ನೆಲ್ಯಾಡಿ: ಜೀರ್ಣೋದ್ಧಾರಗೊಂಡಿರುವ ಇಲ್ಲಿಗೆ ಸಮೀಪದ ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ಕೋಟೆ ಚಾಮುಂಡಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಮೇ 11, 12 ಮತ್ತು 13ರಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಮೇ. 11ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಕೊಕ್ಕಡ, ನಿಡ್ಲೆ,ಶಿಶಿಲ,ಹತ್ಯಡ್ಕ,ಶಿಬಾಜೆ, ಪಟ್ರಮೆ ಗ್ರಾಮಸ್ಥರಿಂದ ಹೊರೆಕಾಣಿಕೆ ಹಾಗೂ ದೈವಗಳ ನೂತನ ಆಭರಣಗಳ ಮತ್ತು ಪರಿಕರಗಳ ಮೆರವಣಿಗೆ ಕೊಕ್ಕಡ ಜಂಕ್ಷನ್ನಿಂದ ಮಾಯಿಲಕೋಟೆ ದೈವ ಸನ್ನಿಧಿಗೆ ಬರಲಿದೆ. ಸಂಜೆ ವೈದಿಕ ವರ್ಗದವರನ್ನು ಮೆರವಣಿಗೆ ಮೂಲಕ ಅಶ್ವತ್ಥಕಟ್ಟೆಯಿಂದ ಮಾಯಿಲಕೋಟೆಗೆ ಮೆರವಣಿಗೆ ಮೂಲಕ ಕರೆ ತರುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಮೇ 12 ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮ, ಭಜನೆ, ತ್ರಿಕಾಲ ಪೂಜೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಕೌಕ್ರಾಡಿ, ನೆಲ್ಯಾಡಿ, ಕೊಣಾಲು, ಗೋಳಿತ್ತೊಟ್ಟು, ಬಲ್ಯ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನೆಲ್ಯಾಡಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಮಾಯಿಲಕೊಟೆ ದೈವ ಸನ್ನಿಧಿಗೆ ಬರಲಿದೆ. ರಾತ್ರಿ ವೈದಿಕ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮ:
ಮೇ. 12ರಂದು ಸಂಜೆ ೭ರಿಂದ ಧಾರ್ಮಿಕ ಸಭೆ ನಡೆಯಲಿದೆ. ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಲಿದ್ದಾರೆ. ಸಚಿವರಾದ ಸುನಿಲ್ ಕುಮಾರ್, ಎಸ್.ಅಂಗಾರ, ಸಂಸದ ನಳಿನ್ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯರಾದ ಕೆ.ಪ್ರತಾಪ ಸಿಂಹ ನಾಯಕ್, ಕೆ.ಹರೀಶ್ಕುಮಾರ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೇ.13ಪ್ರತಿಷ್ಠೆ:
ಮೇ. 13ರಂದು ಬೆಳಿಗ್ಗೆ ಮಿಥುನ ಲಗ್ನದಲ್ಲಿ ಕೆ.ವಿ.ಪದ್ಮನಾಭ ತಂತ್ರಿ ಎಡಮನೆ, ಅರವತ್ತು ನೀಲೇಶ್ವರ ಕೇರಳ ಇವರ ನೇತೃತ್ವದಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವ, ಕಲಶಾಭಿಷೇಕ ನಡೆಯಲಿದೆ. ಸಂಜೆ ಕಲ್ಲಡ್ಕ ವಿಠಲ ನಾಯಕ್ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ರಾತ್ರಿ ಕೋಟೆ ಚಾಮುಂಡಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿ ಹಾಗೂ ಪ್ರತಿಷ್ಠಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.