ನೆಟ್ಟಣಿಗೆ ಮುಡ್ನೂರು ಗ್ರಾಪಂ ಸಾಮಾನ್ಯ ಸಭೆ

0

  • ಗ್ರಾಮದಲ್ಲಿ ಮಲೇರಿಯಾ, ಡೆಂಗ್ಯೂ ಬಗ್ಗೆ ಮನೆಮನೆಗಳಲ್ಲಿ ಜಾಗೃತಿ ಮೂಡಿಸಲು ಕ್ರಮ

ಪುತ್ತೂರು: ಮಳೆಗಾಲದಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಸೇರಿದಂತೆ ಕೆಲವೊಂದು ಸಾಂಕ್ರಾಮಿಕ ರೋಗಗಳು ಬರುತ್ತಿದ್ದು ಇದರ ಬಗ್ಗೆ ಗ್ರಾಮದ ಪ್ರತೀ ಮನೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಗ್ರಾಪಂ ಹಾಗೂ ಆಶಾ ಕಾರ್ಯಕರ್ತರ ಸಹಕಾರದಿಂದ ನಡೆಸಲು ನೆಟ್ಟಣಿಗೆ ಮುಡ್ನೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಾಮಾನ್ಯ ಸಭೆಯು ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಮಳೆಗಾಲದಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ಜ್ವರಗಳು ಎಲ್ಲಡೆ ಕಂಡು ಬರುತ್ತದೆ. ಸೊಳ್ಳೆಗಳು ಹೇಗೆ ರೋಗ ಹರಡಲು ಕಾರಣವಾಗುತ್ತದೆ. ಜನರಲ್ಲಿ ಅವುಗಳಿಂದ ಹೇಗೆ ರಕ್ಷಣೆ ಹೊಂದಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಗ್ರಾಪಂ ಮಾಡಲಿದೆ. ಗ್ರಾಮಸ್ಥರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅವುಗಳಿಗೆ ಬೇಕಾದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮವನ್ನು ಗ್ರಾಮಸ್ಥರ ಸಹಕಾರದಿಂದ ಮಾಡಬೇಕಾಗಿದ್ದು ಇದಕ್ಕಾಗಿ ಎಲ್ಲಾ ಗ್ರಾಮಸ್ಥರ ಸಹಕಾರವನ್ನು ಕೋರಲಾಯಿತು. ಈ ಬಾರಿ ಮಳೆಗಾಲದಲ್ಲಿ ಯಾವುದೇ ಸಾಂಕ್ರಾಮಿಕ ಜ್ವರಗಳು ಗ್ರಾಮದಲ್ಲಿ ಹರಡದಂತೆ ಮತ್ತು ಇದರಿಂದ ಗ್ರಾಮದಲ್ಲಿ ಯಾವುದೇ ಪ್ರಾಣಾಪಾಯಗಳು ಉಂಟಾಗದಂತೆ ಎಲ್ಲರೂ ಮುತುವರ್ಜಿವಹಿಸಬೇಕು. ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಸ್ವಚ್ಚತೆಯತ್ತ ಗಮನಹರಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು.

ಬಿಲ್‌ಪಾವತಿಸದೇ ಇದ್ದರೆ ಸಂಪರ್ಕ ಕಟ್
ಗ್ರಾಮದಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದು ಬಿಲ್ ಬಾಕಿ ಇರುವ ಮಂದಿ ಬಿಲ್ ಪಾವತಿಸುವಂತೆ ಸಮಯವಕಾಶವನ್ನು ನೀಡಲಾಗಿದೆ. ಗ್ರಾಮದ ಅಭಿವೃದ್ದಿಯ ದೃಷ್ಟಿಯಿಂದ ಎಲ್ಲರೂ ಸಕಾಲಕ್ಕೆ ಬಿಲ್ ಪಾವತಿ ಮಾಡಬೇಕಿದೆ. ಅವಧಿ ಮೀರಿ ಬಿಲ್ ಪಾವತಿಸದೇ ಇರುವವರ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಗ್ರಾಮದಲ್ಲಿ ಹಲವು ಮಂದಿಯಿಂದ ಬಿಲ್ ಬಾಕಿ ಇದ್ದು ಇದರು ನೀರಿನ ನಿರ್ವಹಣೆ ಮಾಡುವಲ್ಲಿ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ಆರೋಪಗಳು ವ್ಯಕ್ತವಾಯಿತು. ಎಲ್ಲರಿಗೂ ನೊಟೀಸ್ ನೀಡಿ ಆ ಬಳಿಕವೂ ಪಾವತಿಸದೇ ಇದ್ದರೆ ಸಂಪರ್ಕ ಕಡಿತ ಮಾಡುವುದಾಗಿ ತೀರ್ಮಾನಿಸಲಾಯಿತು.

