ಪುತ್ತೂರು : ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಗತ ವರುಷಗಳ ಸಾರಂಶಗಳನ್ನೊಳಗೊಂಡ ಕಿರು ಕೈಪಿಡಿ ಬಿಡುಗಡೆ ದರ್ಬೆ ವಿನಾಯಕ ನಗರದಲ್ಲಿನ ಸಚ್ಚಿದಾನಂದ ಸೇವಾ ಸದನದಲ್ಲಿ ಸಂಘದ ಅಧ್ಯಕ್ಷ ಶುಭಕರ ರಾವ್ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಪ್ರಾಸ್ತಾವಿಕ ಮಾತನಾಡಿ ಸಮೃದ್ಧ ಸಮಾಜ ನಿರ್ಮಾಣವೇ ನಮ್ಮ ಗುರಿಯಾಗಬೇಕು. ಹಿರಿಯರ ಕನಸಿನಂತೆ ಶೈಕ್ಷಣಿಕ, ಸಾಮಾಜಿಕ ಔದ್ಯೋಗಿಕ ರಂಗಗಳಲ್ಲಿ ಸಂಘವು ಅಭಿವೃದ್ಧಿ ಹೊಂದಲು ಒಗ್ಗೂಡಬೇಕು ಮತ್ತು ಎಲ್ಲಾ ಸಮಾಜದವರಲ್ಲೂ ಸಾಮರಸ್ಯ ಹೊಂದಿರಬೇಕು ಎಂದು ಕರೆಕೊಟ್ಟರು. ಕೆ.ಎಂ.ಎಫ್ ಮಂಗಳೂರಿನ ಮಾಜಿ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ನಾಯಕ್ ಪೋರೋಳಿ ಗತವರ್ಷಗಳ ಸಾರಾಂಶದ ಕಿರು ಕೈಪಿಡಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾರಸ್ವತ ಸಂಘಸಂಸ್ಥೆಗಳ ಕೇಂದ್ರೀಯ ಸಮಿತಿಯ ಅಧ್ಯಕ್ಷ ಉಮೇಶ್ ಪ್ರಭು ಶತಮಾನೋತ್ಸವದ ಯಶಸ್ಸಿಗೆ ಶುಭಹಾರೈಸಿದರು. ಕೈಪಿಡಿ ಬಿಡುಗಡೆಯ ಬಳಿಕ ಶತ ಸಂಭ್ರಮದ ಶತಕಾರ್ಯಕ್ರಮಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಶತಮಾನನೋತ್ಸವ ಸಮಿತಿ ರಚಿಸಿ ಕಾರ್ಯಕ್ರಮದ ಯಶಸ್ಸಿಗೆ ರೂಪರೇಷೆ ತಯಾರಿಸಲಾಯಿತು. ಇತ್ತೀಚೆಗೆ ಅಗಲಿದ ಸ್ವಸಮಾಜ ಬಂಧುಗಳಿಗೆ ಮತ್ತು ಹುತಾತ್ಮಯೋಧರಿಗೆ ಸಭಾ ಕಾರ್ಯಕ್ರಮದ ಆರಂಭದಲ್ಲಿ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಸಂಘದ ಜತೆ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಸ್ವಾಗತಿಸಿ, ಸಂಘದ ನಿರ್ದೇಶಕ ಬಾಲಕೃಷ್ಣ ನಾಯಕ್ ತೆಂಕಿಲ ವಂದಿಸಿದರು. ರೇಖಾ ರಮೇಶ್ ಪ್ರಭು ಪ್ರಾರ್ಥಿಸಿದರು. ಹರಿಪ್ರಸಾದ ಎಮ್. ಪುಂಡಿಕಾಯ್ ಕಾರ್ಯಕ್ರಮ ನಿರ್ವಹಿಸಿದರು.