ವಿದ್ವಾನ್ ಎಸ್.ಬಿ ಖಂಡಿಗರವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ

0

 

ಪುತ್ತೂರು : ಸಾಹಿತಿ, ಕಲಾವಿದ ವಿದ್ವಾನ್ ಎಸ್.ಬಿ.ಖಂಡಿಗರವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಲಭಿಸಿದೆ. ಸುಬ್ರಹ್ಮಣ್ಯ ಭಟ್ ಖಂಡಿಗ. ಇವರು ಎಸ್.ಬಿ ಖಂಡಿಗ ಎಂದೇ ಪರಿಚಿತರು. ೩೭ ವರ್ಷ ಶಾಲಾಧ್ಯಾಪಕರಾಗಿ ಎರಡು ವರ್ಷ ಕಿರಿಯ ಕಲಾಶಾಲೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಾಹಿತ್ಯ ಕಲಾರಂಗದಲ್ಲಿ ಅತ್ಯಂತ ಆಸಕ್ತಿ ಬೆಳೆಸಿಕೊಂಡು ಅವುಗಳನ್ನೇ ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಸಮಾಜ ಸೇವಕನಾಗಿ, ನಾಟಕಗಳಲ್ಲಿ ಪಾತ್ರಧಾರಿಯಾಗಿ ಆಕಾಶವಾಣಿ ಕಲಾವಿದನಾಗಿ, ಯಕ್ಷಗಾನದಲ್ಲಿ ಅರ್ಥಧಾರಿಯಾಗಿ, ಪುರಾಣ ಪ್ರವಚನಕಾರನಾಗಿ ಕವಿಗೋಷ್ಠಿಗಳಲ್ಲಿ ಕವಿಯಾಗಿ ಮತ್ತು ಭಾಷಣಕಾರನಾಗಿ ಹಲವಾರು ಕ್ಷೇತ್ರಗಳಲ್ಲಿ ಶೋಭಿಸಿದ್ದಾರೆ. ಇವರು ಹಲವಾರು ಹೆಸರುವಾಸಿ ಸಂಸ್ಥೆಗಳಿಂದಲೂ ಮಹನೀಯ ವ್ಯಕ್ತಿಗಳಿಂದಲೂ ಪಡೆದಂತಹ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರಿಗೆ ಸಾಧಕರತ್ನ ಪ್ರಶಸ್ತಿ, ಉತ್ತಮ ಓದುಗ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗಳು ದೊರೆತಿದೆ. ಕಡಲ ತೀರದಿಂದ ಹಿಮಗಿರಿಯೆಡೆಗೆ (ಅಖಿಲ ಭಾರತ ಪ್ರವಾಸ ಕಥನ), ನೆನಪುಗಳು ಬಂದಂತೆ (ಆತ್ಮ ಕಥನ), ಚಿಂತನ ಚಂದ್ರಿಕೆ (ಚಿಂತನಗಳು) ಕೃತಿಗಳನ್ನು ರಚಿಸಿರುತ್ತಾರೆ.

ಇವರಿಗೆ ೨೦೧೭ರ ಏ.೧೭ರಂದು ಮೈಸೂರಿನಲ್ಲಿ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಶ್ರೀ ಪ್ರಧಾನ್ ಗುರುದತ್ತ ಹಾಗೂ ಸಿ.ಸಿ.ಕೆಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಇವರನ್ನು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪರವರು ಸನ್ಮಾನಿಸಿದರು.

