ನೆಲ್ಯಾಡಿ: ಅಬ್ರಹಾಂ ವರ್ಗೀಸ್-ಆನಿ ವರ್ಗೀಸ್ ವೈವಾಹಿಕ ಬದುಕಿನ ಸುವರ್ಣ ಸಂಭ್ರಮಾಚರಣೆ

0

 

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿ, ನಿವೃತ್ತ ಪ್ರಾಂಶುಪಾಲರೂ ಆಗಿದ್ದು ಪ್ರಸ್ತತ ಸಂಸ್ಥೆಯ ಸಂಚಾಲಕರಾಗಿರುವ ಅಬ್ರಹಾಂ ವರ್ಗೀಸ್ ಹಾಗೂ ನಿವೃತ್ತ ಮುಖ್ಯಶಿಕ್ಷಕಿಯಾಗಿರುವ ಆನಿ ವರ್ಗೀಸ್ ದಂಪತಿಯ ವೈವಾಹಿಕ ಬದುಕಿನ 50ನೇ ವರ್ಷಾಚರಣೆ ಮೇ. 8ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ದೀಪಕ್ ಹಾಗೂ ಪ್ರೀತಿಕಲಾರವರ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅ.ವಂ. ಸಿ.ಎಂ.ಜಾರ್ಜ್ ಕೋರ್ ಎಪಿಸ್ಕೋಪಾರವರು ಪ್ರಾರ್ಥನೆ ನೆರವೇರಿಸಿದರು. ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್ ದಂಪತಿ ಪುತ್ರ ಡಾ.ಅಭಿಜಿತ್ ಸ್ವಾಗತಿಸಿದರು. ಕ್ಯಾಲಿಕಟ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಹೆಚ್.ಜಿ.ಪೌಲೋಸ್ ಮಾರ್ ಐರಾನಿಯೋಸ್ ಮೆಟ್ರೋಪಾಲಿಟನ್‌ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್ ದಂಪತಿ ಹಾರ ಬದಲಾಯಿಸಿ, ಕೇಕ್ ಕತ್ತರಿಸಿ ಮದುವೆಯ ಸುವರ್ಣ ಸಂಭ್ರಮಾಚರಿಸಿಕೊಂಡರು. ಅಬ್ರಹಾಂ ವರ್ಗೀಸ್-ಆನಿ ವರ್ಗೀಸ್ ದಂಪತಿ ಮಗ ಡಾ.ಅಭಿಜಿತ್, ಸೊಸೆ ಡಾ.ಜ್ಯೂಲಿ, ಪುತ್ರಿ ಬಿಂದು, ಅಳಿಯ ಆಂಜೀವ್, ಮೊಮ್ಮಕ್ಕಳಾದ ಮಿಷಲ್, ಜೋರ್ಜ್, ರೂತ್, ಬಿನನ್, ಬಿಧನ್ ಹಾಗೂ ಕುಟುಂಬಸ್ಥರು, ಸಂತಜಾರ್ಜ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ನಿವೃತ್ತ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಪೂರ್ವ ವಿದ್ಯಾರ್ಥಿಗಳು, ಉದನೆ ಪೋಳಿಕಾರ್ಪೋಸ್ ಶಾಲಾ ಆಡಳಿತ ಮಂಡಳಿ, ವೈಎಂಸಿಎ, ರೋಟರಿ ಕ್ಲಬ್ ಪುತ್ತೂರು ಸಿಟಿ, ನೆಲ್ಯಾಡಿ ಲೀಜಿಯನ್ ಸೀನಿಯರ್ ಛೇಂಬರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಜೆಸಿಐ ನೆಲ್ಯಾಡಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಬ್ರಹಾಂ ವರ್ಗೀಸ್‌ರವರ ಹಿತೈಷಿಗಳು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿ ಅಬ್ರಹಾಂ ವರ್ಗೀಸ್ ದಂಪತಿಗೆ ಹೂ ಗುಚ್ಛ, ಸ್ಮರಣಿಕೆ ನೀಡಿ ಗೌರವಿಸಿದರು.

ಅಬ್ರಹಾಂ ವರ್ಗೀಸ್ ದಂಪತಿಗೆ ಶುಭಹಾರೈಕೆ ಮಾಡಿ ಮಾತನಾಡಿದ ಡಾ.ಗೋವಿಂದ ಪ್ರಸಾದ್ ಕಜೆ ಅವರು, ಅಬ್ರಹಾಂ ವರ್ಗೀಸ್‌ರವರು ಸ್ವಚ್ಛ ಮನಸ್ಸಿನ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಶೈಕ್ಷಣಿಕ, ಸಾಹಿತ್ಯ, ಕೃಷಿ, ಸ್ಕೌಟ್ಸ್ ಮತ್ತು ಗೈಡ್ಸ್, ನಾಟ್ಯ, ಸಂಗೀತ, ಯಕ್ಷಗಾನಗಳಲ್ಲಿ ವಿಶೇಷ ಆಸಕ್ತಿ ವಹಿಸಿಕೊಂಡಿದ್ದಾರೆ. ಜೆಸಿಐ, ಲಯನ್ಸ್, ರೋಟರಿಯಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡಿರುವ ಅಬ್ರಹಾಂ ವರ್ಗೀಸ್‌ರವರು ನೆಲ್ಯಾಡಿಯಲ್ಲೂ ಇಂತಹ ಸಂಘಟನೆಗಳ ಆರಂಭಕ್ಕೆ ಕಾರಣಕರ್ತರಾಗಿದ್ದಾರೆ. ಯಾವುದೇ ವಿಚಾರವಿದ್ದರೂ ಅಬ್ರಹಾಂ ವರ್ಗೀಸ್‌ರವರು ಅಂತರಾಳದಿಂದ ಪ್ರಾರ್ಥಿಸುತ್ತಾರೆ, ಪರಿಶ್ರಮಿಸುತ್ತಾರೆ. ನಂತರ ಪ್ರಕಾಶಿಸುತ್ತಾರೆ. ಇದುವೆ ಅವರ ಜೀವನದ ಧ್ಯೇಯವಾಗಿದೆ ಎಂದು ಹೇಳಿದ ಅವರು, ವೈವಾಹಿಕ ಬದುಕಿನ ೫೦ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್ ದಂಪತಿಗೆ ದೇವರು ದೀರ್ಘಕಾಲ ಆಯುರಾರೋಗ್ಯ ಕರುಣಿಸಲಿ ಎಂದು ಹೇಳಿದರು. ವಿವಿಧ ಸಂಘಟನೆಗಳ ಪ್ರಮುಖರು, ಕುಟುಂಬಸ್ಥರು, ಹಿತೈಷಿಗಳು ಅಬ್ರಹಾಂ ವರ್ಗೀಸ್-ಅನಿ ವರ್ಗೀಸ್ ದಂಪತಿಗೆ ಶುಭಹಾರೈಕೆ ಮಾಡಿದರು.

