- ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರನಿಗೆ ಸ್ಕೆಚ್ ಹಾಕಿದ ಭೂಗತ ಪಾತಕಿಗಳು
- ಬೆಂಗಳೂರು, ಮಂಗಳೂರು ಪೊಲೀಸರಿಂದ ತನಿಖೆ ಆರಂಭ
- ಭೂಗತ ಪಾತಕಿಗಳೊಂದಿಗೆ ಕೈ ಜೋಡಿಸಿದರೇ ಪುತ್ತೂರಿನವರು?
ಪುತ್ತೂರು: ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದವರಾಗಿದ್ದು ಚಿಕ್ಕಮುಡ್ನೂರು ಗ್ರಾಮದ ಉರಮಾಲು ನಿವಾಸಿಯಾಗಿರುವ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಗುಣರಂಜನ್ ಶೆಟ್ಟಿಯವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿಯವರ ಸಹೋದರನೂ ಆಗಿರುವ ಯುವ ಉದ್ಯಮಿ ಗುಣರಂಜನ್ ಶೆಟ್ಟಿಯವರನ್ನು ಕೊಲೆ ಮಾಡಲು ಸಂಚು ರೂಪಿಸಿರುವ ಕುರಿತು ಬೆಂಗಳೂರು ಮತ್ತು ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭೂಗತ ಲೋಕದ ಮಾಜಿ ಡಾನ್, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್. ಮುತ್ತಪ್ಪ ರೈಯವರ ಆಪ್ತರೂ, ಮುತ್ತಪ್ಪ ರೈಯವರ ಜೀವಿತದ ಕೊನೆಯ ಕಾಲದವರೆಗೂ ಅವರೊಂದಿಗೆ ಇದ್ದ ಗುಣರಂಜನ್ ಶೆಟ್ಟಿಯವರನ್ನು ಮುಗಿಸಲೇ ಬೇಕು ಎಂದು ಪಣ ತೊಟ್ಟಿರುವ ಗ್ಯಾಂಗ್ ಸ್ಟರ್ ಗಳು ಕೊಲೆಗೆ ಸಂಚು ರೂಪಿಸಿರುವುದನ್ನು ಪೊಲೀಸರು ಖಾತರಿ ಪಡಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿ, ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ಗುಣರಂಜನ್ ಶೆಟ್ಟಿಯವರು ಈಗಾಗಲೇ ನಾಲ್ವರು ಅಂಗ ರಕ್ಷಕರನ್ನು ಹೊಂದಿದ್ದಾರೆ. ಖಾಸಗಿ ಏಜೆನ್ಸಿ ಮೂಲಕ ಭದ್ರತೆ ಪಡೆದುಕೊಂಡಿರುವ ಗುಣರಂಜನ್ ಶೆಟ್ಟಿಯವರಿಗೆ ಅನಿವಾರ್ಯವಾದರೆ ಪೊಲೀಸ್ ಇಲಾಖೆಯಿಂದಲೂ ಭದ್ರತೆ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೆ, ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಇದುವರೆಗೆ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳದ ಗುಣರಂಜನ್ ಶೆಟ್ಟಿಯವರನ್ನು ಯಾವ ಕಾರಣಕ್ಕೆ ಟಾರ್ಗೆಟ್ ಮಾಡಲಾಗಿದೆ ಎಂಬುದು ಬಹಿರಂಗವಾಗಿಲ್ಲ. ಗುಣರಂಜನ್ ಅವರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿರುವ ಭೂಗತ ಪಾತಕಿಗಳ ತಂಡದಲ್ಲಿ ಪುತ್ತೂರು ಮೂಲದ ವ್ಯಕ್ತಿಯೋರ್ವರಿದ್ದಾರೆ ಎಂದು ಶಂಕಿಸಿ ಪೊಲೀಸ್ ತನಿಖೆ ನಡೆಯುತ್ತಿದೆ.