿದೆ. ಆದ್ದರಿಂದ ಈ ಸಂಚಾರಿ ಆರೋಗ್ಯ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಮಹೇಶ್ ರೈ ಕೇರಿ ಸಭೆಗೆ ತಿಳಿಸಿದರು. ಈ ಬಗ್ಗೆ ನಿರ್ಣಯಿಸಲಾಯಿತು.

ರಸ್ತೆ ಮಾರ್ಜಿನ್‌ನಲ್ಲಿ ಕಟ್ಟಡ ಕಟ್ಟಿದರೆ ಪರವಾನಗೆ ಇಲ್ಲ
ಕಟ್ಟಡ, ಮನೆ ಕಟ್ಟುವವರು ರಸ್ತೆ ಮಾರ್ಜಿನ್ ಬಿಟ್ಟೇ ನಿರ್ಮಿಸಬೇಕು, ರಸ್ತೆ ಮಾರ್ಜಿನ್‌ನಲ್ಲಿ ಕಟ್ಟಡ ಕಟ್ಟಿದರೆ ಯಾವುದೇ ಕಾರಣಕ್ಕೂ ಪರವಾನಗೆ ನೀಡಲಾಗುವುದಿಲ್ಲ ಎಂದು ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ತಿಳಿಸಿದರು. ವಾಣಿಜ್ಯ ಅಥವ ಇತರೆ ಯಾವುದೇ ಕಟ್ಟಡ ನಿರ್ಮಿಸುವಾಗಲೂ ರಸ್ತೆ ಮಾರ್ಜಿನ್ ಬಿಟ್ಟೆ ನಿರ್ಮಿಸಬೇಕು ಎಂದು ಇಲ್ಲವಾದಲ್ಲಿ ಪರವಾನಗೆ ಕೊಡಲಾಗುವುದಿಲ್ಲ ಎಂದು ನಿರ್ಣಯಿಸಲಾಯಿತು.

ಅಕ್ರಮ ಸಕ್ರಮದಲ್ಲಿ ಮಂಜೂರುಗೊಂಡ ಜಾಗ ಪ್ಲಾಟಿಂಗ್ ಆಗುತ್ತಿಲ್ಲ!?
ಕಳೆದ ೪ ವರ್ಷಗಳಿಂದ ಅಕ್ರಮ ಸಕ್ರಮದಲ್ಲಿ ಮಂಜೂರುಗೊಂಡ ಜಾಗ ಪ್ಲಾಟಿಂಗ್ ಆಗುತ್ತಿಲ್ಲ ಇದರಿಂದ ಬಹಳಷ್ಟು ಜನರಿಗೆ ತೊಂದರೆಯಾಗುತ್ತಿದೆ. ಪ್ಲಾಟಿಂಗ್ ಆಗದೇ ಇರುವುದರಿಂದ ಕನ್ವರ್ಷನ್ ಕೂಡ ಆಗುತ್ತಿಲ್ಲ ಇದರಿಂದ ಡೋರ್ ನಂಬರ್, ವಿದ್ಯುತ್ ಸಂಪರ್ಕ ಇಲ್ಲದೆ ಸಮಸ್ಯೆಯಲ್ಲಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿದೆ ಈ ಬಗ್ಗೆ ಕಂದಾಯ ಇಲಾಖೆಗೆ ಬರೆದುಕೊಳ್ಳುವ ಎಂದು ಅಶ್ರಫ್ ಉಜಿರೋಡಿ ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಸಿರಾಜುದ್ದೀನ್, ಚಿತ್ರ ಬಿ.ಸಿ, ಶಾರದ, ನಳಿನಾಕ್ಷಿ, ನಿಮಿತಾ ರೈ, ವನಿತಾ ಕುಮಾರಿ, ಪ್ರದೀಪ್, ಲತೀಫ್, ಮಹೇಶ್ ಕೇರಿ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸಾರ್ವಜನಿಕ ಅರ್ಜಿಗಳನ್ನು, ಸರಕಾರದ ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಜಾನಕಿ,ಗುಲಾಬಿ,ಕೇಶವ ಸಹಕರಿಸಿದ್ದರು.

LEAVE A REPLY

Please enter your comment!
Please enter your name here