ಪುತ್ತೂರು: ಮಲಂಕರ ಧರ್ಮಪ್ರಾಂತ್ಯದ ವತಿಯಿಂದ ನಡೆಸಲ್ಪಡುವ ಪಂಜಳ ಶಾಂತಿಗಿರಿ ವಿದ್ಯಾನಿಕೇತನ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರಿನ ಮೌಲಾನಾ ಅಜಾದ್ ಮಾದರಿ ಶಾಲೆಯ ಉಪ ಪ್ರಾಂಶುಪಾಲ ಮಹಮ್ಮದ್ ತೌಫೀಕ್ ರವರು ಮಾತನಾಡಿ, ಪೋಷಕರು ಗೌರವ, ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಮಕ್ಕಳ ಕಲಿಕಾ ಬೆಳವಣಿಗೆ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು. ಜೊತೆಗೆ ವಿವಿಧ ಇಲಾಖೆಗಳಿಂದ ನಿಗದಿಸಲ್ಪಟ್ಟಿರುವ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ವಂ.ಬಿಜು ಕೆ.ಜಿ ಯವರು ಆಯ್ಕೆಗೊಂಡ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು ಜೊತೆಗೆ ಪ್ರಸ್ತುತ ಶಾಲೆಯು 4 ನೇ ವರ್ಷಕ್ಕೆ ಪಾದಾರ್ಪಣೆ ಗೊಳ್ಳುತ್ತಿದ್ದು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಲಭಿಸುವ ಬಗ್ಗೆ ಹಾಗೂ ಪೋಷಕರ ಕನಸು ನನಸಾಗುವ ಮೂಲಕ ಪ್ರತೀ ವಿದ್ಯಾರ್ಥಿಯು ಬೆಳೆಯುವಂತಾಗಲಿ ಎಂದು ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ವಿಲ್ಮಾ ಮೊಂತೆರೋ ರವರು ವಿದ್ಯಾ ಸಂಸ್ಥೆಯ ಬೆಳವಣಿಗೆಯ ಹಾದಿ, ಶಾಲಾ ನೀತಿ ನಿಯಮಗಳು ಮತ್ತು 2022- 23ನೇ ಸಾಲಿನ ಶಾಲೆಯ ಮಾಹಿತಿ ವಿವರಗಳ ವರದಿಯನ್ನು ವಾಚಿಸಿದರು.
ಸಭೆಯಲ್ಲಿ ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಸಂತೋಷ್, ಕಾರ್ಯದರ್ಶಿಯಾಗಿ ರಾಕೇಶ್ ಮತ್ತು ಖಜಾಂಜಿ ಯಾಗಿ ಆಶಾರಾಣಿ ಅವಿರೋಧವಾಗಿ ಆಯ್ಕೆಗೊಂಡರು.
ಅಕ್ಷತಾ ಕಾರ್ಯಕ್ರಮ ನಿರೂಪಿಸಿ, ದೀಕ್ಷಿತಾ ಸ್ವಾಗತಿಸಿದರು. ಜೆಸಿಂತಾ ಅತಿಥಿಗಳ ಕಿರು ಪರಿಚಯ ಮಾಡಿದರು. ಶೈಲಜಾ ಆರ್ ಶೆಟ್ಟಿ ಮತ್ತು ಅಶ್ವತಿ ಅರವಿಂದ್ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಿಕೊಟ್ಟರು. ಕಾವ್ಯ ವಂದಿಸಿದರು. ಸಭೆಯಲ್ಲಿ ಶಾಂತಿಗಿರಿ ವಿದ್ಯಾ ನಿಕೇತನ ಶಾಲೆ ಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.