ಹಿಂಜಾವೇಯ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್‌ ರೈ ಕೊಲೆ – ಪೆರ್ಲಂಪಾಡಿ ರಸ್ತೆಯ ಬದಿ ನಡೆದ ಘಟನೆ

0

ಪುತ್ತೂರು: ಎರಡೂವರೆ ವರ್ಷದ ಹಿಂದೆ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್ ಒಳಗಡೆ ನಡೆದಿದ್ದ ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲರವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚರಣ್‌ರಾಜ್ ರೈ(೨೯ವ)ಯವರನ್ನು ಕೊಳ್ತಿಗೆ ಸಮೀಪದ ಪೆರ್ಲಂಪಾಡಿಯಲ್ಲಿ ರಸ್ತೆ ಬದಿಯಲ್ಲೇ ದುಷ್ಕರ್ಮಿಗಳ ತಂಡವೊಂದು ಕುತ್ತಿಗೆ ಮತ್ತು ತಲೆಗೆ ತಲವಾರು ಮತ್ತು ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಜೂನ್ ೪ರಂದು ಸಂಜೆ ನಡೆದಿದೆ.

ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಹಿಂಭಾಗದ ನಿವಾಸಿಯಾಗಿರುವ ಚರಣ್‌ರಾಜ್ ರೈಯವರು ಪೆರ್ಲಂಪಾಡಿಯಲ್ಲಿ ತನ್ನ ಪತ್ನಿಯ ತಂದೆ ಉರುಂಬಿ ನಿವಾಸಿ ಕಿಟ್ಟಣ್ಣ ರೈಯವರ ಮಾಲಕತ್ವದಲ್ಲಿ ಜೂನ್ ೮ರಂದು ಶುಭಾರಂಭಗೊಳ್ಳಲಿರುವ ಮೆಡಿಕಲ್‌ನಲ್ಲಿ ಫರ್ನಿಚರ್, ಔಷಧಿ ಜೋಡಣೆ ಕೆಲಸದ ವೀಕ್ಷಣೆ ಮಾಡಲೆಂದು ತನ್ನ ರಿಡ್ಜ್ ಕಾರಿನಲ್ಲಿ ಬಂದು ಹೊರಗೆ ನಿಂತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ೫ರಿಂದ ೬ ಮಂದಿಯ ತಂಡ ಚರಣ್‌ರಾಜ್ ರೈಯವರನ್ನು ಸುತ್ತುವರಿದು ತಲವಾರು ಮತ್ತು ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಬೈಕ್‌ನಲ್ಲೇ ಪರಾರಿಯಾಗಿದೆ. ಈ ವೇಳೆ ಮೆಡಿಕಲ್‌ನಲ್ಲಿ ಔಷಧಿಗಳ ಜೋಡಣೆಯ ಉಸ್ತುವಾರಿ ನೋಡುತ್ತಿದ್ದ ಚರಣ್ ರೈಯವರ ಸ್ನೇಹಿತ ನವೀನ್ ಕುಲಾಲ್‌ರವರು ಒಳಗೆ ಇದ್ದಂತೆಯೇ ಹೊರಗಡೆ ಚರಣ್‌ರಾಜ್ ರೈಯವರ ಮೇಲೆ ದಾಳಿ ನಡೆದಿದೆ. ಅವರು ತಡೆಯಲು ಹೋಗುತ್ತಿದ್ದಂತೆಯೇ ಗಂಭೀರ ಗಾಯಗೊಂಡಿದ್ದ ಚರಣ್‌ರಾಜ್ ರೈ ಕುಸಿದು ಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಚರಣ್ ರಾಜ್ ರೈಯವರು ತಾಯಿ ಸುಧಾ, ಪತ್ನಿ ಪುತ್ತೂರಿನ ನ್ಯಾಯವಾದಿ ನರಸಿಂಹ ಪ್ರಸಾದ್ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀರಕ್ಷಾ, ಒಂದು ವರ್ಷದ ಗಂಡು ಮಗು, ಸಹೋದರ ಕಿರಣ್ ರೈಯವರನ್ನು ಅಗಲಿದ್ದಾರೆ. ನವೀನ್ ಕುಲಾಲ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಪುತ್ತೂರು ಕಡೆಯಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು: ಚರಣ್‌ರಾಜ್ ರೈಯವರು ಮೆಡಿಕಲ್ ಶಾಪ್‌ನ ಫರ್ನಿಚರ್ ಕೆಲಸವನ್ನು ಹೊರಗಿನಿಂದ ನೋಡುತ್ತಿದ್ದಾಗ ಪುತ್ತೂರು ಕಡೆಯಿಂದ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಚರಣ್‌ರಾಜ್ ರೈಯವರ ಮೇಲೆ ಹಿಂದಿನಿಂದ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಚರಣ್‌ರಾಜ್ ಕುಸಿದು ಬಿದ್ದ ತಕ್ಷಣ ದುಷ್ಕರ್ಮಿಗಳು ತಾವು ಬಂದಿದ್ದ ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.
೫ರಿಂದ ೬ ಮಂದಿಯ ಕೃತ್ಯ: ಎರಡು ಬೈಕ್‌ನಲ್ಲಿ ೫ರಿಂದ ೬ ಮಂದಿ ದುಷ್ಕರ್ಮಿಗಳು ಬಂದಿರುವುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಹಂತಕರು ಯಾವುದೇ ಮುಖಗವಸು ಹಾಕಿರಲಿಲ್ಲ. ನಿರ್ಭೀತಿಯಿಂದ ಬಂದು ಕೊಲೆ ನಡೆಸಿ ’ನಮ್ಮ ಬೇಲೆ ಆಂಡ್’ ಎಂದು ಹೇಳುತ್ತಾ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಕೊಲೆ ಮಾಡಿ ಪರಾರಿಯಾಗುವ ತರಾತುರಿಯಲ್ಲಿ ರಾಡ್‌ವೊಂದನ್ನು ಹಂತಕರು ಅಲ್ಲೇ ಎಸೆದು ಹೋಗಿದ್ದಾರೆ. ತಂಡದಲ್ಲಿ ೫ರಿಂದ ೬ ಮಂದಿ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಹಂತಕರ ಕೃತ್ಯ ಸ್ಥಳೀಯ ಅಂಗಡಿಯ ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.