ಎಸ್.ಬಿ ಖಂಡಿಗೆ ಅವರು ವಿಖ್ಯಾತ ಸಾಹಿತಿಯಾಗಿದ್ದಾರೆ. ಇವರು ಬರೆದ ಕಡಲ ತೀರದಿಂದ ಹಿಮಗಿರಿಯೆಡೆಗೆ ಎಂಬ ಪ್ರವಾಸ ಕಥನವೊಂದು ಅದ್ಭುತ ಕೃತಿ. ಏಕೆಂದರೆ ಅದು ಈಗಾಗಲೇ ಎರಡು ಆವೃತ್ತಿಗಳನ್ನು ಪಡೆದಿದೆ. ಅವರು ಕೈಗೊಂಡ ಅಸೇತು ಹಿಮಾಚಲ ಪ್ರವಾಸ ಅವರ ಬಹುಮುಖ ವ್ಯಕ್ತಿತ್ವಕ್ಕೆ ಭದ್ರ ಬುನಾದಿಯನ್ನು ಇತ್ತಿದೆ. ಇವರು ಬರೆದ ಆತ್ಮಚರಿತ್ರೆ ಅಚ್ಚಿನಲ್ಲಿದೆ. ಇದರಿಂದ ಖಂಡಿಗರವರ ಸರ್ವತೋಮುಖ ವ್ಯಕ್ತಿತ್ವದ ಅನುಭವಗಳ ಧೀರ್ಘ ಸರಮಾಲೆಯಿಂದ ಓದುಗರು ಸಂಪನ್ನರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯದ್ವಾದಾಚರತಿ ಶೇಷ್ಠೋ ತತ್ತದೇವೇತರೋಜನ ಎಂಬ ಗೀತೋಕ್ತಿ ಇವರಿಗೆ ಅನ್ವರ್ಥವಾಗಿರುತ್ತದೆ. ಇವರು ನಿತ್ಯ ಸಾಹಿತ್ಯ ಕೃಷಿಯಲ್ಲಿ ನಿರತರಾಗಿರುವ ಯೋಗಿ. ಇವರ ಆತ್ಮಚರಿತ್ರೆ ಸಹೃದಯರಿಗೆ ಭೂರಿಭೋಜನವಾಗಲಿದೆಯೆಂಬುದು ನಿಶ್ಚಯ. ಇವರ ಚಿಂತನ ಚಂದ್ರಿಕೆ ಎಂಬುದು ಒಂದು ವೈಚಾರಿಕ ಕೃತಿ. ಇವರು ಇನ್ನೂರಕ್ಕೂ ಮಿಕ್ಕಿ ಚಿಂತನಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಹಲವು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಚಿಂತನ ಚಂದ್ರಿಕೆಯಲ್ಲಿರುವ ಪ್ರತಿಯೊಂದು ಪ್ರಬಂಧವೂ ಕೂಡ ಕಡಿದ ಶಿಲ್ಪದಂತಿದೆ.

ಎಸ್.ಬಿ ಖಂಡಿಗ ಅವರು ನಿರ್ಭೀತ, ವಿನಯಾನ್ವಿತ, ಸೋಗಿಲ್ಲದ ಮತ್ತು ಮುಖವಾಡವಿಲ್ಲದ ಉತ್ತಮ ಚಿಂತಕನೆಂಬುದು ಅವರ ಪ್ರತಿಯೊಂದು ಪ್ರಬಂಧದಲ್ಲೂ ವ್ಯಕ್ತವಾಗುತ್ತದೆ. ಅವರ ಬಹುಮುಖ ಪ್ರತಿಭೆ ಮತ್ತು ಸರ್ವತೋಮುಖ ವ್ಯಕ್ತಿತ್ವ ಎಲ್ಲಿ ಪ್ರಬಂಧಗಳಲ್ಲಿ ರಾರಾಜಿಸುತ್ತದೆ. ಅವರು ಜೀವನವನ್ನು ಬಹಳ ಆರೋಗ್ಯಪೂರ್ಣ ದೃಷ್ಠಿಯಿಂದ ವೀಕ್ಷಿಸುತ್ತಾರೆ. ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸಿ ತನ್ನದೇ ಆದ ದೃಷ್ಠಿಯಿಂದ ಅರ್ಥೈಸುವ ಅಸಾಮಾನ್ಯ ಪ್ರತಿಭೆ ಅವರಲ್ಲಿದೆ. ಇದರಲ್ಲಿ ಲಘುಹಾಸ್ಯ ಗುಪ್ತಗಾಮಿನಿಯಾಗಿ ಹರಿಯತ್ತದೆಯಲ್ಲದೆ ತನ್ನದೇ ಖಚಿತ ಅಭಿಪ್ರಾಯಗಳು ರಂಗು ಕೊಡುತ್ತದೆ. ಅವರ ಪಾಂಡಿತ್ಯ ಎಲ್ಲೆಡೆಯಲ್ಲೂ ಹರಡಿಕೊಂಡು ಮೆರುಗು ಕೊಡುತ್ತದೆ. ಖಚಿತತೆ ಈ ಪ್ರಬಂಧ ಸಂಕಲನದ ವೈಶಿಷ್ಟ್ಯ, ಯಾವ ಸಂಶಯಕ್ಕೂ ಎಡೆಕೊಡದೆ ಇದಮಿತ್ಯಂ ಎಂಬ ಶೈಲಿ ಕಾಣುತ್ತಿದೆ.

LEAVE A REPLY

Please enter your comment!
Please enter your name here