ಆರ್ಥಿಕ ಹಿನ್ನೆಲೆ ಇಲ್ಲದಿದ್ದರೂ ಭಕ್ತಿಯ ಕೊರತೆ ಎಲ್ಲಿಯೂ ಕಡಿಮೆ ಆಗಿಲ್ಲ-ಬಪ್ಪಳಿಗೆ ಶ್ರೀ ಮಹಾಮಾರಿಯಮ್ಮ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಚಿವ ಎಸ್ ಅಂಗಾರ

0

  • ಆರಾಧನ ಕೇಂದ್ರಗಳಿಗೆ ರೂ.5 ಕೋಟಿ ವಿನಿಯೋಗ – ಸಂಜೀವ ಮಠಂದೂರು
  • ಸರಕಾರದ ಯೋಜನೆ ಪಡೆಯುವಲ್ಲಿ ಯಶಸ್ವಿಯಾಗಿ – ಅಶೋಕ್ ಕುಮಾರ್ ರೈ
  • ಧಾರ್ಮಿಕ ಶಿಕ್ಷಣವೂ ಇಲ್ಲಿ ಸಿಗಬೇಕು – ವಿದ್ಯಾಗೌರಿ
  • ಮಹಾಲಿಂಗೇಶ್ವರ ದೇವರ ಪ್ರಥಮಾರ್ಥ ಸೇವಕರು – ಕೇಶವಪ್ರಸಾದ್ ಮುಳಿಯ
  • ಧರ್ಮದ ವಿಚಾರದಲ್ಲಿ ಮನಸ್ಸು ಒಂದಾಗಲಿ- ಚಂದ್ರಶೇಖರ್ ರಾವ್ ಬಪ್ಪಳಿಗೆ
  • ಪರಿವರ್ತನೆ ಇನ್ನಷ್ಟು ಆಗಲಿ – ಕಾವು ಹೇಮನಾಥ ಶೆಟ್ಟಿ
  • ಸನಾತನ ಹಿಂದು ಧರ್ಮದಲ್ಲಿ ನಾವೆಲ್ಲ ಒಂದು – ಪಿ.ಜಿ.ಜಗನ್ನಿವಾಸ ರಾವ್
  • ನಂಬಿಕೆಯಿಂದ ಕ್ಷೇತ್ರ ಬೆಳಗುತ್ತದೆ – ಎನ್.ಕೆ.ಜಗನ್ನಿವಾಸ ರಾವ್

 

ಪುತ್ತೂರು: ನಮ್ಮ ಜನಾಂಗದಲ್ಲಿ ವಿದ್ಯಾಭ್ಯಾಸದ ಜ್ಞಾನ, ಆರ್ಥಿಕ ಹಿನ್ನೆಲೆ ಇಲ್ಲದಿದ್ದರೂ ಭಕ್ತಿಯ ಕೊರತೆ ಎಲ್ಲಿಯೂ ಕಡಿಮೆ ಆಗಿಲ್ಲ. ಭಕ್ತಿಯ ಭಾವನೆ ನಮ್ಮ ಜನಾಂಗದಲ್ಲಿ ಪ್ರತಿ ಕಾಲದಲ್ಲೂ ಹೆಚ್ಚಾಗುತ್ತಿದೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್ ಅಂಗಾರ ಅವರು ಹೇಳಿದರು.‌

 


ಬಪ್ಪಳಿಗೆ ಶ್ರೀ ಮಹಾಮಾರಿಯಮ್ಮ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಮೇ ೮ರಂದು ರಾತ್ರಿ ಶ್ರೀ ಅಡೂರಜ್ಜ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನೂರಿನ್ನೂರು ವರ್ಷದ ಇತಿಹಾಸದಲ್ಲಿ ನಮ್ಮ ಜನಾಂಗದಲ್ಲಿ ಮೂಲಕ್ಕೆ ನೀರುವ ಕುಡಿಯುವ ಪದ್ಧತಿ ಇತ್ತು. ಇಂತಹ ಪದ್ಧತಿ ಇರುವಲ್ಲಿ ಆ ಕುಟುಂಬಕ್ಕೆ ಒಂದು ಮನೆತನವಿದೆ ಎಂದರ್ಥ. ಅಂತಹ ನೀತಿಯಿಂದ ನಡೆದು ಕೊಂಡು ದೈವತ್ವವನ್ನು ದೇವರಿಂದ ಒಳಿಸಿದ ಬಹಳ ಉದಾಹರಣೆಗಳಿವೆ. ನಮ್ಮ ಜನಾಂದದಲ್ಲಿ ಆರ್ಥಿಕವಾದ ಪರಿಸ್ಥಿತಿ ಇದ್ದರೂ ನೀತಿವಂತರಾಗಿ ಬದುಕುವ ಕೆಲಸ ಮಾಡಬೇಕು. ಈ ಸಂದರ್ಭ ನಂಬಿದವರಲ್ಲಿ ಇಂಬು ಕೊಡುತ್ತೇನೆಂಬ ಹಿರಿಯ ಮಾತಿಗೆ ಸತ್ಯವಿದೆ. ಅದಕ್ಕಾಗಿ ಭಕ್ತಿ ಬೇಕು. ಭಕ್ತಿಯೇ ನಮ್ಮನ್ನು ಉಳಿಸುತ್ತದೆ ಎಂದ ಅವರು ಭಕ್ತಿಯಿಂದ ಹಕಿದ ಕಲ್ಲಿಗೂ ಶಕ್ತಿ ನೆಲೆಯಾಗುತ್ತದೆ ಎಂದರು.