೬ ಇಂಚು ಆಳದ ಗಾಯ: ದುಷ್ಕರ್ಮಿಗಳು ಮಾರಾಕಾಸ್ತ್ರ ಬೀಸಿದ ರಭಸಕ್ಕೆ ಚರಣ್‌ರಾಜ್ ರೈಯವರ ಕತ್ತಿನಲ್ಲಿ ೬ ಇಂಚು ಆಳದ ಗಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯದ ತೀವ್ರತೆಯಿಂದಾಗಿ ವಿಪರೀತ ರಕ್ತಸ್ರಾವ ಆಗಿತ್ತು. ಚರಣ್‌ರಾಜ್‌ರವರ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು.


ಮೂರು ಗಂಟೆ ರಸ್ತೆ ಬದಿಯಲ್ಲಿದ್ದ ಮೃತದೇಹ : ಕೊಲೆ ಘಟನೆ ಸಂಜೆ ೪ ಗಂಟೆ ಸುಮಾರಿಗೆ ನಡೆದಿದೆ. ಸ್ಥಳದಲ್ಲೇ ಚರಣ್‌ರಾಜ್ ರೈ ಮೃತಪಟ್ಟಿರುವುದರಿಂದ ಅವರ ಮೃತದೇಹವನ್ನು ಕೊಂಡೊಯ್ಯುವುದಕ್ಕೆ ಮೊದಲು ಮಂಗಳೂರಿನಿಂದ ಆಗಮಿಸಿದ ಬೆರಳಚ್ಚು ತಜ್ಞರು ಮತ್ತು ವಿಧಿ ವಿಜ್ಞಾನ ತಂಡದವರು ಕೊಲೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಪೊಲೀಸರು ಘಟನೆ ನಡೆದ ಸ್ಥಳ ಮತ್ತು ಅಂಗಡಿಗೆ ಇರುವ ದೂರ, ದಿಕ್ಕುಗಳ ಕುರಿತು ಮಹಜರು ನಡೆಸಿದ ಬಳಿಕ ೭ ಗಂಟೆ ಸುಮಾರಿಗೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಂಬುಲೆನ್ಸ್‌ನಲ್ಲಿ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಅರ್ಧ ಗಂಟೆ ಮುಂಚೆ ನೀರು ಕುಡಿದಿದ್ದರು: ಚರಣ್‌ರಾಜ್ ರೈಯವರು ನೂತನ ಮೆಡಿಕಲ್‌ಗೆ ಬಂದವರು ಅಲ್ಲೇ ಪಕ್ಕದಲ್ಲಿರುವ ಮನೆಗೆ ತೆರಳಿ ನೀರು ಕೇಳಿ ಕುಡಿದಿದ್ದರು. ಅದಾದ ಅರ್ಧ ಗಂಟೆಯಲ್ಲೇ ಕೊಲೆಯಾಗಿದ್ದಾರೆ. ಕೊಲೆ ಕುರಿತು ನೀರು ನೀಡಿದ ಮನೆಯ ಮಾಲಕಿ ದಿಗ್ಭ್ರಮೆಗೊಳಗಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹಂತಕರ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ

