ಪುತ್ತೂರು: ಕೂರ್ನಡ್ಕ ಪೀರ್ ಮೊಹಲ್ಲಾ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಾಫಿಯಾ ಮಹಿಳಾ ಕಾಲೇಜು 7ನೇ ವಾರ್ಷಿಕ ಹಾಗೂ ೫ನೇ ಬಿರುದು ಪ್ರದಾನ ಸಂಭ್ರಮದಲ್ಲಿದೆ. ಸ್ಥಳೀಯ ಜಮಾಅತಿನ ಹಾಗೂ ಪರಿಸರದ ಜಮಾಅತಿಗೊಳಪಟ್ಟ ಹೆಣ್ಮಕ್ಕಳು ಎಸ್ಸೆಸ್ಸೆಲ್ಸಿ ಪೂರೈಸಿದ ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಅನುಕೂಲವಾಗುವಂತೆ ಹಾಗೂ ಆರ್ಥಿಕ ಅಡಚಣೆಗಳಿಂದ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಸ್ಥಾಪಿಸಲ್ಪಟ್ಟ ವಾಫಿಯಾ ಮಹಿಳಾ ಕಾಲೇಜನ್ನು ೨೦೧೫ನೇ ಇಸವಿಯಲ್ಲಿ ಪ್ರಾರಂಭಿಸಲಾಗಿತ್ತು. ಇಲ್ಲಿ ಶರೀಯತ್ ಶಿಕ್ಷಣದ ಜೊತೆಗೆ ಪಿಯುಸಿ ಶಿಕ್ಷಣ ಕಲಿಕೆಗೂ ಅವಕಾಶ ಕಲ್ಪಿಸಲಾಗಿದೆ. ಈ ಕಾಲೇಜು ನೂರಾರು ವಿದ್ಯಾರ್ಥಿನಿಯರಿಗೆ ಶರೀಯತ್ ಒಳಗೊಂಡ ಧಾರ್ಮಿಕ ವಿದ್ಯಾಭ್ಯಾದೊಂದಿಗೆ ಲೌಕಿಕ ವಿದ್ಯೆಯನ್ನು ನೀಡಿದ್ದು ಇಲ್ಲಿನ ಶಿಕ್ಷಕ ವೃಂದ ಕೂಡಾ ಗುಣಮಟ್ಟದ ಶಿಕ್ಷಣ ನೀಡಿದ ಸಾರ್ಥಕತೆಯಲ್ಲಿದೆ. ಸ್ವಉದ್ಯೋಗವನ್ನು ಸೃಷ್ಟಿಸುವ ಉದ್ದೇಶಕ್ಕೆ ಹೊಲಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಇದೀಗ ಮೇ.28 ರಂದು ವಿದ್ಯಾಸಂಸ್ಥೆಯಲ್ಲಿ ಅಲ್ ವಾಫಿರ ಸನದುದಾನ ಸಮಾರಂಭ ನಡೆಯಲಿದ್ದು ಸುಮಾರು 70 ಮಂದಿ ವಿದ್ಯಾರ್ಥಿನಿಯರು ಬಿರುದು ಪಡೆಯಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿಯರು ಪರೀಕ್ಷಾ ಫಲಿತಾಂಶದಲ್ಲೂ ಉತ್ತಮ ಸಾಧನೆ ಮಾಡುತ್ತಿದೆ ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಮೇ.28 ಸನದುದಾನ ಸಮಾರಂಭ:
ಮೇ.28ರಂದು ಬೆಳಿಗ್ಗೆ ಗಂಟೆ 10-00ಕ್ಕೆ ಕೂರ್ನಡ್ಕ ಮಸೀದಿ ವಠಾರದಲ್ಲಿ ಸನದುದಾನ ಸಮಾರಂಭ ನಡೆಯಲಿದ್ದು ಸಮಸ್ತ ಕೇಂದ್ರ ಮುಶಾವರ ಸದಸ್ಯರು, ವಾಫಿಯಾ ಕಾಲೇಜಿನ ಪ್ರಾಂಶುಪಾಲರೂ ಆಗಿರುವ ಖಾಝಿ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ನೇತೃತ್ವ ವಹಿಸಲಿದ್ದು ಕೂರ್ನಡ್ಕ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಚ್ ಖಾಸಿಂ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಮುದರ್ರಿಸ್ ಉನೈಸ್ ಫೈಝಿ ಉದ್ಘಾಟಿಸಲಿದ್ದು ವಾಫಿಯಾ ಮಹಿಳಾ ಕಾಲೇಜಿನ ಅಧ್ಯಕ್ಷ ಮಹಮ್ಮದ್ ಸಾಬ್ ಪ್ರಸ್ತಾವನೆಗೈಯಲಿದ್ದಾರೆ. ಯುಎಇ ಬಿಡಬ್ಲ್ಯೂಸಿ ಉಪಾಧ್ಯಕ್ಷ ಇಕ್ಬಾಲ್, ಕೋಆರ್ಡಿನೇಟರ್ ಆದಂ ಮುಕ್ರಂಪಾಡಿ ಉಪಸ್ಥಿತರಿರಲಿದ್ದಾರೆ.
ಸನದುದಾನ:
ಸಯ್ಯದ್ ಹಾದೀ ತಂಙಳ್ರವರ ಪತ್ನಿ ಅಸ್ಸಯ್ಯದತ್ ನಜ್ಮುನ್ನಿಸಾ, ಹಾಸ್ ವುಮೆನ್ಸ್ ಅಕಾಡೆಮಿಯ ಪ್ರಾಂಶುಪಾಲೆ ಫಾತಿಮಾ ವಫಿಯ್ಯ ಎಟ್ಟಿಕುಳಂ ಹಾಗೂ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ರವರ ಪುತ್ರಿ ಖದೀಜಾರವರು ಸನದುದಾನ ಪ್ರದಾನ ಮಾಡಲಿದ್ದಾರೆ.