- ಭವಿಷ್ಯದ ದೃಷ್ಠಿಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣ-ಮಠಂದೂರು
ಉಪ್ಪಿನಂಗಡಿ: ಇಲ್ಲಿ ಕಾರ್ಯಾಚರಿಸುತ್ತಿರುವ ನಾಡ ಕಚೇರಿಗೆ ಪೂರ್ಣ ಪ್ರಮಾಣದ ಕಟ್ಟಡ ಆಗಬೇಕು ಎನ್ನುವುದು ಬಹು ಕಾಲದ ಬೇಡಿಕೆ ಆಗಿದ್ದು, ಮುಂದಿನ ದಿನಗಳಲ್ಲಿ ಪುತ್ತೂರು ಜಿಲ್ಲೆ ಆದಾಗ ಉಪ್ಪಿನಂಗಡಿ ತಾಲ್ಲೂಕು ಕೇಂದ್ರ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಠಿಯಿಂದ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಂತೆ ಉಪ್ಪಿನಂಗಡಿಯಲ್ಲಿ ನಾಡ ಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಮೇ. 23ರಂದು ಉಪ್ಪಿನಂಗಡಿಯಲ್ಲಿ ನಾಡ ಕಚೇರಿಗೆ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕಂದಾಯ ಇಲಾಖೆ ವತಿಯಿಂದ ದ.ಕ. ಜಿಲ್ಲೆಗೆ 3 ನಾಡ ಕಚೇರಿಗೆ ಕಟ್ಟಡ ಮಂಜೂರು ಆಗಿದ್ದು, ಅದರಲ್ಲಿ ಉಪ್ಪಿನಂಗಡಿ ಮತ್ತು ವಿಟ್ಲ 2 ಕೇಂದ್ರಗಳು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಉಪ್ಪಿನಂಗಡಿ ನಾಡ ಕಚೇರಿಗೆ ಕಂದಾಯ ಸಚಿವ ಆರ್. ಅಶೋಕ್ ಅವರಲ್ಲಿ ಹೆಚ್ಚಿನ ಅನುದಾನದ ಬೇಡಿಕೆ ಇಟ್ಟಿದ್ದೆ, ಆದರೆ ರಾಜ್ಯ ವ್ಯಾಪ್ತಿಯಲ್ಲಿ ನಿರ್ಮಾಣ ಆಗುವ ಕಟ್ಟಡಕ್ಕೆ ಇಲಾಖೆಯಿಂದ 18.84ಲಕ್ಷ ಅನುದಾನ ಮಂಜೂರಾತಿ ಇದ್ದು, ಆದರೆ ಕಟ್ಟಡದಲ್ಲಿ ಎಲ್ಲಾ ವ್ಯವಸ್ಥೆಗಳು ಇರಬೇಕು ಎನ್ನುವ ಉದ್ದೇಶದಿಂದ ನನ್ನ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ಅನುದಾನವನ್ನು ಇದಕ್ಕೆ ಇರಿಸಿದ್ದು, ಹೀಗಾಗಿ 23.84 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ, ಇನ್ನೂ ಕೊರತೆ ಕಂಡು ಬಂದಲ್ಲಿ ಮತ್ತೆ ಅನುದಾನದ ವ್ಯವಸ್ಥೆ ಮಾಡಲಾಗುವುದು ಒಟ್ಟಿನಲ್ಲಿ ಉತ್ತಮ ಮತ್ತು ವ್ಯವಸ್ಥಿತವಾದ ಕಟ್ಟಡ ನಿರ್ಮಾಣ ಆಗಲಿದೆ ಎಂದು ಹೇಳಿದರು.
ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಪ್ರಮುಖ ದಾಖಲೆಗಳು ಇರುತ್ತದೆ, ಈ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡದ ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯ ವ್ಯಾಪ್ತಿಯಲ್ಲಿ ನಾಡ ಕಚೇರಿಗೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಂಡು ಜನರ ಉಪಯೋಗಕ್ಕೆ ಲಭಿಸುವಂತಾಗಲಿ ಎಂದರು.
ಕಟ್ಟಡ ಕಾಮಗಾರಿ ನಿರ್ವಹಣೆಯ ನಿರ್ಮಿತ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಾತನಾಡಿ ಕಟ್ಟಡದಲ್ಲಿ ದಾಖಲೆ ಕೊಠಡಿ, ಕಚೇರಿ, ಸಾರ್ವಜನಿಕರಿಗೆ ಮಾಹಿತಿ ಕೇಂದ್ರ, ಶೌಚಾಲಯವನ್ನು ಒಳಗೊಂಡಿರುತ್ತದೆ, ಮೊದಲನೇ ಮಹಡಿಯಲ್ಲಿ ಸಭೆ ಸಮಾರಂಭವನ್ನು ನಡೆಸಲು ಅನುಕೂಲ ಆಗುವಂತೆ ಸಭಾಂಗಣ ಇರಲಿದೆ ಎಂದ ಅವರು 6 ರಿಂದ 8 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷೆ ಭವಾನಿ, ಸದಸ್ಯ ಸದಾನಂದ ಶೆಟ್ಟಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ಅಬ್ದುಲ್ ರಶೀದ್, ಜಯಂತಿ, ವನಿತಾ, ಬಜತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್, ಪೆರ್ನೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎನ್. ಉಮೇಶ್ ಶೆಣೈ, ಮುಕುಂದ ಬಜತ್ತೂರು, ಸುಜಾತಾ ಕೃಷ್ಣ, ಲಕ್ಷ್ಮಣ ಗೌಡ, ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಂತ ಪೊರೋಳಿ, ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಜಿ. ರಾಧಾ, ಸಿ.ಎ. ಬೇಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್, ನಿರ್ದೇಶಕ ಯತೀಶ್ ಶೆಟ್ಟಿ, ಧರ್ನಪ್ಪ, ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಸ್ಥಳೀಯರಾದ ಯು. ರಾಮ, ಚಂದ್ರಶೇಖರ ಮಡಿವಾಳ, ವಿಶ್ವನಾಥ ಶೆಟ್ಟಿ ಕಂಗ್ವೆ, ಹರೀಶ್ ನಟ್ಟಿಬೈಲ್, ಚಂದಪ್ಪ ಮೂಲ್ಯ, ಕಂದಾಯ ನಿರೀಕ್ಷಕ ರಂಜನ್, ಗ್ರಾಮಕರಣಿಕರಾದ ಜಿತೇಶ್, ಶರಣ್ಯ, ನವಿತಾ, ಕವಿತಾ, ಜಂಗಪ್ಪ, ಸಹಾಯಕ ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
ತಹಸೀಲ್ದಾರ್ ರಮೇಶ್ ಬಾಬು ಸ್ವಾಗತಿಸಿ, ಉಪ ತಹಸೀಲ್ದಾರ್ ಚೆನ್ನಪ್ಪ ಗೌಡ ವಂದಿಸಿದರು. ಗ್ರಾಮಕರಣಿಕ ನರಿಯಪ್ಪ ಮಠದ ಕಾರ್ಯಕ್ರಮ ನಿರೂಪಿಸಿದರು.