- ಅರ್ಹತೆಗೆ ತಕ್ಕ ಉದ್ಯೋಗ ಸಿಗದ ಬೇಸರವೇ ಕೃತ್ಯಕ್ಕೆ ಕಾರಣ?
ಉಪ್ಪಿನಂಗಡಿ: ಅರ್ಹತೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲವೆಂದು ಉಡುಪಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಿಷ ಸೇವಿಸಿದ್ದ ಕೊಯಿಲ ಗ್ರಾಮದ ಯುವತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಕೊಯಿಲ ಗ್ರಾಮದ ಸುದೆಂಗಳ ನಿವಾಸಿ ಸಂಜೀವ ಮಡಿವಾಳ ಅವರ ಪುತ್ರಿ ಸಹನಾ ಮೃತಪಟ್ಟವರು. ಕಳೆದ 10 ದಿನಗಳ ಹಿಂದೆ ತನ್ನ ಅಕ್ಕನ ಮನೆಯಾದ ಉಡುಪಿ ಜಿಲ್ಲೆಯ ಕಾಪುವಿನ ಕಟ್ಟಂಗೇರಿಗೆ ತೆರಳಿದ್ದ ಸಹನಾ ಅಲ್ಲಿ ವಿಷ ಪದಾರ್ಥ ಸೇವಿಸಿದ್ದರು. ಅವರಿಗೆ ವಾಂತಿಯಾದಾಗ ಇವರು ಪುಡ್ ಫಾಯಿಸನ್ ಆಗಿದೆ ಎಂದು ಹೇಳಿ ವಿಷ ಪದಾರ್ಥ ಸೇವಿಸಿರುವುದನ್ನು ಮುಚ್ಚಿಟ್ಟಿದ್ದರು. ಆದರೂ ಪದೇ ಪದೇ ವಾಂತಿಯಾಗತೊಡಗಿದ್ದಾಗ ಸಂಶಯಗೊಂಡ ಮನೆಯವರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. 10 ದಿನ ಚಿಕಿತ್ಸೆಯಲ್ಲಿದ್ದ ಅವರು ಕಳೆದ ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಬಿಎ ಕಲಿತಿರುವ ಇವರು ತನ್ನ ಅರ್ಹತೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲವೆಂದು ಅತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.