ಪುತ್ತೂರು: ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಂಬಂಧಿಸಿ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಮುಂಡೂರು ಗ್ರಾಮದ ಮೂರು ಕಡೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಕಣ್ಮರೆಯಾಗಿರುವ ಘಟನೆ ಮೇ.21ರಂದು ಬೆಳಕಿಗೆ ಬಂದಿದೆ.
ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ ಮೇ.3ರಂದು ನಡೆಸುವುದೆಂದು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ಸಂಜೀವ ಮಠಂದೂರು ಅವರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಿದ್ದರು. ಮೇ.2ರಂದು ಶಾಸಕರು ತುರ್ತಾಗಿ ಬೆಂಗಳೂರು ತೆರಳಿದ್ದರಿಂದ ಶಿಲಾನ್ಯಾಸ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೀಗ ಮುಂಡೂರು ಗ್ರಾಮದ ಕಡ್ಯ- ತೌಡಿಂಜ ಬಳಿ, ಬಾಳಯ ಬಳಿ ಹಾಗೂ ಅಂಬಟ ಬನಾರಿ ಬಳಿ ಅಳವಡಿಸಲಾಗಿದ್ದ ಬ್ಯಾನರ್ ಕಣ್ಮರೆಯಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಲು ಚಿಂತನೆ ನಡೆಸಿದ್ದೇವೆ ಎಂದು ಮುಂಡೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಉಮೇಶ್ ಗೌಡ ಅಂಬಟ ತಿಳಿಸಿದ್ದಾರೆ.