ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ-ಧಾರ್ಮಿಕ ಸಭೆ ಹಣ ಸಂಪಾದಿಸುವ ದಾರಿಯೂ ಧರ್ಮ ಮಾರ್ಗದಲ್ಲಿರಬೇಕು-ಮಹೇಶ್ ನಿಟಿಲಾಪುರ

0

     ಸಭಾಧ್ಯಕ್ಷತೆ ವಹಿಸಿದ್ದ ಪುರುಷೋತ್ತಮ ಪ್ರಭು ಮಾತನಾಡುತ್ತಿರುವುದು
  • ಬ್ರಹ್ಮಕಲಶೋತ್ಸವಕ್ಕೆ ಈಗಿಂದಲೇ ಸಿದ್ಧರಾಗೋಣ-ಧನ್ಯಕುಮಾರ್ ರೈ
  • ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ-ಅಶೋಕ್ ಕುಮಾರ್ ರೈ
  •  ಎಲ್ಲರೂ ಒಳ್ಳೆಯ ಮನಸ್ಸಿನಿಂದ ಒಂದಾಗೋಣ-ಪುರುಷೋತ್ತಮ ಪ್ರಭು

ಪುತ್ತೂರು: ಹಣ ಸಂಪಾದನೆ ಮಾಡುವ ದಾರಿಯೂ ಧರ್ಮದ ಮಾರ್ಗದಲ್ಲಿ ಇರಬೇಕು ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜ್‌ನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಹೇಳಿದರು.

34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮೇ ೭ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ಮಹೇಶ್ ನಿಟಿಲಾಪುರರವರು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ವಿಚಾರಗಳ ಸಾರವನ್ನು ವೈಯುಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸ್ವಾರ್ಥ ಎಂಬುದನ್ನು ಬಿಡಬೇಕು ಎಂದರು. ಆದರ್ಶಗಳನ್ನು ಬೋಧಿಸುವುದಕ್ಕಿಂತ ಹೆಚ್ಚಾಗಿ ನಡವಳಿಕೆಯಲ್ಲಿ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದ ಅವರು ಶಾಂತಿನಗರದಲ್ಲಿರುವ ಸಂಘಟನೆಯ ಒಗ್ಗಟ್ಟು, ಶಿಸ್ತು, ಅಚ್ಚುಕಟ್ಟುತನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಬ್ರಹ್ಮಕಲಶೋತ್ಸವಕ್ಕೆ ಸಿದ್ಧರಾಗೋಣ-ಧನ್ಯಕುಮಾರ್ ರೈ: ಮುಖ್ಯ ಅಭ್ಯಾಗತರಾಗಿದ್ದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತುರವರು ಮಾತನಾಡಿ, ಕಳೆದ ೧೩ ವರ್ಷಗಳ ಹಿಂದೆ ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಅರ್ಥಪೂರ್ಣವಾಗಿ ನಡೆದಿದೆ. ಊರಿನ, ಪರವೂರಿನ ಭಕ್ತರ ಸಹಕಾರದೊಂದಿಗೆ ದೇವಸ್ಥಾನದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇದೀಗ ಮತ್ತೆ ಬ್ರಹ್ಮಕಲಶೋತ್ಸವ ನಡೆಯಬೇಕಿದೆ. ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಈಗಿಂದಲೇ ಸಿದ್ಧರಾಗೋಣ ಎಂದರು.

ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ-ಅಶೋಕ್ ರೈ; ಮುಖ್ಯ ಅಭ್ಯಾಗತರಾಗಿದ್ದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಉತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ಡಿಸೆಂಬರ್ 20ರಿಂದ 25ರವರೆಗೆ ನಡೆಯಲಿರುವ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. 13 ವರ್ಷದ ಹಿಂದೆ ಶಾಂತಿನಗರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದಿದೆ. ಇಲ್ಲಿ ಸಣ್ಣ ದೇವಸ್ಥಾನವೊಂದನ್ನು ನಿರ್ಮಿಸುವ ಕನಸು ಅಂದು ಕಾಣಲಾಗಿತ್ತಾದರೂ ಎಲ್ಲರ ಸಹಕಾರದಿಂದ ಭವ್ಯವಾದ ದೇವಸ್ಥಾನ ನಿರ್ಮಾಣವಾಗಿದೆ. ಉತ್ತಮ ವ್ಯವಸ್ಥೆ, ಆಡಳಿತ ಮಂಡಳಿಯ ಉತ್ತಮ ಕಾರ್ಯ ನಿರ್ವಹಣೆಯೊಂದಿಗೆ ದೇವಸ್ಥಾನ ಬಹಳಷ್ಟು ಅಭಿವೃದ್ಧಿ ಕಂಡಿದೆ, ಕಳೆದ ವರ್ಷವೇ ಇಲ್ಲಿ ಬ್ರಹ್ಮಕಲಶೋತ್ಸವ ನಡೆಯಬೇಕಿತ್ತು. ಆದರೆ, ಕೊರೋನಾದ ಕಾರಣದಿಂದಾಗಿ ಎರಡು ಸಲ ಮುಂದೂಡಲ್ಪಟ್ಟಿದ್ದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಸಲು ಶಾಂತಿನಗರ ದೇವಸ್ಥಾನದವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದ ಅಶೋಕ್ ರೈಯವರು ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಬೇಕಿರುವ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಿಕೊಳ್ಳುವುದರ ಜತೆಗೆ ಬ್ರಹ್ಮಕಲಶೋತ್ಸವವನ್ನು ಅರ್ಥಪೂರ್ಣವಾಗಿ ನಡೆಸೋಣ ಎಂದು ಹೇಳಿದರು.

