ಪುತ್ತೂರು: ಜಾರಿ ನಿರ್ದೇಶನಾಲಯ (ಇ.ಡಿ.)ದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ಪ್ರಕರಣಗಳ ತನಿಖೆಗೆ ಸರ್ಕಾರದ ಪರ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಮಹೇಶ್ ಕಜೆ ನೇಮಕಗೊಂಡಿದ್ದಾರೆ.
ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ರಿತೇಶ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಂಗಳೂರಿನ ಶಾಂತಿನಗರ ಬಿಎಂಟಿಸಿ ಬಿ ಬ್ಲಾಕ್ನಲ್ಲಿರುವ ಬೆಂಗಳೂರು ವಲಯ ಇಡಿ ಕಚೇರಿಗೆ ಹಾಜರಾಗಿ ಇಡಿ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಸ್ವೀಕರಿಸುವಂತೆ ಸೂಚಿಸಿದ್ದಾರೆ.
ಉಪ್ಪಿನಂಗಡಿ ಸಮೀಪದ ಕೇದಾರ ನಿವಾಸಿಯಾಗಿರುವ ಮಹೇಶ್ ಕಜೆ ಅವರು, ಬೊಳುವಾರು ಕಜೆ ಲಾ ಛೇಂಬರ್ಸ್ನ ಮುಖ್ಯಸ್ಥ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿರುವ ಇವರು, ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸುದ್ದಿ ಬಳಗದ ವಕೀಲರಾಗಿ, ಲಂಚ-ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ಸುದ್ದಿ ಜನಾಂದೋಲನ ವೇದಿಕೆ ಸಲಹೆಗಾರರೂ ಆಗಿರುವ ಇವರು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮಾಜಿ ಸದಸ್ಯ, ಜೆಸಿಐ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.