ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಇಚ್ಲಂಪಾಡಿ ನಿವಾಸಿ ಶ್ರೀನಿವಾಸ ಪೂಜಾರಿ ನಿಡ್ಯಡ್ಕ ಅವರಿಗೆ ಕೃತಕ ಕಾಲು ಜೋಡಣೆಗೆ ಅನುದಾನ ಹಾಗೂ ದ್ವಿಚಕ್ರ ವಾಹನ ನೀಡಲಾಗಿದೆ.
ಶ್ರೀನಿವಾಸ ಪೂಜಾರಿಯವರಿಗೆ 10 ತಿಂಗಳ ಹಿಂದೆ ಕಟ್ಟಿಗೆ ತುಂಡರಿಸುವ ವೇಳೆ ಯಂತ್ರ ಕಾಲಿಗೆ ತಾಗಿ ಗಾಯವಾಗಿತ್ತು. ಬಳಿಕ ಅವರ ಕಾಲು ತುಂಡರಿಸಲಾಗಿತ್ತು. ಚಿಕಿತ್ಸೆ ಬಳಿಕ ಅವರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರರವರು ಶ್ರೀನಿವಾಸ ಪೂಜಾರಿಯವರ ಮನೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದರು. ಇದೀಗ ಶ್ರೀನಿವಾಸ ಪೂಜಾರಿಯವರಿಗೆ ಕೃತಕ ಕಾಲು ಜೋಡಣೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರುರವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 1.75 ಲಕ್ಷ ರೂ.,ಅನುದಾನ ಒದಗಿಸಿಕೊಡಲಾಗಿದೆ. ಸುಳ್ಯ ಶಾಸಕರೂ ಆದ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರ ಅನುದಾನದಲ್ಲಿ ಖರೀದಿಸಿದ ದ್ವಿಚಕ್ರ ವಾಹನವನ್ನು ಹಸ್ತಾಂತರಿಸಲಾಯಿತು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಬಿಜೆಪಿ ನೆಲ್ಯಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷರೂ ಆದ ಭಾಸ್ಕರ ಎಸ್.ಗೌಡರವರು ಶ್ರೀನಿವಾಸ ಪೂಜಾರಿಯವರಿಗೆ ನೆರವು ನೀಡುವಂತೆ ಸಚಿವ ಎಸ್.ಅಂಗಾರ ಹಾಗೂ ಶಾಸಕ ಸಂಜೀವ ಮಠಂದೂರುರವರಿಗೆ ಮನವಿ ಮಾಡಿದ್ದರು. ಶ್ರೀನಿವಾಸ ಪೂಜಾರಿಯವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು ಧಾರ್ಮಿಕ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.