ಪುತ್ತೂರು: ಪ್ಲಾಟಿನಂ ಫ್ಲಸ್ ಅವಾರ್ಡ್ ಪುರಸ್ಕೃತಗೊಂಡ ರೋಟರಿ ಕ್ಲಬ್ ಪುತ್ತೂರು ಮತ್ತು ಇನ್ನರ್ವೀಲ್ ಕ್ಲಬ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಡಾ. ಕುಶಾಲಪ್ಪ ಅಭಿಕಾರ್ ಅವರ ನಿವಾಸದಲ್ಲಿ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಎ.ಜೆ.ರೈ ಅವರು ಭಾಗವಹಿಸಿ ಮಾತನಾಡಿ ರೋಟರಿಯ ಕಾರ್ಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಬಂದಿರುವುದು ಉತ್ತಮ ವಿಚಾರ. ಮುಂದಿನ ದಿನಗಳಲ್ಲಿ ದೇಶದ ಬೆಳವಣಿಗೆಗೆ ಮಹತ್ತರ ಪಾತ್ರ ವಹಿಸಲಿ ಎಂದರು.
ರೋಟರಿಯಿಂದ ವಿವಿಧ ಯೋಜನೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು ಅವರು ಮಾತನಾಡಿ ರೋಟರಿ ಕ್ಲಬ್ ತನ್ನ ಕಾರ್ಯವೈಖರಿಯ ಮೂಲಕ ಪ್ಲಾಟಿನಂ ಫ್ಲಸ್ ಪ್ರಶಸ್ತಿ ಪಡೆದಿದೆ. ಮುಂದೆ ಹಲವು ಯೋಜನೆ ರೋಟರಿ ಮುಂದಿದೆ ಎಂದ ಅವರು ಮುಂದಿನ ಕಾರ್ಯಕ್ರಮದ ಕುರಿತು ವಿವರಿಸಿದರು.
ಆರ್ಥಿಕ ನೆರವು, ಸಾಧಕರಿಗೆ ಸನ್ಮಾನ:
ಬೆನ್ನುಮೂಳೆ ಮುರಿತಕ್ಕೊಳಗಾದ ಲಾರೆನ್ಸ್ ಡಿಸೋಜ ಎಂಬವರಿಗೆ ರೋಟರಿ ಕ್ಲಬ್ ವತಿಯಿಂದ ಚಿಕಿತ್ಸೆಗೆ ಆರ್ಥಿಕ ನೆರವಿನ ರೂಪದಲ್ಲಿ ರೂ. 10ಸಾವಿರವನ್ನು ಚೆಕ್ ಮೂಲಕ ನೀಡಲಾಯಿತು. ಎಸ್ಎಸ್ಎಲ್ಸಿಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ತನಿಷಾ ರೈ, ವೈದ್ಯಕೀಯ ಕ್ಷೇತ್ರದ ಉನ್ನತನ ಶಿಕ್ಷಣದಲ್ಲಿ ರ್ಯಾಂಕ್ ಪಡೆದ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಶ್ರೀಪತಿ ರಾವ್ ಅವರ ಪುತ್ರಿ ಡಾ. ಸ್ಮಿತಾ ಯಸ್ ರಾವ್ ಮತ್ತು ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಎಸ್ ದಂಪತಿ ಪುತ್ರಿ ಡಾ. ವರ್ಷಾ ಅವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಚಿದಾನಂದ ಬೈಲಾಡಿ ಮತ್ತು ರಾಜಗೋಪಾಲ್ರವರು ಸನ್ಮಾನಿತರನ್ನು ಪರಿಚಯಿಸಿದರು. ವಿದ್ಯಾಶ್ರೀ ಪ್ರಾರ್ಥಿಸಿದರು. ಕಾರ್ಯಕ್ರಮದ ಪ್ರಾಯೋಜಕ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಡಾ. ಕುಶಾಲಪ್ಪ ಅಭಿಕಾರ್ ಸ್ವಾಗತಿಸಿ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷ ವೀಣಾ ಬಿ.ಕೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು.