- ಲಂಚದಿಂದ ಬಂದ ಸಂಪತ್ತನ್ನು ತಿರಸ್ಕರಿಸುವ ಪ್ರವೃತ್ತಿ ತಾಳಿ, ಲಂಚ ನೀಡಿದ್ದಲ್ಲಿ ಹೊರಗೆ ಬಂದು ಪ್ರಚಾರ ಮಾಡಿ – ವಿದ್ಯಾರ್ಥಿಗಳಿಗೆ ಡಾ. ಯು.ಪಿ.ಎಸ್. ಕರೆ
ಪುತ್ತೂರು: ಸಂಪ್ಯದಲ್ಲಿರುವ ಅಕ್ಷಯ ಕಾಲೇಜಿನಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಆಂದೋಲನದ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರವರು ‘ಲಂಚ ಭ್ರಷ್ಟಾಚಾರ ಮಾಡುವವರು ನಮ್ಮನ್ನು ದರೋಡೆ ಮಾಡಿದಂತೆ. ದರೋಡೆಕೋರರನ್ನು ನಾವು ದೂರವಿಡುವಂತೆ ನಮ್ಮ ನೆಲ, ನಮ್ಮ ಜಲ, ನಮ್ಮ ರಸ್ತೆ, ನಮ್ಮ ಸಮಾಜವನ್ನು ಲಂಚ ಭ್ರಷ್ಟಾಚಾರಗಳಿಂದ ದರೋಡೆ ಮಾಡುತ್ತಿರುವವರನ್ನು ಬಹಿಷ್ಕರಿಸುವ ಮನಸ್ಸು ನಾವು ಹೊಂದಬೇಕಾಗಿದೆ. ಈ ದಿಶೆಯಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಲಂಚದಿಂದ ಬಂದ ಸಂಪತ್ತು ಇದ್ದಲ್ಲಿ ಮೊದಲು ಅದನ್ನು ತಿರಸ್ಕರಿಸುವ ಭಾವನೆ ಹೊಂದಬೇಕು. ಮಕ್ಕಳು, ಹೆಂಡತಿ, ಮನೆಯವರು ಲಂಚವನ್ನು ವಿರೋಧಿಸಿದಾಗ ಸಮಾಜವೂ ಬಹಿಷ್ಕರಿಸುತ್ತದೆ’ ಎಂದರು.
ಲಂಚ ತೆಗೆಸಿಕೊಡುವ ಆಂದೋಲನ
ಲಂಚ ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದರೆ ಕೊಟ್ಟುಬನ್ನಿ. ಆದರೆ ಹೊರಗೆ ಬಂದಮೇಲೆ ಅದನ್ನು ಹೇಳಿ, ಪ್ರಚಾರ ಮಾಡಿ.. ಆಗ ಆ ಲಂಚಕೋರನನ್ನು ಸಮಾಜವೇ ಬಹಿಷ್ಕರಿಸುತ್ತದೆ. ಸುದ್ದಿ ಮಾಧ್ಯಮದ ಮೂಲಕವೂ ಪ್ರಚಾರ ಮಾಡುತ್ತೇವೆ. ಆಗ ಕೊಟ್ಟ ಲಂಚವನ್ನು ವಾಪಾಸ್ ತೆಗೆಸಿಕೊಡುವ ಆಂದೋಲನ ನಾವು ಮಾಡುತ್ತೇವೆ’ ಎಂದು ಡಾ. ಶಿವಾನಂದ್ ಹೇಳಿದರು.
ಅಕ್ಷಯ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಶಂಕರ್, ಪ್ರಾಂಶುಪಾಲ ಸಂಪತ್ ಪಕ್ಕಳ, ಉಪನ್ಯಾಸಕ ವೃಂದ, ಸಿಬಂದಿಗಳು ಉಪಸ್ಥಿತರಿದ್ದರು.
ಪ್ರತಿಜ್ಞಾ ವಿಧಿ ಸ್ವೀಕಾರ
ಲಂಚ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು. ಸುದ್ದಿ ಬಿಡುಗಡೆ ವರದಿಗಾರ ಗಣೇಶ್ ಕಲ್ಲರ್ಪೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸುದ್ದಿ ಮೀಡಿಯಾ ಗ್ರೂಪ್ ಸಿಇಒ ಸೃಜನ್ ಊರುಬೈಲು, ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಉಪಸ್ಥಿತರಿದ್ದರು.