ಪ್ರತಿಷ್ಠಾ ಮಹೋತ್ಸವಕ್ಕೆ ಸಿದ್ಧಗೊಂಡಿದೆ ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿ

0

  • ಮೇ .11, 12,13-ದೈವಗಳ ಪ್ರತಿಷ್ಠೆ, ನೇಮೋತ್ಸವ

 

 

ನೆಲ್ಯಾಡಿ: ಇಲ್ಲಿಗೆ ಸಮೀಪದ ಕೊಕ್ಕಡದಲ್ಲಿ ಅಜೀರ್ಣವಸ್ಥೆಯಲ್ಲಿದ್ದ ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿ ಜೀರ್ಣೋದ್ಧಾರಗೊಂಡು ಪ್ರಕೃತಿಯ ಸೊಬಗಿನ ಮಧ್ಯೆ ಕಂಗೊಳಿಸುತ್ತಿದೆ. ಜೀರ್ಣೋದ್ಧಾರಗೊಂಡಿರುವ ದೈವ ಸನ್ನಿಧಿಯಲ್ಲಿ ಮೇ 11ರಿಂದ13ರ ತನಕ ದೈವಗಳ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವ ನಡೆಯಲಿದೆ.


ಇತಿಹಾಸ:
ಸುಮಾರು 3 ಸಾವಿರ ವರ್ಷಗಳ ಇತಿಹಾಸವುಳ್ಳ ಕೊಕ್ಕಡ ವೈದ್ಯನಾಥ ದೇವಾಲಯವು ಅಪಾರ ಶ್ರೀಮಂತ ದೇವಾಲಯವಾಗಿತ್ತು. ಇದರ ಸನಿಹದಲ್ಲಿರುವ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಓಣಿತ್ತಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಗಳು ನಿಕಟ ಸಂಬಂಧಪಟ್ಟ ದೇವಾಲಯಗಳಾಗಿವೆ. ಈ ಕ್ಷೇತ್ರಗಳಿರುವ ಕೊಕ್ಕಡ ಸೀಮಾ ಪ್ರದೇಶವು ಹಿಂದೆ ವಿಜಯನಗರ ಅರಸರ ಅಳ್ವಿಕೆಗೆ ಒಳಪಟ್ಟಿತ್ತು. ಕದಂಬ ವಶಂದ ಮಯೂರವರ್ಮ ಈ ಪ್ರದೇಶದ ಆಡಳಿತ ಮಾಡಿರುವ ಕುರುಹುಗಳನ್ನು ಇಲ್ಲಿ ಕಾಣಬಹುದಾಗಿದೆ. ಮಯೂರವರ್ಮನ ಅಧಿಕಾರ ಅವಧಿಯಲ್ಲಿ ತುಳು ಮಾಯಿಲ ಎಂಬ ವೀರಪುರುಷ ತನ್ನ ಸಹವರ್ತಿಗಳನ್ನು ಕೂಡಿಕೊಂಡು ಸೈನ್ಯ ಕಟ್ಟಿ ಎತ್ತರದ ಪ್ರದೇಶವೊಂದರಲ್ಲಿ ತನ್ನ ರಕ್ಷಣೆಗಾಗಿ ಕೋಟೆ ನಿರ್ಮಿಸಿದ್ದ. ಜೊತೆಗೆ ದೈವಾನುಗ್ರಹಕ್ಕಾಗಿ ಶ್ರೀ ಕೋಟೆ ಚಾಮುಂಡಿ, ಶ್ರೀ ವರ್ಣಾರಪಂಜುರ್ಲಿ, ಶ್ರೀ ಕಲ್ಲುರ್ಟಿ, ಶ್ರೀ ಗುಳಿಗ ದೈವವನ್ನು ಆಯುಧ, ಮುಖಮೂರ್ತಿ, ಭೂಷಣ ವಸ್ತುಗಳ ಸಹಿತ ವಾರ್ಷಿಕ ಕೋಲ ಕೊಟ್ಟು ಪಂಚ ಪರ್ವಾದಿಗಳನ್ನು ನಡೆಸಿ ಆರಾಧಿಸುವ ವ್ಯವಸ್ಥೆ ಮಾಡಿಕೊಂಡಿದ್ದ. ಮುಂದೆ ಮಾಯಿಲ ಅರಸನು ಸಾಮಂತ ಅರಸನೊಡನೆ ಕಾದಾಡಿ ಹತನಾಗುತ್ತಾನೆ. ಕಾಲಘಟ್ಟದಲ್ಲಿ ಮಾಯಿಲ ಅರಸನು ಆರಾಧಿಸಿಕೊಂಡು ಬಂದ ಸಾನಿಧ್ಯೋಪಾದಿಗಳು ನಾಶಗೊಂಡವು. ಪ್ರಸ್ತುತ ಈ ದೈವಗಳ ಕೋಪದಿಂದ ಈ ಪ್ರದೇಶದ ಗ್ರಾಮಸ್ಥರಿಗೆ ಹಲವು ರೀತಿಯ ದುರಂತಗಳು, ಅಕಾಲಮರಣ, ಮನ: ಶಾಂತಿಗಳ ಹಾನಿ, ಕೃಷಿಯಲ್ಲಿ ಸಂಕಷ್ಟ, ನೀರಿನ ಸಮಸ್ಯೆ ಸಂಭವಿಸುತ್ತಿರುವುದು ಅನುಭವವಾಗುತ್ತಿತ್ತು.