ಆರಾಧನ ಕೇಂದ್ರಗಳಿಗೆ ರೂ.೫ ಕೋಟಿ ವಿನಿಯೋಗ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಾಡಿಗೆ ವೈವಿಧ್ಯಮಯ ಸಂಸ್ಕೃತಿಯನ್ನು ಪರುಶುರಾಮ ಸೃಷ್ಟಿಯ ಕೊಟ್ಟ ಜಿಲ್ಲೆಯಲ್ಲಿ ಆದಿವಾಸಿ ಸಂಸ್ಕೃತಿಯ ನಾಡಾಗಿದೆ. ದಕ್ಷಿಣ ಕನ್ನಡ ಪರಂಪರೆ ಆದಿವಾಸಿ ಪರಂಪರೆಯಾಗಿದ್ದು, ಈ ಪರಂಪರೆ ಉಳಿಯಲು ಭೂತಾರಾಧನೆ ಅಗತ್ಯ. ಹಾಗಾಗಿ ಇವತ್ತು ದೈವಸ್ಥಾನಗಳ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ನಡೆಯಬೇಕಾಗಿದೆ. ಇಂತಹ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದ ಆರಾಧಾನಾ ಸಮಿತಿಯಿಂದ ಅನುದಾನ ಕೊಡಲಾಗುತ್ತದೆ. ಕಳೆದ ಮೂರು ವರ್ಷದಲ್ಲಿ ಪುತ್ತೂರು ವಿಧಾನ ಕ್ಷೇತ್ರದದಲ್ಲಿ ಸುಮರು ರೂ. ೫ ಕೋಟಿಯನ್ನು ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳ ಜೀರ್ಣೋದ್ದಾರ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. ಜೊತೆಗೆ ಅಲ್ಲಿಗೆ ಹೋಗುವ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದೆ. ಇವತ್ತು ಪುತ್ತೂರಿನ ಕಾಲೋನಿಗಳಲ್ಲಿ ಮೂಲನಿವಾಸಿಗಳಾಗಿ ವಾಸ್ತವ್ಯ ಹೊಂದಿದ್ದರೂ ಅವರ ಹೆಸರಿನಲ್ಲಿ ಜಾಗ ನೊಂದಾವಣೆ ಆಗಿಲ್ಲ. ಈ ನಿಟ್ಟಿನಲ್ಲಿ ಅಲ್ಲಿನ ಪಟ್ಟಾದಾರರನ್ನು ಗುರುತಿಸಿ ಮೂಲ ನಿವಾಸಿಗಳಿಗೆ ಜಾಗ ಕೊಡಲು ನಗರಸಭೆ ಅಧ್ಯಕ್ಷರು ಮತ್ತು ಪುಡಾ ಅಧ್ಯಕ್ಷರು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದಾಗ ಜಿಲ್ಲಾಧಿಕಾರಿಗಳೇ ಪುತ್ತೂರಿಗೆ ಬಂದು ಅಧ್ಯಾಯನ ಮಾಡಿ ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ. ಅದಕ್ಕಾಗಿ ದಿನವೂ ನಿಗದಿಯಾಗಿದೆ. ಮುಂದಿನ ದಿನ ಈ ಭಾಗದ ಎಲ್ಲಾ ಮೂಲನಿವಾಸಿಗಳಿಗೆ ಸ್ವಂತ ನಿವೇಶನವಾಗಲಿ ಎಂದರು.