ತಲವಾರು ಮತ್ತು ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಬೈಕ್‌ನಲ್ಲಿ ಬಂದವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಪುತ್ತೂರು ಉಪವಿಭಾಗದ ದಕ್ಷ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆಋಷಿಕೇಶ್ ಸೋನಾವಣೆ ಎಸ್ಪಿ

ಕಾರ್ತಿಕ್ ಮೇರ್ಲಮರ್ಡರ್‌ಗೆ ರಿವೆಂಜ್?

ಕಿಶೋರ್ ತಂಡದ ಕೃತ್ಯ ಶಂಕೆ

೨೦೧೯ರ ಸೆಪ್ಟೆಂಬರ್ ಮೂರರಂದು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವದಲ್ಲಿ ಯಕ್ಷಗಾನ ವೀಕ್ಷಿಸುತ್ತಿದ್ದ ವೇಳೆ ಕೊಲೆಯಾದ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲರವರ ಒಡನಾಡಿಯಾಗಿದ್ದ ಕಿಶೋರ್ ತಂಡದಿಂದ ರಿವೆಂಜ್ ಮರ್ಡರ್ ನಡೆದಿದೆ ಎಂದು ಶಂಕಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚರಣ್ ರಾಜ್ ರೈಯವರಿಗೆ ಇತರ ವಿಚಾರಕ್ಕೆ ಯಾವುದೇ ಶತ್ರುಗಳಿಲ್ಲ. ಕಾರ್ತಿಕ್ ಸುವರ್ಣ ಕೊಲೆಯಾದ ನಂತರ ಅದರ ದ್ವೇಷ ಹಲವರಲ್ಲಿ ಕಿಚ್ಚಾಗಿ ಕಂಡಿತ್ತು. ಇದೇ ಕಾರಣಕ್ಕಾಗಿ ಕಾರ್ತಿಕ್ ಸುವರ್ಣ ಕೊಲೆ ಪ್ರಕರಣದ ಆರೋಪಿಗಳಾದ ಕಿರಣ್ ರೈ, ಚರಣ್ ರಾಜ್ ರೈ ಜೀವ ಭಯದಲ್ಲಿಯೇ ಇರುತ್ತಿದ್ದರು. ಸಹೋದರರು ಹೆಚ್ಚಾಗಿ ಜತೆಯಾಗಿಯೇ ಓಡಾಡುತ್ತಿದ್ದರು. ಕಾರಿನಲ್ಲಿ ಹೋಗಿ ಬರುತ್ತಿದ್ದ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ಅವಶ್ಯಕ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತಿದ್ದರು. ಮಾತ್ರವಲ್ಲದೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟಿನಿಂದ ಜಾಮೀನು ಪಡೆದು ಬಂದಿದ್ದರೂ ಅದರ ಮಾಹಿತಿಯನ್ನು ಗುಪ್ತವಾಗಿ ಇರಿಸಲಾಗಿತ್ತು. ಈ ಮಧ್ಯೆ, ಕಾರ್ತಿಕ್ ಸುವರ್ಣರವರ ಕೊಲೆ ಕೃತ್ಯದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಮಂಗಳೂರಿನ ಪ್ರೀತೇಶ್ ಶೆಟ್ಟಿ ಪರ ಸಾಕ್ಷಿ ನುಡಿಯಬೇಕು ಎಂದು ಬಿರುಮಲೆ ಬೆಟ್ಟದಲ್ಲಿ ಡೀಲ್ ಕುದುರಿಸಲು ಮುಂದಾಗಿದ್ದ ತಾರಿಗುಡ್ಡೆಯ ರಾಧಾಕೃಷ್ಣ ಪೂಜಾರಿಗೆ ದರ್ಬೆ ಪೆಟ್ರೋಲ್ ಬಂಕ್ ನಲ್ಲಿ ದಾಳಿ ಮಾಡಿ ಕೊಲೆ ಯತ್ನ ನಡೆಸಿದ ಕೇಸಿಗೆ ಸಂಬಂಧಿಸಿ ಜೈಲು ಪಾಲಾಗಿದ್ದ ಕಿಶೋರ್ ಮೇರ್ಲ ಮತ್ತು ಆತನ ತಂಡದವರು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರ ಬಂದಿದ್ದರು. ಕಾರ್ತಿಕ್ ಸುವರ್ಣ ಕೊಲೆ ಕೃತ್ಯದ ವಿರುದ್ಧ ಹಲವರು ಧ್ವನಿ ಎತ್ತುತ್ತಿದ್ದರಾದರೂ ಇದರಲ್ಲಿ ಕಿಶೋರ್ ಮುಂಚೂಣಿಯಲ್ಲಿದ್ದರು ಎಂದು ಮಾಹಿತಿ ಸಂಗ್ರಹಿಸಿರುವ ಪೊಲೀಸರು ಈ ಬಗ್ಗೆ ಬಲೆ ಬೀಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಎಸ್ಪಿ ಆಗಮನ
ಕೊಲೆ ನಡೆದ ಮಾಹಿತಿ ತಿಳಿದ ತಕ್ಷಣವೇ ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವನೆ, ಎಡಿಷನಲ್ ಎಸ್ಪಿ ಕುಮಾರಚಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್, ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ ರುಕ್ಮ ನಾಯ್ಕ್, ಸುಳ್ಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನವೀನ್‌ಚಂದ್ರ ಜೋಗಿ, ಸಂಪ್ಯ ಪೊಲೀಸ್ ಠಾಣೆ ಎಸ್.ಐ ಉದಯರವಿ, ಕಡಬ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿ ಸ್ಥಳಕ್ಕೆ ಆಗಮಿಸಿದ್ದರು.

8 ದಿನದ ಹಿಂದೆ ಮಗುವಿನ ಹುಟ್ಟು ಹಬ್ಬ
ಚರಣ್‌ರಾಜ್ ರೈ ಅವರ ಗಂಡು ಮಗುವಿನ ಒಂದನೇ ವರ್ಷದ ಹುಟ್ಟು ಹಬ್ಬವನ್ನು ಸಂಪ್ಯದ ಅವರ ಮನೆಯಲ್ಲಿ ಮೇ ೨೭ರಂದು ಆಚರಿಸಲಾಗಿತ್ತು. ಈ ವೇಳೆ ಮನೆ ಮಂದಿ ಸಂತೋಷದಿಂದ ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಪೆರ್ಲಂಪಾಡಿಯಲ್ಲಿ ಜೆನೆರಿಕ್ ಮೆಡಿಕಲ್ ಮಾಡುವ ಕುರಿತು ಯೋಜನೆ ಹಾಕಿದ್ದ ಚರಣ್‌ರಾಜ್ ರೈಯವರು ತನ್ನ ಮಾವನ ಹೆಸರಿನಲ್ಲಿ ಮೆಡಿಕಲ್ ತೆರೆಯಲು ಸಿದ್ಧತೆ ನಡೆಸಿದ್ದರು. ಜೊತೆಗೆ ಮೆಡಿಕಲ್ ಸಂಸ್ಥೆಗೆ ’ಶ್ರೀಚಕ್ರ ಮೆಡಿಕಲ್’ ಎಂದು ನಾಮಕರಣ ಮಾಡಿ ಅದರ ಬೋರ್ಡ್‌ಗೆ ಆರ್ಡರ್ ಮಾಡಲಾಗಿತ್ತು ಎಂದು ಮೆಡಿಕಲ್‌ನ ಜೋಡಣೆಯ ಉಸ್ತುವಾರಿ ವಹಿಸಿಕೊಂಡಿದ್ದ ನವೀನ್ ಕುಲಾಲ್ ಮಾಹಿತಿ ನೀಡಿದ್ದಾರೆ.

