ಪುತ್ತೂರು: ಸಂಗೀತ ಕ್ಷೇತ್ರದ ಬಲುದೊಡ್ಡ ಹೆಸರು ಪುತ್ತೂರಿನ ಗಾನಸಿರಿ ಕಲಾ ಕೇಂದ್ರ (ರಿ) ಸಂಸ್ಥೆಯು 2022ರ ಪ್ರತಿಷ್ಠಿತ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸಂದರ್ಭವನ್ನು ಸಂಭ್ರಮಿಸಲು ಮೇ.16ರಂದು ಸಂಜೆ 5.30ರಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮುಸ್ಸಂಜೆ ಮಧುರ ಗಾನ ಎಂಬ ಸುಂದರ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ಗಾಯಕರು ಮತ್ತು ಸಂಗೀತ ಗುರು ಡಾ ಕಿರಣ್ ಕುಮಾರ್ ಗಾನಸಿರಿಯವರ ನೇತೃತ್ವದಲ್ಲಿ
ಕಳೆದ 20 ವರ್ಷಗಳಲ್ಲಿ 21 ಸಾವಿರ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿರುವ ನಾಡಿನ ಸುಪ್ರಸಿದ್ಧ ಸಂಗೀತ ಸಂಸ್ಥೆ ಗಾನಸಿರಿ. ತನ್ನ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಸಂಗೀತ ಕಾರ್ಯಕ್ರಮಗಳ ಸಂಯೋಜನೆಗೆ ಹೆಸರುವಾಸಿ. ಇದೀಗ 2022ರ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಸುಂದರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುಗಮ ಸಂಗೀತ ರತ್ನ ಡಾ ಕಿರಣ್ ಕುಮಾರ್ ರೊಂದಿಗೆ ಇವರ ಶಿಷ್ಯೆ ಸಂಸ್ಥೆಯ ಸಹಶಿಕ್ಷಕಿ ಮತ್ತು ರಾಜ್ಯ ಮಟ್ಟದ ಗಾನಕಲಾ ರತ್ನ ಪ್ರಶಸ್ತಿ ಪುರಸ್ಕೃತ ಗಾಯಕಿ ಕು.ಶ್ರೀ ಲಕ್ಷ್ಮಿ ಎಸ್ ಪುತ್ತೂರು ಮತ್ತು ನಮ್ಮ ಟಿವಿ ಸುಪರ್ ಸಿಂಗರ್ ಖ್ಯಾತಿಯ ಗಾನಸಿರಿಯ ಗಾಯಕ ವರುಣ್ ಕುಮಾರ್ ಎಸ್ ಇವರು ಹುಚ್ಚೆದ್ದು ಕುಣಿಸುವ ಕನ್ನಡದ ಅತಿ ಮಧುರ ಭಕ್ತಿ, ಭಾವ, ಜನಪದ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ. ಖ್ಯಾತ ಜ್ಯೋತಿಷಿ ಶ್ರೀ ಅನಿಲ್ ಪಂಡಿತ್ ಕೃಷ್ಣಾರಾಧ್ಯಂ ಬ್ರಹ್ಮರಕೂಟ್ಲು ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ನಾಡಿನ ಖ್ಯಾತ ಕಲಾವಿದರಾದ ಅರುಣ್ ರಾಯ್ ಉಡುಪಿ, ವಾಮನ್ ಕಾರ್ಕಳ ಮತ್ತು ಗಿರೀಶ್ ಪೆರ್ಲ ಹಿಮ್ಮೇಳದಲ್ಲಿ ಕೈಚಳಕ ತೋರಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.