 


ಸರಕಾರದ ಯೋಜನೆ ಪಡೆಯುವಲ್ಲಿ ಯಶಸ್ವಿಯಾಗಿ:
ಸಭಾಧ್ಯಕ್ಷತೆ ವಹಿಸಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಸಿಕ್ಕಿದೆ. ಅದಕ್ಕೆ ಕಾರಣ ಕ್ಷೇತ್ರ ಮಹಿಮೆ. ಹಾಗಾಗಿ ಇಲ್ಲಿ ನಾವೆಲ್ಲ ನಿಮಿತ್ತ ಮಾತ್ರ. ಈ ನಡುವೆ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ಅವರು ದೊಡ್ಡ ದಾನಿಗಳು. ಯಾಕೆಂದರೆ ಇವತ್ತಿನ ಕಾಲದಲ್ಲಿ ೧ ಚದರಅಡಿಯ ಜಾಗಕ್ಕೂ ಗಲಾಟೆ ಮಾಡುವುದು ಕಂಡು ಬರುತ್ತದೆ. ಇಂತಹ ಸಂದರ್ಭದಲ್ಲಿ ಜಗನ್ನಿವಾಸ ರಾವ್ ಅವರು ದೊಡ್ಡ ಮನಸ್ಸು ಮಾಡಿದ್ದಾರೆ. ಇವತ್ತು ಸರಕಾರದ ಯೋಜನೆ ಇದ್ದರೂ ಅದನ್ನು ಪಡೆಯುವಲ್ಲಿ ಈ ಸಮುದಾಯ ಬಹಳ ಹಿಂದಿದೆ. ಈ ನಿಟ್ಟಿನಲ್ಲಿ ಮುಂದಿನ ದಿನ ಹಿರಿಯರ ಮಾರ್ಗದರ್ಶನ ಪಡೆದು ಕೊಂಡು ಸಮುದಾಯ ಒಟ್ಟಾಗಿ ಆರೋಗ್ಯಕರ ಚರ್ಚೆಯ ಮೂಲಕ ಸರಕಾರದ ಸೌಲಭ್ಯ ಪಡೆಯುವಂತಹ ಕೆಲಸ ಮಾಡಬೇಕೆಂದರು.

ಧಾರ್ಮಿಕ ಶಿಕ್ಷಣವೂ ಇಲ್ಲಿ ಸಿಗಬೇಕು:
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ದೇವರ ಸೇವೆ ಮಾಡಿದಾಗ ಫಲ ಸಿಕ್ಕಿಯೇ ಸಿಗುತ್ತದೆ. ಈ ಕ್ಷೇತ್ರದಲ್ಲಿ ಧಾರ್ಮಿಕ ಶಿಕ್ಷಣವೂ ಸಿಗುವಂತಾಗಲಿ ಎಂದರು.

ಮಹಾಲಿಂಗೇಶ್ವರ ದೇವರ ಪ್ರಥಮಾರ್ಥ ಸೇವಕರು:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಪ್ರಕೃತಿಯೊಡನೆ ಜೀವನ ಮಾಡುವ ಧರ್ಮ ಇದ್ದರೆ ಅದು ಹಿಂದುಗಳಲ್ಲಿ ಮಾತ್ರ. ಇಂತಹ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಪ್ರಕೃತಿ ಧರ್ಮ ಇದೆ. ಇದರ ಜೊತೆಗೆ ಈ ಭಾಗದ ಜನರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮಾರ್ಥ ಸೇವಕರು ಎಂದ ಅವರು ಆದಷ್ಟು ಶೀಘ್ರವಾಗಿ ಇಲ್ಲಿ ಧಾರ್ಮಿಕ ಶಿಕ್ಷಣ ನಡೆಯಬೇಕೆಂದರು.

ಧರ್ಮದ ವಿಚಾರದಲ್ಲಿ ಮನಸ್ಸು ಒಂದಾಗಲಿ:
ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ಮಾತನಾಡಿ ಸಣ್ಣಗುಡಿಯಿಂದ ಇವತ್ತು ಬೃಹತ್ ಎತ್ತರವಾಗಿ ಬೆಳೆಯುವ ಮೂಲಕ ಕ್ಷೇತ್ರದಲ್ಲಿ ಭಕ್ತಿಯ ಭಾವನೆ ಗಟ್ಟಿಯಾಗಿದೆ. ಧರ್ಮದ ವಿಚಾರದಲ್ಲಿ ಎಲ್ಲರ ಮನಸ್ಸು ಒಂದಾಗಬೇಕೆಂದು ಹೇಳಿದರು.

