ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು, ಪುತ್ತೂರು ಮತ್ತು ಬಂಟ್ವಾಳ ತಾಲೂಕು ಪಂಚಾಯತ್ ಇದರ ಸಹಯೋಗದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ 2021-22 ನೇ ಸಾಲಿನ ಬಸವ ವಸತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯ 1120 ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಸಮಾರಂಭವು ಮೇ 23 ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಫಲಾನುಭವಿಗಳಿಗೆ ಕಾರ್ಯಾದೇಶ ವಿತರಣೆ ಮಾಡಿ ಮಾತನಾಡಿ ವಿಕೇಂದ್ರಿತ ವ್ಯವಸ್ಥೆ ಗ್ರಾಮದಲ್ಕಿ ಮಾಡುವ ಮೂಲಕ ಗ್ರಾಮವನ್ನೇ ಸರಕಾರ ಮಾಡುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ. ಫಲಾನುಭವಿಗಳು ಕಾರ್ಯಾದೇಶ ಪಡೆದ ಮೂರು ತಿಂಗಳೊಳಗೆ ಮನೆ ಕಟ್ಟುವ ಕಾಮಗಾರಿ ಪ್ರಾರಂಭಿಸಬೇಕು. 1 ವರ್ಷದೊಳಗೆ ನೂರಕ್ಕೆ ನೂರು ಮನೆ ಪೂರ್ಣಗೊಳಿಸಬೇಕು. ನಾವು ಕೊಡುವ ಸವಲತ್ತು ಕಟ್ಟಕಡೆಯ ವ್ಯಕ್ತಿಗೆ ಕೊಡುವಂತಹದ್ದು. ಮುಂದೆ ನೂರಕ್ಕೆ ನೂರು ಮನೆಗಳು ನಿರ್ಮಾಣ ಆಗಿದೆ ಎಂಬ ಐತಿಹಾಸಿಕ ಕೆಲಸ ಆಗಬೇಕೆಂದು ಹೇಳಿದರು.
ಬಂಟ್ವಾಳ ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ದ.ಕ.ಜಿಲ್ಲಾ ವಸತಿ ನೋಡೆಲ್ ಅಧಿಕಾರಿ ಸವಿತಾ ಕೆ ಮನೆ ಕಾಮಗಾರಿಯ ಕಂಡೀಷನ್ ಗಳ ಕುರಿತು ಮಾಹಿತಿ ನೀಡಿದರು. ಪುತ್ತೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಹೆಚ್ ಭಂಡಾರಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಸೇರಿದಂತೆ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಫಲಾನುಭವಿಗಳು ಹಲವಾರು ಮಂದಿ ಉಪಸ್ಥಿತರಿದ್ದರು. ನರೇಗದ ಭರತ್ ಮತ್ತು ವಸತಿ ನೋಡೆಲ್ ಅಧಿಕಾರಿ ಮಹಮ್ಮದ್ ಸಿರಾಜ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.