ಪುತ್ತೂರು; 2022ರ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಪುತ್ತೂರಿನ ಗಾನಸಿರಿ ಕಲಾಕೇಂದ್ರ ಸಂಸ್ಥೆಗೆ ಮೇ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಾನಸಿರಿ ಸಂಸ್ಥೆಯ ಮುಖ್ಯಸ್ಥರಾದ ಡಾ. ಕಿರಣ್ ಕುಮಾರ್ ಗಾನಸಿರಿ ಯವರು ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರು. ಹಿರಿಯ ನಟಿ ಶ್ರೀಮತಿ ಭಾರತಿ ವಿಷ್ಣುವರ್ಧನ್ , ಕರ್ನಾಟಕ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ್ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ , ಆರ್ಯಭಟ ಸಂಸ್ಥೆಯ ಅಧ್ಯಕ್ಷರಾದ ಎಸ್ ಎಲ್ ಎನ್ ರಾವ್ ಸಹಿತ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸಂಸ್ಥೆಯ ಪರವಾಗಿ ಸಂಸ್ಥೆಯ ಮುಖ್ಯಸ್ಥರು ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ ಕಿರಣ್ ಕುಮಾರ್ ಗಾನಸಿರಿ , ಗಾನಸಿರಿಯ ಸುಪ್ರಸಿದ್ಧ ಗಾಯಕಿ ಕು. ಶ್ರೀ ಲಕ್ಷ್ಮಿ ಎಸ್ ಪುತ್ತೂರು ಮತ್ತು ಗಾಯಕ ವರುಣ್ ಕುಮಾರ್ ಪ್ರಸ್ತುತಪಡಿಸಿದ ಸುಗಮ ಸಂಗೀತ ಕಾರ್ಯಕ್ರಮ ಮತ್ತು ಜಯ ಭಾರತ ಜನನಿಯ ತನುಜಾತೆ ವಿಶೇಷ ಪ್ರಸ್ತುತಿ ನೆರೆದಿದ್ದ ಸಭಿಕರ ಮನಸೂರೆಗೊಂಡಿತು.