ವಿಟ್ಲ: ಡಾ.ಜೀ.ಶಂ.ಪಾ ಸಾಹಿತ್ಯ ವೇದಿಕೆಯಿಂದ ನೀಡಲ್ಪಡುವ ಕಾವ್ಯಶ್ರೀ ಪ್ರಶಸ್ತಿ ಗೆ ಯುವ ಬರಹಗಾರ ರಾಜಾರಾಮ ವರ್ಮ ವಿಟ್ಲ ಬರೆದಿರುವ ‘ವೈಶಾಖದ ಸಂಜೆ’ ಎಂಬ ಕಾವ್ಯ ಕೃತಿ ಆಯ್ಕೆಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕವಿ ಕಾವ್ಯ ಮೇಳದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಮೈಸೂರು ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರಾದ ಡಾ.ಸುಧಾಕರ್ ಹೊಸಹಳ್ಳಿ, ಚಿತ್ರನಟ ಹಾಗೂ ಯುವ ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಚಲನಚಿತ್ರ ನಿರ್ದೇಶಕ ಮಹೇಶ್ ಸುಖಧರೆ,ಶಾಸಕ ಎಂ.ಶ್ರೀನಿವಾಸ್, ಡಾ.ಎಚ್.ಎಸ್.ಮುದ್ದೇ ಗೌಡ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಪುತ್ತೂರಿನ ನರಿಮೊಗರು:
ಸರಸ್ವತಿ ವಿದ್ಯಾಮಂದಿರದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ರಾಜಾರಾಮ ವರ್ಮ ಬಂಟ್ವಾಳ ತಾಲೂಕಿನ ವಿಟ್ಲದವರು. ಇವರ ಕವಿತೆಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ರೇಡಿಯೋ ಹಾಗೂ ಪ್ರಾದೇಶಿಕ ವಾಹಿನಿಗಳಲ್ಲಿ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.