ಗಣೇಶೋತ್ಸವದಲ್ಲಿ ಕಾರ್ತಿಕ್ ಮೇರ್ಲ ಕೊಲೆಯಾಗಿದ್ದರು
ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ೨೦೧೯ರ ಸೆಪ್ಟೆಂಬರ್ ೩ರಂದು ರಾತ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸುತ್ತಿದ್ದ ಹಿಂದೂ ಜಾಗರಣ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲರವರ ಬರ್ಬರ ಕೊಲೆ ನಡೆದಿತ್ತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಿವೃತ್ತ ಮ್ಯಾನೇಜರ್, ಆರ್ಯಾಪು ಮೇರ್ಲದ ರಮೇಶ್ ಸುವರ್ಣರವರ ಪುತ್ರ ಕಾರ್ತಿಕ್ ಅವರು ನೆಹರೂನಗರದಲ್ಲಿ ಧನು ಪಟ್ಲ ಅವರ ಮಾಲಕತ್ವದ ರೂಫಿಂಗ್ ಶೀಟ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದವರು ತನ್ನ ಊರಿನ ಗಣೇಶೋತ್ಸವಕ್ಕೆ ಬಂದು ಯಕ್ಷಗಾನ ವೀಕ್ಷಿಸುತ್ತಿದ್ದರು. ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮತ್ತು ಹಲವಾರು ಸ್ನೇಹಿತರನ್ನು ಹೊಂದಿದ್ದ ಕಾರ್ತಿಕ್ ಸುವರ್ಣರವರನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಆರ್ಯಾಪು ಗ್ರಾಮದ ಚರಣ್‌ರಾಜ್ ರೈ(೨೬ ವ), ಚರಣ್‌ರಾಜ್ ರೈಯವರ ಸಹೋದರ ಕಿರಣ್ ರೈ(೩೬ವ) ಮತ್ತು ಮಂಗಳೂರು ಉಳ್ಳಾಲಬೈಲು ನಿವಾಸಿ ಪ್ರೀತೇಶ್ ಶೆಟ್ಟಿ(೨೮ವ) ಹಾಗೂ ಈ ಮೂವರು ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಮಂಗಳೂರು ಅತ್ತಾವರದ ಸ್ವೀವನ್ ಮೊಂತೆರೋರವರನ್ನು ಪೊಲೀಸರು ಬಂಧಿಸಿದ್ದರು. ಕೆಲವೇ ದಿನಗಳಲ್ಲಿ ಅತ್ತಾವರದ ಸ್ಟೀವನ್ ಮೊಂತೆರೋ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ವರ್ಷದ ಬಳಿಕ ಚರಣ್ ರಾಜ್ ರೈ ಮತ್ತು ಅವರ ಸಹೋದರ ಕಿರಣ್ ರೈ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇನ್ನೊಬ್ಬ ಆರೋಪಿ ರೌಡಿ ಶೀಟರ್ ಪ್ರೀತೇಶ್ ಶೆಟ್ಟಿ ಇನ್ನೂ ಜೈಲಿನಲ್ಲಿದ್ದಾನೆ.

                                    ಕೃತ್ಯಕ್ಕೆ ಉಪಯೋಗಿಸಿದ ಆಯುಧ

 

ಚರಣ್‌ ರಾಜ್‌ ರೈ ಅವರ ಕಾರು

LEAVE A REPLY

Please enter your comment!
Please enter your name here