ಕ್ಯಾಲಿಕಟ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಹೆಚ್.ಜಿ.ಪೌಲೋಸ್ ಮಾರ್ ಐರಾನಿಯೋಸ್ ಮೆಟ್ರೋಪಾಲಿಟನ್, ಅಬ್ರಹಾಂ ವರ್ಗೀಸ್‌ರವರ ಹಿರಿಯ ಸಹೋದರ ಮಂಗಳೂರಿನಲ್ಲಿರುವ ವೆಟ್ಟಿಕುನ್ನೇಲ್ ಅಬ್ರಹಾಂ ವರ್ಕಿ, ಅವರ ಪತ್ನಿ ಸಾರಮ್ಮ, ಸಹೋದರಿ ಬೈಂದೂರಿನಲ್ಲಿರುವ ಸೂಸಮ್ಮ, ಅವರ ಪತಿ ಎಂ.ಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ರಹಾಂ ವರ್ಗೀಸ್‌ರವರು ಕೃತಜ್ಞತೆ ಸಲ್ಲಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.,ಯವರು ಅಬ್ರಹಾಂ ವರ್ಗೀಸ್ ಹಾಗೂ ಅನಿ ವರ್ಗೀಸ್‌ರವರ ಪರಿಚಯ, ಸಾಧನೆಯ ಪರಿಚಯದೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಧರ್ಮಗುರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಅಬ್ರಹಾಂ ವರ್ಗೀಸ್‌ರವರ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಸಾಕ್ಷ್ಯ ಚಿತ್ರ ಪ್ರದರ್ಶನ:
೭೫ರ ಹರೆಯದಲ್ಲಿರುವ ಅಬ್ರಹಾಂ ವರ್ಗೀಸ್‌ರವರ ಬಾಲ್ಯದಿಂದ ಇಲ್ಲಿಯ ತನಕದ ಜೀವನದ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಈ ಸಂದರ್ಭದಲ್ಲಿ ಮಾಡಲಾಯಿತು. ಅನಿ ವರ್ಗೀಸ್‌ರವರ ಕುರಿತ ಸಾಕ್ಷ್ಯ ಚಿತ್ರ, ವೈವಾಹಿಕ ಬದುಕಿನ ಸುವರ್ಣ ಸಂಭ್ರಮದಲ್ಲಿರುವ ಅಬ್ರಹಾಂ ವರ್ಗೀಸ್ ದಂಪತಿಗೆ ವಿವಿಧ ಕಡೆಯ ಗಣ್ಯರು ವಿಡಿಯೋ ಮೂಲಕ ಮಾಡಿರುವ ಶುಭ ಹಾರೈಕೆಯನ್ನೂ ಪ್ರದರ್ಶಿಸಲಾಯಿತು. ಪೇಪರ್ ಕಟ್ಟಿಂಗ್‌ನಲ್ಲಿ ಭಾವಚಿತ್ರ ಚಿತ್ರೀಕರಿಸುವ ಮೂಲಕ ವಿಶ್ವದಾಖಲೆ ಬರೆದಿರುವ ನೆಲ್ಯಾಡಿಯ ಯುವಕ ಪರೀಕ್ಷಿತ್‌ರವರು ಅಬ್ರಹಾಂ ವರ್ಗೀಸ್ ಹಾಗೂ ಅನಿವರ್ಗೀಸ್‌ರವರ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಶ್ರದ್ಧಾ ಭಟ್ ಹಾಗೂ ಮೆರ್‍ಲಿನ್ ಮಂಗಳೂರು ವಿವಿಧ ಹಾಡುಗಳ ಮೂಲಕ ಮನರಂಜಿಸಿದರು. ಶಾಲಾ ದ್ವಾರದ ಬಳಿ ಅಬ್ರಹಾಂ ವರ್ಗೀಸ್-ಆನಿ ವರ್ಗೀಸ್ ದಂಪತಿಯನ್ನು ಸ್ವಾಗತಿಸಿ, ಆರತಿ ಬೆಳಗಿಸಿ, ಬಿಷಪ್, ಧರ್ಮಗುರುಗಳು ಹಾಗೂ ಅತಿಥಿಗಳ ಜೊತೆಗೆ ವೇದಿಕೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.

LEAVE A REPLY

Please enter your comment!
Please enter your name here