ಜೀರ್ಣೋದ್ದಾರ ಕೆಲಸ:
ಈ ಭಾಗದ ಗ್ರಾಮಸ್ಥರಿಗೆ ಆಗುತ್ತಿದ್ದ ಹಲವು ರೀತಿಯ ತೊಂದರೆ, ದೋಷಗಳ ನಿವೃತ್ತಿಗಾಗಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ದಾರ ಕೆಲಸಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿದೆ. ವಾಸ್ತುಶಿಲ್ಪಿ ಕೃಷ್ಣ ಪ್ರಸಾದ್ ಮುನಿಯಂಗಳರವರ ನಿರ್ದೇಶನದಂತೆ ದೈವಗಳಿಗೆ ಗುಡಿ ನಿರ್ಮಾಣ, ನಶಿಸಿ ಹೋಗಿದ್ದ ಕೋಟೆಯನ್ನು ಶಿಲಾಮಯವಾಗಿ ಪುನರ್ ನಿರ್ಮಾಣ, ಕೋಟೆಗೆ ಮೆಟ್ಟಿಲು ನಿರ್ಮಾಣ, ೧೨ ಅಡಿ ಎತ್ತರದ ಏಕಶಿಲಾ ಸ್ಮಾರಕ ನಿರ್ಮಾಣ, ಆವರಣ ಗೋಡೆ, ನೈವೇದ್ಯ ಕೊಠಡಿ ನಿರ್ಮಾಣ ಕೆಲಸಗಳು ನಡೆಯುತ್ತಿದೆ. ಸುಮಾರು ೧.೫೦ ಕೋಟಿ ರೂ.,ವೆಚ್ಚದಲ್ಲಿ ಜೀರ್ಣೋದ್ಧಾರ ಕೆಲಸ ನಡೆದಿದೆ.

ಇಷ್ಟಾರ್ಥ ಸಿದ್ಧಿ ಕ್ಷೇತ್ರ:
ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿದ ಹಲವು ಮಂದಿಯ ಸಂಕಷ್ಟ ನಿವಾರಣೆಯಾಗಿರುವ ನಿದರ್ಶನಗಳಿವೆ. ಜಾಗದ ವಿವಾದಕ್ಕೆ ಪರಿಹಾರ, ಅನಾರೋಗ್ಯ ಪೀಡಿತರು ಗುಣಮುಖರಾಗಿರುವ ನಿದರ್ಶನಗಳಿವೆ. ಈಗಾಲೂ ಜನ ಇಲ್ಲಿಗೆ ಬಂದು ಪ್ರಾರ್ಥನೆ ನೆರವೇರಿಸುತ್ತಿದ್ದು ತಮ್ಮ ಸಂಕಷ್ಟಗಳಿಂದ ಪಾರಾಗಿದ್ದಾರೆ. ಇದೀಗ ಈ ಕ್ಷೇತ್ರ ಜೀರ್ಣೋದ್ದಾರಗೊಂಡು ಕಂಗೊಳಿಸುತ್ತಿದೆ.