 

ಪರಿವರ್ತನೆ ಇನ್ನಷ್ಟು ಆಗಲಿ:

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ ಇತಿಹಾಸದೊಂದಿಗೆ ಕ್ಷೇತ್ರ ಮಹಿಮೆಯಿಂದ ಕ್ಷೇತ್ರ ಬೆಳಗಿದೆ. ಇನ್ನಷ್ಟು ಪರಿವರ್ತನೆ ಆಗಬೇಕು. ಯಾಕೆಂದರೆ ಇದು ಬದಲಾವಣೆಯ ಪರ್ವ ಎಂದರು.

ಸನಾತನ ಹಿಂದು ಧರ್ಮದಲ್ಲಿ ನಾವೆಲ್ಲ ಒಂದು:
ನಗರಸಭಾ ಸದಸ್ಯರಾಗಿರುವ ಕ್ಷೇತ್ರದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಸನಾತನ ಹಿಂದು ಧರ್ಮದಲ್ಲಿ ನಾವೆಲ್ಲ ಒಂದೇ. ಪ್ರಶಾಂತವಾದ ಕ್ಷೇತ್ರದಲ್ಲಿ ಧಾರ್ಮಿಕ ಶಿಕ್ಷಣ ಬೆಳೆಗಲಿ ಎಂದರು.

ನಂಬಿಕೆಯಿಂದ ಕ್ಷೇತ್ರ ಬೆಳಗುತ್ತದೆ:
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್ ಕೆ ಜಗನ್ನಿವಾಸ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಂಬಿಕೆಯಿಂದ ಕ್ಷೇತ್ರ ಬೆಳಗುತ್ತದೆ ಎಂಬುದಕ್ಕೆ ಬಪ್ಪಳಿಗೆ ಮಹಾಮಾರಿಯಮ್ಮ ದೇವಸ್ಥಾನ ಸಾಕ್ಷಿಯಾಗಿದೆ. ಕೊರೋನಾ ಸಂದರ್ಭದಲ್ಲಿ ಆರಂಭಗೊಂಡ ಜೀರ್ಣೋದ್ದಾರ ಕಾರ್ಯ ಕೋವಿಡ್ ಮುಗಿದ ಬಳಿಕ ವೇಗ ಸಿಕ್ಕಿತ್ತು. ಇವತ್ತು ಬ್ರಹ್ಮಕಲಶೋತ್ಸವ ನಡೆದಿದೆ. ಮುಂದೆ ಈ ಭಾಗದಲ್ಲಿ ಕ್ಷೇತ್ರ ಬೆಳಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡುವಲ್ಲಿ ಅನೇಕ ಮಂದಿ ಸಲಹೆ ನೀಡಿದ್ದಾರೆ. ಅದನ್ನೆಲ್ಲ ನೀವು ಪಾಲಿಸುವಂತಾಗಬೇಕೆಂದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿ ಸುರೇಶ್ ಬಪ್ಪಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ದೇವಾಲಯಕ್ಕೆ ಐತಿಹ್ಯವಿದೆ. ಅದೇ ರೀತಿ ಬಪ್ಪಳಿಗೆ ಕ್ಷೇತ್ರಕ್ಕೂ ಐತಿಹ್ಯವಿದೆ. ಮುಲಿ ಹುಲ್ಲಿನ ಛಾವಣಿಯಲ್ಲಿದ್ದ ಮಹಾಮಾಯಿ ಕ್ಷೇತ್ರ ಇವತ್ತು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ ಎಂದ ಅವರು ಕ್ಷೇತ್ರದ ಕಾರ್ಣಿಕದ ಕುರಿತು ಮಾಹಿತಿ ನೀಡಿದರು.

