ಪುತ್ತೂರು: ಲೇಖಕ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ, ಡಾ|ವೈ. ಉಮಾನಾಥ ಶೆಣೈರವರಿಗೆ ಶ್ರೀಸಿದ್ಧಗಂಗಾ ಮಠದ ಶಿಷ್ಯವರ್ಗದವರು ಮತ್ತು ಬೆಂಗಳೂರಿನ ಜನಸ್ಪಂದನ ಸಂಸ್ಥೆಯಿಂದ ಸಂಗಮರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿಂದು, ಜೈನ ಮತ್ತು ವೀರಶೈವ ಧರ್ಮಗಳ ಸಾಮಾಜಿಕ ಆಚಾರ-ವಿಚಾರಗಳಲ್ಲಿ ಪರಸ್ಪರ ಭಿನ್ನತೆ, ಹಾಗೂ ಅವರ ಅಂತರಂಗದಲ್ಲಿರವ ಉದಾತ್ತ ಮಾನವೀಯ ಮೌಲ್ಯಗಳ ಸಂಗಮ, ಕರಾವಳಿ ಕರ್ನಾಟಕದಲ್ಲಿ ಜೈನ ಅರಸರ ಆಳ್ವಿಕೆ, ವೈಷ್ಣವ ಮಠಗಳ ಪ್ರಭಾವ, ತೌಳವ ಸಂಸ್ಕೃತಿಯ ಪ್ರಾಬಲ್ಯ, ವೀರಶೈವರ ಆಳ್ವಿಕೆ, ಕೊಡುಗೆಗಳ ಬಗ್ಗೆ ಇವರು ಆಳವಾದ ಅಧ್ಯಯನ ನಡೆಸಿ ಬರೆದ ಕರಾವಳಿ ಕರ್ನಾಟಕದಲ್ಲಿ ವೀರಶೈವರ ಆಳ್ವಿಕೆ ಎಂಬ ಲೇಖನಕ್ಕೆ ಸಂಗಮರತ್ನ ಪ್ರಶಸ್ತಿ ಲಭಿಸಿದೆ. ಪುತ್ತೂರು ಮುರ ನಿವಾಸಿಯಾದ ಇವರು ನೆಹರೂನಗರ ವಿವೇಕಾನಂದ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದರು. ಅಲ್ಲದೆ ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಸಿದ್ಧರೂಢ ಮಿಶನ್ ಆಶ್ರಮದ ಅಧ್ಯಕ್ಷ ಡಾ.ಆರೂಢ ಭಾರತೀ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ವಿಶ್ರಾಂತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಎಚ್.ಸದಾಶಿವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಮತ್ತು ಚಿತ್ರನಟ ಡಾ.ಮಹಾದೇವ, ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಡಾ.ಜಿ.ಜಿ.ರಮೇಶ್ ಉಪನ್ಯಾಸ ನೀಡಿದರು.