 

ಇತಿಹಾಸ ಸಾರುತ್ತಿದೆ ಹಲಸಿನ ಮರ:
ಕೋಟೆ ಹಾಗೂ ದೈವ ಸನ್ನಿಧಿಯಿಂದ 100 ಮೀ.ದೂರದಲ್ಲಿ ಹಲಸಿನ ಮರವೊಂದಿದ್ದು ಕ್ಷೇತ್ರದ ಇತಿಹಾಸವನ್ನು ಸಾರುತ್ತಿದೆ. ಬಹಳ ವರ್ಷಗಳ ಹಿಂದೆ ಕಳ್ಳರ ತಂಡವೊಂದು ರಾತ್ರೋ ರಾತ್ರಿ ಈ ಹಲಸಿನ ಮರ ಕದ್ದೊಯ್ಯಲು ಮುಂದಾಗಿದ್ದು ಎಷ್ಟೂ ಕೊಯ್ದರೂ ಮರ ತುಂಡರಿಸಲು ಸಾಧ್ಯವೇ ಆಗಲಿಲ್ಲ. ಆಯಾಸದಿಂದ ಅಲ್ಲಿಯೇ ಕುಳಿತುಕೊಂಡ ಸಂದರ್ಭದಲ್ಲಿ ಗರಗಸ ಪೂರ್ತಿ ರಕ್ತ ತುಂಬಿಕೊಂಡಿತ್ತು. ಇದನ್ನು ನೋಡಿದ ಕಳ್ಳರು ಅಲ್ಲಿಂದ ಓಡಿದರು ಎಂದು ಹೇಳಲಾಗುತ್ತಿದೆ. ಇದು ಅಲ್ಲದೇ ನಿಧಿಗಾಗಿ ಇಲ್ಲಿನ ಕೋಟೆಯನ್ನೂ ಅಗೆಯುವ ಪ್ರಯತ್ನ ನಡೆದಿದೆ, ಕೋಟೆ ಅಗೆಯಲು ಮುಂದಾದವರೆಲ್ಲರೂ ನಶಿಸಿ ಹೋಗಿದ್ದಾರೆ ಎಂಬ ಮಾತೂ ಇದೆ. ಶಂಖಮಲೆ ಹಾವು ಈ ಪರಿಸರದಲ್ಲಿ ತಿರುಗಾಟ ನಡೆಸುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

3 ಸಾವಿರಕ್ಕೂ ಹೆಚ್ಚು ಇತಿಹಾಸವಿರುವ ಇಲ್ಲಿ ರಾಜವಂಶಸ್ಥರು ಆಡಳಿತ ನಡೆಸುತ್ತಿತ್ತು. ಕಾಲಕ್ರಮೇಣ ಈ ದೈವಸ್ಥಾನ ದುಸ್ಥಿತಿಗೆ ಬಂತು. ಗುಡ್ಡಗಾಡು ಪ್ರದೇಶ, ಆದಿವಾಸಿ ಜನಾಂಗದವರು ಇಲ್ಲಿ ನೆಲೆಸಿದ್ದ ಇತಿಹಾಸವೂ ಇದೆ. ಇಲ್ಲಿನ ಮಾಯಿಲಕೋಟೆ ದೈವ ಸನ್ನಿಧಿಗೆ ಬಹಳಷ್ಟು ಮಹಿಮೆಯೂ ಇದೆ. ಇಲ್ಲಿನ ಜೀರ್ಣೋದ್ದಾರ ಕೆಲಸ ಆರಂಭಗೊಂಡ ಬಳಿಕ ಜನರಿಗೆ, ಕೆಲಸಗಾರರಿಗೆ ಹಲವು ಅನುಭವಗಳು ಆಗಿವೆ. ಇದೀಗ ಜಿರ್ಣೋದ್ದಾರ ಕೆಲಸ ನಡೆದು ಮೇ 11 ರಿಂದ13ರ ತನಕ ದೈವಗಳ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವ ನಡೆಯಲಿದೆ. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಗೌರವಾಧ್ಯಕ್ಷರು, ಜೀರ್ಣೋದ್ದಾರ ಸಮಿತಿ

LEAVE A REPLY

Please enter your comment!
Please enter your name here