ವಿದ್ಯಾರ್ಥಿಗಳಿಂದ ಪತ್ರಕರ್ತರ ಮೇಲೆ ದಿಗ್ಭಂಧನ ದೂರು ಹಿನ್ನೆಲೆ

0

  • ಪತ್ರಕರ್ತರ ಮೇಲೆ ವಿದ್ಯಾರ್ಥಿನಿ ದೂರು

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕುರಿತಾಗಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಲ್ಲಿ ಮಾಹಿತಿ ಪಡೆದುಕೊಳ್ಳಲು ತೆರಳಿದ್ದ ಪತ್ರಕರ್ತರ ಮೇಲೆ ವಿದ್ಯಾರ್ಥಿಗಳ ಗುಂಪೊಂದು ದಿಗ್ಭಂಧನ ವಿಧಿಸಿ, ಅವರ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವಿಡಿಯೋ ಡಿಲೀಟ್ ಮಾಡಿದ್ದಲ್ಲದೆ, ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪತ್ರಕರ್ತರೋರ್ವರು ದೂರು ನೀಡಿದ ಮರುದಿನ ವಿದ್ಯಾರ್ಥಿನಿಯೋರ್ವಳು ಮೂವರು ಪತ್ರಕರ್ತರ ಮೇಲೆ ದೂರು ನೀಡಿದ್ದಾರೆ. ಜಾತಿ ನಿಂದನೆ ಮಾಡಿ,ಆಕೆಯ ಶಾಲು ಎಳೆದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾಲೇಜಿನ ಎರಡನೇ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ಈ ದೂರು ನೀಡಿದ್ದು, “ಜೂನ್ ೨ರಂದು ಸಮಯ ಸುಮಾರು ೦೯.೩೦ ಗಂಟೆಗೆ ತಾನು ಕಾಲೇಜಿಗೆ ಬಂದಿದ್ದು, ಸುಮಾರು 11.30 ಗಂಟೆಗೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಲ್ಲದ ಅಪರಿಚಿತ ಅಜಿತ್ ಕುಮಾರ್ ಕೆ., ಪ್ರವೀಣ್ ಕುಮಾರ್ ಮತ್ತು ಸಿದ್ದೀಕ್ ನಿರಾಜೆ ಎಂಬ ಮೂರು ಮಂದಿ ಅಕ್ರಮವಾಗಿ ಪ್ರವೇಶ ಮಾಡಿ. ಅಜಿತ್ ಕುಮಾರ್ ಎಂಬಾತನು ‘ಬ್ಯಾರಿಗಳು ಯಾಕೆ ಕಾಲೇಜಿಗೆ ಬಂದಿದ್ದು.ಅಕ್ಲೆಗ್ ಪಳ್ಳಿಗೆ ಪೊಯರ್ ಆಪುಜ್ಜಾ? ಎನ್ನುತ್ತಾ ತನ್ನ ಬಳಿ ಬಂದು ಶಾಲನ್ನು ಎಳೆಯಲು ಯತ್ನಿಸಿದಾಗ ನಾನು ಗಾಬರಿಯಿಂದ ತಪ್ಪಿಸುತ್ತಿದಂತೆ, ಪ್ರವೀಣ್ ಎಂಬಾತನು, ‘ಆಳೆನ್ ಬುಡೋರ್ಚಿ ಆಳ್ ಬ್ಯಾರ್ತಿ ಆಲೇನ ಶಾಲ್ ಒಯ್ಪು’ ಎಂಬಿತ್ಯಾದಿಯಾಗಿ ಸಹಚರರಾದ ಸಿದ್ದೀಕ್ ನಿರಾಜೆ ಎಂಬವರಲ್ಲಿ ಹೇಳುತ್ತಾ ಬಂದು ಅಜಿತ್ ಕುಮಾರ್‌ನು ನನ್ನ ವಿಡಿಯೋ ಮಾಡುತ್ತೀದ್ದಾಗ, ನೀವು ಯಾರು? ಇಲ್ಲಿ ಯಾಕೆ ಬಂದಿದ್ದೀರಿ ಎಂದು ಕೇಳಿದಾಗ ನನ್ನನ್ನು ಉದ್ದೆಶಿಸಿ ನೀನು ನಾಳೆಯಿಂದ ಹೇಗೆ ಕಾಲೇಜಿಗೆ ಬರುತ್ತೀ ಎಂದು ನಾವು ನೋಡುತ್ತೇವೆ, ವಿಡಿಯೋ ವೈರಲ್ ಮಾಡುತ್ತೇವೆ ಎಂದಾಗ ನಾನು ಕ್ಲಾಸ್ ರೂಮ್‌ಗೆ ಹೋಗಿ ಮೌಖಿಕವಾಗಿ ಪ್ರಾಂಶುಪಾಲರಲ್ಲಿ ದೂರು ನೀಡಿದಾಗ ಆ ವ್ಯಕ್ತಿಗಳನ್ನು ಕರೆಯಿಸಿ ಅವರು ಮಾಡಿದ ವಿಡಿಯೋವನ್ನು ಡಿಲಿಟ್ ಮಾಡಿಸಿದ್ದು, ಈ ಸಂದರ್ಭ ಆ ಮೂರು ಜನರು ಪತ್ರಕರ್ತರೆಂದು ತಿಳಿಯಿತು, ಇದರಿಂದ ನಾನು ಹೆದರಿ ಜೀವ ಭಯದಿಂದ ಮನೆಯವರಲ್ಲಿ ವಿವರಿಸಿ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ” ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.ಆಕೆ ನೀಡಿದ ದೂರಿನಂತೆ ಕಲಂ: 447,354,504,506  ಜೊತೆಗೆ 34 ಐಪಿಸಿಯಡಿ ಪ್ರಕರಣ ದಾಖಲಾಗಿದೆ.

