ಪುತ್ತೂರು.ಜೂ,02: ಈಗಿನ ಆಧುನಿಕ ಯುಗದಲ್ಲಿ ಎಲ್ಲಾ ವಿಷಯಗಳ ಮಾಹಿತಿ ಅತ್ಯಂತ ಸುಲಭವಾಗಿ ಸಿಗುತ್ತದೆ. ಇವುಗಳನ್ನು ಸಕಾರಾತ್ಮಕ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕು. ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಕೂಡ ನಿರ್ಧಾರ ತೆಗೆದುಕೊಳ್ಳುವ ಮನೋಭಾವ ನಮ್ಮದಾಗಬೇಕು ಹಾಗೂ ಇದು ನಮ್ಮ ಜವಾಬ್ದಾರಿಯಾಗಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವ್ಯವಹಾರ ನಿರ್ವಹಣೆ ವಿಭಾಗ ಹಾಗೂ ಉದ್ಯೋಗ ಮಾಹಿತಿ ಮತ್ತು ಐಕ್ಯೂಎಸಿ ಘಟಕ ಇದರ ಸಹಯೋಗದಲ್ಲಿ ಆಯೋಜಿಸಿದ ಉದ್ಯೋಗ ಹಾಗೂ ಸಂವಹನ ಎಂಬ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಯ ಅಭಿರುಚಿ ಬೇರೆ ಬೇರೆಯಾಗಿರುತ್ತದೆ. ಇಂತಹ ಕಾರ್ಯಗಾರಗಳು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾಗುತ್ತದೆ. ವಿದ್ಯಾರ್ಥಿಗಳು ಹಿಂಜರಿಕೆಯಿಂದ ಹೊರಬಂದು ಇದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಳ್ಳೆಯ ಜೀವನವನ್ನು ಹೊಂದಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ವ್ಯವಹಾರ ನಿರ್ವಹಣೆ ವಿಭಾಗದ ಮುಖ್ಯಸ್ಥೆ ರೇಖಾ.ಪಿ ಮಾತನಾಡಿ, ಜೀವನವು ನಮಗೆ ಬೇಕಾದನ್ನು ನೀಡುವುದಿಲ್ಲ, ನಾವು ಯಾವುದಕ್ಕೆ ಅರ್ಹವಾಗಿರುತ್ತೇವೆಯೋ ಅದನ್ನು ನೀಡುತ್ತದೆ. ಅವುಗಳನ್ನು ತಮ್ಮ ತಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಕಾಲೇಜಿನ ವ್ಯವಹಾರ ನಿರ್ವಹಣೆ ವಿಭಾಗದ ಉಪನ್ಯಾಸಕರಾದ ದೀಪಿಕಾ. ಎಸ್ ಹಾಗೂ ಗೌತಮ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತೃತೀಯ ಬಿಬಿಎ ವಿದ್ಯಾರ್ಥಿನಿ ಮೇಘ ಸ್ವಾಗತಿಸಿ, ಆಶಿಶ್ ಎನ್.ಎಮ್ ವಂದಿಸಿದರು. ತೃತೀಯ ಬಿಬಿಎ ವಿದ್ಯಾರ್ಥಿನಿ ಕೃಪಾ ಕಾರ್ಯಕ್ರಮ ನಿರೂಪಿಸಿದರು.