ಪುತ್ತೂರು:ಎರಡು ವಾರಗಳ ಹಿಂದೆ ಕೊಕ್ಕಡದಲ್ಲಿ ರಿಕ್ಷಾ ಚಾಲಕರೋರ್ವರಿಗೆ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿದ್ದ ಆರೋಪದಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಮೇ 14ರಂದು ಕೊಕ್ಕಡ ಜೋಡುಮಾರ್ಗ ಮುದ್ದಿಗೆ ಕ್ಯೂನಲ್ಲಿ ರಿಕ್ಷಾ ಚಾಲಕ ಕುಂಟಾಲ್ಪಲ್ಕೆ ರಮೇಶ್ ಎಂಬವರು ಮೂವರು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬಾಡಿಗೆ ತೆರಳುತ್ತಿದ್ದಾಗ ರಿಕ್ಷಾ ಚಾಲಕ ಕೊಕ್ಕಡ ಕೆಂಗುಡೇಲು ನಿವಾಸಿ ದಿನೇಶ್ ಎಂಬವರು ಏಕಾಏಕಿ ಅವರ ರಿಕ್ಷಾವನ್ನು ಅಡ್ಡನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ, ರಮೇಶ್ ಅವರ ರಿಕ್ಷಾದಲ್ಲಿ ಕುಳಿತಿದ್ದ ಮೂವರು ಪ್ರಯಾಣಿಕರನ್ನು ಅವರ ರಿಕ್ಷಾದಲ್ಲಿ ಕರೆದೊಯ್ದಿದ್ದರೆಂದು ಆರೋಪಿಸಲಾಗಿದೆ.ರಮೇಶ್ ಅವರ ದೂರಿನ ಮೇರೆಗೆ ಪೊಲೀಸರು ದಿನೇಶ್ ಅವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿ ದಿನೇಶ್ ಅವರಿಗೆ ಜಿಲ್ಲಾ ಎರಡನೇ ಹಚ್ಚುವರಿ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲ ಸಂತೋಷ್ ಕುಮಾರ್ ಉಪ್ಪಿನಂಗಡಿ ವಾದಿಸಿದ್ದರು.