ಎಲ್ಲರೂ ಒಳ್ಳೆಯ ಮನಸ್ಸಿನಿಂದ ಒಂದಾಗೋಣ-ಪುರುಷೋತ್ತಮ ಪ್ರಭು:
ಸಭಾಧ್ಯಕ್ಷತೆ ವಹಿಸಿದ್ದ ದೇವಳದ ಮೊಕ್ತೇಸರ ಪುರುಷೋತ್ತಮ ಪ್ರಭು ಹನಂಗೂರುರವರು ಮಾತನಾಡಿ, ಊರಿನ ಸಮಸ್ತ ಜನರೂ ಒಳ್ಳೆಯ ಮನಸ್ಸಿನಿಂದ ಒಂದಾಗಿ ಒಗ್ಗಟ್ಟಾಗಿ ದೇವಸ್ಥಾನದ ಕಾರ್ಯ ನಿರ್ವಹಿಸೋಣ ಎಂದರು. ಮೊಕ್ತೇಸರರಾದ ಡಾ. ಬಿ.ರಘು, ರಾಜೀವ ರೈ ಅಲಿಮಾರ, ಬ್ರಹ್ಮಕಲಶೋತ್ಸವ ಸಮಿತಿಯ ಕೋರ್ ಕಮಿಟಿ ಸದಸ್ಯ ಗೋಪಾಲಕೃಷ್ಣ ಭಟ್ ನೆಕ್ಕಿಲಾಡಿ ಮತ್ತು ಬೈಲುವಾರು ಸಮಿತಿಯ ಮುಖ್ಯಸ್ಥ ಚಂದ್ರಶೇಖರ ಗೌಡ ಪನಿತೋಟರವರು ಅತಿಥಿಗಳನ್ನು ಗೌರವಿಸಿದರು. ಕು. ತೇಜಸ್ವಿನಿ ಕುಕ್ಕಿಲ ಪ್ರಾರ್ಥಿಸಿದರು. ಭರತ್ ಕುಮಾರ್ ಸ್ವಾಗತಿಸಿ, ಪ್ರೀತಂ ಶೆಟ್ಟಿ ಬಿ.ಕೆ. ವಂದಿಸಿದರು. ಸಂತೋಷ್ ಕುಮಾರ್ ಶಾಂತಿನಗರ, ಶೇಖರ ಪೂಜಾರಿ ಜೇಡರಪಾಲು ಮತ್ತು ಸೇಸಪ್ಪ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಜರಗಿತು. ನಂತರ ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಮೂಲ್ಕಿ ಇವರಿಂದ ಯಕ್ಷಗಾನ ಬಯಲಾಟ `ಗರುಡೋದ್ಭವ’ ನಡೆಯಿತು. ಧರ್ಮಾಧಿಕಾರಿಗಳು, ಕಲಾವಿದರು ಸೇರಿದಂತೆ ನೂರಕ್ಕೂ ಅಧಿಕ ಮಂದಿಯ ಚಿತ್ರ ಬಿಡಿಸಿ ಅವರಿಗೆ ಅರ್ಪಿಸಿರುವ ಲೀಫರ್ಟ್ ಕಲಾವಿದ, ರಾಜ್ಯಮಟ್ಟದ ಚಿನ್ನದ ಪದಕ ಪುರಸ್ಕೃತ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಜಿತ್ ಕುಮಾರ್ ಶಾಂತಿನಗರರವರು ತಾನು ಬಿಡಿಸಿದ ಚಿತ್ರವನ್ನು ಖ್ಯಾತ ಭಾಗವತರಾದ ಶ್ರೀಮತಿ ಕಾವ್ಯಶ್ರೀ ಅಜೇರುರವರಿಗೆ ಸಭಾ ಕಾರ್ಯಕ್ರಮದಲ್ಲಿ ಅರ್ಪಿಸಿ ಗೌರವಿಸಿದರು. ದೇವಳದ ಆಡಳಿತ ಮೊಕ್ತೇಸರ ಯು.ಜಿ.ರಾಧಾ ಸಹಿತ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ 6ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ, ತುಲಾಭಾರ ಸೇವೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ಜರಗಿತ್ತು. ಮೇ 7ರಂದು ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ, ನಾಗದೇವರು, ಶ್ರೀ ರಕ್ತೇಶ್ವರಿ, ಮಹಿಷಂದಾಯ, ಪಂಜುರ್ಲಿ, ಗುಳಿಗ ದೈವಗಳು ಹಾಗೂ ವೃಕ್ಷರಾಜ ಅಶ್ವತ್ಥ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮತ್ತು ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಿತು. ಇದರ ಮೊದಲು ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ಜರಗಿತು.

ಶಾಸಕ ಮಠಂದೂರು ಭೇಟಿ:
ಶಾಸಕ ಸಂಜೀವ ಮಠಂದೂರುರವರು ಮೇ 7ರಂದು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವದ ಮುಂಚಿತವಾಗಿ ದೇವಸ್ಥಾನದ ಸುತ್ತ ಇಂಟರ್‌ಲಾಕ್ ಅಳವಡಿಸಲು ಅನುದಾನ ಒದಗಿಸಿಕೊಡುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here