ಘಟಕ ಉದ್ಘಾಟನೆಗೆ ಶಾಸಕರಲ್ಲಿ ಕೇಳಿ ದಿನ ನಗದಿ
ಗ್ರಾಮದಲ್ಲಿ ನಿರ್ಮಾಣವಾಗಿರುವ ಘನತ್ಯಾಜ್ಯ ಘಟಕ, ಅಂಗನವಾಡಿ ಕಟ್ಟಡ ಮತ್ತು ಶೌಚಾಲಯದ ಉದ್ಘಾಟನೆಗೆ ದಿನ ನಿಗದಿ ಮಾಡಿಲ್ಲ, ಶಾಸಕರಾದ ಸಂಜೀವ ಮಠಂದೂರು ಅವರಲ್ಲಿ ಕೇಳಿ ದಿನ ನಿಗದಿ ಮಾಡಿ ಆ ದಿನ ಅದರ ಉದ್ಘಾಟನೆ ನಡೆಯಲಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಘನ ತ್ಯಾಜ್ಯ ಘಟಕದ ಉದ್ಘಾಟನೆಯಾದ ಬಳಿಕ ಕಸ ಮುಕ್ತ, ತ್ಯಾಜ್ಯ ಮುಕ್ತ ಗ್ರಾಮವಾಗಿ ನೆಟ್ಟಣಿಗೆ ಮುಡ್ನೂರು ರೂಪುಗೊಳ್ಳಲಿದೆ. ಎಲ್ಲಾ ವರ್ತಕರಿಗೆ ಗಾರ್ಬೇಜ್ ಬ್ಯಾಗನ್ನು ನೀಡಲಾಗುತ್ತದೆ, ಆ ಬಳಿಕ ತ್ಯಾಜ್ಯವನ್ನು ಬೇರ್ಪಡಿಸಿ ಬ್ಯಾಗ್‌ಗಳಲ್ಲಿ ತುಂಬಿಸಿಡಬೇಕಾಗುತ್ತದೆ. ಎಲ್ಲೆಡೆ ಕಸವನ್ನು ಎಸಯುವುದನ್ನು ಗ್ರಾಮದಲ್ಲಿ ನಿಷೇಧಿಸಿ ಸ್ವಚ್ಚತೆಯತ್ತ ಎಲ್ಲರೂ ಗಮನಹರಿಸಬೇಕಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಫೌಝಿಯಾ, ಗ್ರಾಪಂ ಸದಸ್ಯರುಗಳಾದ ವೆಂಕಪ್ಪ ನಾಯ್ಕ, ಲಲಿತಾ ಸುಧಾಕರ, ಇಬ್ರಾಹಿಂ ಕೆ, ಭಾಸ್ಕರ್, ರಾಮ ಮೇನಾಲ, ಲಲಿತಾ ಶೆಟ್ಟಿ, ಇಂದಿರಾ, ಚಂಧ್ರಹಾಸ ಎಂ, ಶಶಿಕಲಾ ರೈ, ಕುಸುಮ, ಮಹಮ್ಮದ್ ರಿಯಾಝ್, ಪ್ರದೀಪ್ ಕುಮಾರ್ ರೈ, ಕುಮಾರನಾಥ, ಶ್ರೀರಾಂ ಪಕ್ಕಳ, ವತ್ಸಲ ಉಪಸ್ಥಿತರಿದ್ದರು.

ಪಿಡಿಒ ಸಂದೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾ ವರದಿ ವಾಚಿಸಿದರು.   ಸಿಬ್ಬಂದಿಗಳಾದ ಶೀನಪ್ಪ, ಚಂದ್ರಶೇಖರ, ಮಲ್ಲೇಶ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here