ಸನ್ಮಾನ:
ಕ್ಷೇತ್ರದ ವಾಸ್ತು ರಚನೆ ಮಾಡಿದ ವಾಸ್ತು ಶಿಲ್ಪಿ ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಹಲವು ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಬೊಮ್ಮಣ್ಣ, ಭಾಸ್ಕರ ನೆಲ್ಲಿಗುಂಡಿ, ಸಂಜೀವ ನೆಲ್ಕಿಗುಂಡಿ, ಮೋಹನ್ ನೆಲ್ಲಿಗುಂಡಿ ಮತ್ತು ಇಂದಿರಾ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರಕ್ಕೆ ಭೂಮಿಯನ್ನು ನೀಡಿದ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಜೀರ್ಣೋದ್ದಾರ ಕಾರ್ಯಕ್ಕೆ ಸಹಕರಿಸಿದ ಬಪ್ಪಳಿಗೆ, ನೆಲ್ಲಿಗುಂಡಿ, ದರ್ಖಾಸಿನ ಮೂರು ಕಾಲೋನಿಯ ಯುವಕರ ತಂಡ ಮತ್ತು ಕರಸೇವಕರಿಗೆ ಶಾಲು ಹಾಕಿ ಗೌರವಿಸಲಾಯಿತು. ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿ ಸಂಚಾಲಕ ಸಂಜೀವ ನೆಲ್ಲಿಗುಂಡಿ ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಮೋಹನ್ ನೆಲ್ಲಿಗುಂಡಿ, ಬೊಮ್ಮಣ್ಣ ನೆಲ್ಲಿಗುಂಡಿ, ದಯಾನಂದ ನೆಲ್ಲಿಗುಂಡಿ, ಕುಸುಮಾ ಗೋಪಾಲ್ ದರ್ಖಾಸ್, ಭಾಸ್ಕರ್ ನೆಲ್ಲಿಗುಂಡಿ, ಸುಮಂತ್ ನೆಲ್ಲಿಗುಂಡಿ, ಭಾಸ್ಕರ್, ಲೋಲಾಕ್ಷ ಪಿ, ರಾಜನ್ ದರ್ಖಾಸ್ ಅತಿಥಿಗಳನ್ನು ಗೌರವಿಸಿದರು. ನಂದಿತಾ ದರ್ಖಾಸ್ ಪ್ರಾರ್ಥಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್ ಕೆ ಜಗನ್ನಿವಾಸ ರಾವ್ ಸ್ವಾಗತಿಸಿದರು. ಮೋಹನ್ ನೆಲ್ಲಿಗುಂಡಿ ವಂದಿಸಿದರು. ಸುಂದರ ನೆಲ್ಲಿಗುಂಡಿ ಕಾರ್ಯಕ್ರಮ ನಿರೂಪಿಸಿದರು.

ಸಚಿವ ಎಸ್ ಅಂಗಾರ ರೂ. 25ಸಾವಿರ ದೇಣಿಗೆ
ಸಚಿವ ಎಸ್ ಅಂಗಾರ ಅವರು ಸಭಾ ವೇದಿಕೆಯಿಂದ ತೆರೆಳಿದ ಬಳಿಕ ಮಹಾಮಾರಿಯಮ್ಮ ದೇವಸ್ಥಾನಕ್ಕೆ ತೆರಳಿ ಕೆಲಸ ಕಾರ್ಯಗಳನ್ನು ವೀಕ್ಷಣೆ ಮಾಡಿ ರೂ. ೨೫ಸಾವಿರವನ್ನು ದೇಣಿಗೆಯಾಗಿ ನೀಡಿದರು. ಈ ಕುರಿತು ಕಾರ್ಯಕ್ರಮದ ನಿರೂಪಕರು ಸಭೆಯಲ್ಲಿ ಘೊಷಣೆ ಮಾಡಿದರು.

ಇಂಟರ್‌ಲಾಕ್ ಅಳವಡಿಕೆಗೆ ಶಾಸಕರಿಂದ ರೂ. ೧೦ಲಕ್ಷ ಅನುದಾನ
ಮಹಾಮಾರಿಯಮ್ಮ ದೇವಸ್ಥಾನದ ಅಂಗಣದ ಸುತ್ತು ಇಂಟರ್‌ಲಾಕ್ ಅಳವಡಿಕೆಗೆ ಶಾಸಕ ಸಂಜೀವ ಮಠಂದೂರು ಅವರು ರೂ. ೧೦ ಲಕ್ಷ ಅನುದಾನ ನೀಡುವುದಾಗಿ ಸಭಾ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು. ಇಂಟರ್‌ಲಾಕ್ ಅಳವಡಿಸಲು ಭೂಮಿ ಮಾಲಕ ನಟ್ಟೋಜ ಮನೆತನದವರು ಒಪ್ಪಿಗೆಯನ್ನು ಇದೇ ಸಂದರ್ಭದಲ್ಲಿ ಅವರು ಕೇಳಿಕೊಂಡರು.

LEAVE A REPLY

Please enter your comment!
Please enter your name here