ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೌಡಿಚ್ಚಾರು ಸಮೀಪದ ಮಡ್ಯಂಗಳ ತಿರುವಿನಲ್ಲಿ ರಸ್ತೆಯನ್ನು ಗಿಡಗಂಟಿಗಳು ಅತಿಕ್ರಮಿಸಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ರಸ್ತೆಯ ಒಂದು ಬದಿಗೆ ಮರವೊಂದು ಮುರಿದು ಬಿದ್ದಿದ್ದು ಇದನ್ನು ತೆಗೆಯದೇ ಹಾಗೆಯೇ ಇದೆ ಇದಲ್ಲದೆ ಗಿಡಗಂಟಿಗಳು ರಸ್ತೆಯ ಕಾಲು ಭಾಗದ ತನಕ ಬಂದಿದ್ದು ವಾಹನ ಸವಾರರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಮೊದಲೇ ತಿರುವು ರಸ್ತೆಯಾಗಿರುವುದರಿಂದ ಎದುರಿನಿಂದ ಬರುವ ವಾಹನ ಚಾಲಕರು ಗಿಡಗಂಟಿಗಳ ಪೊದೆಯನ್ನು ತಪ್ಪಿಸಲು ಯತ್ನಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕೆಲ ವರ್ಷಗಳ ಹಿಂದೆ ಮಡ್ಯಂಗಳದಲ್ಲಿ ರಸ್ತೆ ಬದಿಯ ತೆರೆದ ಕೆರೆಗೆ ಕಾರೊಂದು ಬಿದ್ದು ಜೀವ ಹಾನಿ ಸಂಭವಿಸಿದ್ದು ಇನ್ನೂ ಜನರ ಮನಸ್ಸಿನಲ್ಲಿದೆ. ಅಪಾಯ ಸಂಭವಿಸುವ ಮುನ್ನ ಈ ಗಿಡಗಂಟಿಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.