 

ಸುಳ್ಳು ದೂರು

ಸಿದ್ದೀಕ್ ನೀರಾಜೆ

ಇಬ್ಬರು ಪತ್ರಕರ್ತರಿಗೆ ವಿದ್ಯಾರ್ಥಿಗಳ ಗುಂಪು ದಿಗ್ಭಂಧನ ಹಾಕಿ, ವಿಡಿಯೋ ಡಿಲೀಟ್ ಮಾಡಿರುವುದು ಕಾಲೇಜು ಕಟ್ಟಡದೊಳಗೆ. ಆದರೆ ನಾನು ಆ ಬಳಿಕ ಕಾಲೇಜು ಬಳಿ ಬಂದಿದ್ದು, ಕಾಲೇಜಿನೊಳಗೆ ಹೋಗಲು ಕಾಲೇಜು ಕಟ್ಟಡದಿಂದ ಸುಮಾರು ೩೦೦ ಮೀಟರ್ ದೂರವಿರುವ ಕಾಲೇಜು ಕ್ಯಾಂಪಸ್ ಆವರಣದ ಗೇಟನ್ನು ತೆರೆದು ಎರಡು ಹೆಜ್ಜೆ ಇಡುವಷ್ಟರಲ್ಲೇ ವಿದ್ಯಾರ್ಥಿಗಳ ಗುಂಪು ನನ್ನ ಬಳಿ ಆಕ್ರಮಣಕಾರಿಯಾಗಿ ಓಡಿ ಬಂದು ಬಳಿ ನನ್ನನ್ನು ತರಾಟೆಗೆ ತೆಗೆದುಕೊಂಡಿದೆ. ನಾನು ಪ್ರಾಂಶುಪಾಲರಲ್ಲಿ ಮಾಹಿತಿಗಾಗಿ ತೆರಳುವವನೆಂದು ಹೇಳಿದರೂ, ನನ್ನನ್ನು ಅಲ್ಲಿಂದಲೇ ವಿದ್ಯಾರ್ಥಿಗಳ ಗುಂಪು ವಾಪಸ್ ಕಳುಹಿಸಿದೆ. ಈ ಘಟನೆಯನ್ನು ನನ್ನಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಪೊಲೀಸರು ವಿಡಿಯೋ ಚಿತ್ರೀಕರಣ ಕೂಡಾ ಮಾಡಿದ್ದಾರೆ. ಕಾಲೇಜಿನ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಿ ಪೊಲೀಸರು ತನಿಖೆ ನಡೆಸಲಿ ಆಗ ನಿಜಾಂಶ ಬಯಲಾಗಲಿದೆ. ಇದೊಂದು ಸುಳ್ಳು ದೂರು ಎಂದು ಪತ್ರಕರ್ತ ಸಿದ್ದೀಕ್ ನೀರಾಜೆ ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here