ಪುತ್ತೂರು: ಮಳೆಗಾಲ ಸಮೀಪಿಸುತ್ತಿದ್ದಂತೆಯೇ ತೆಂಗಿನ ಕಾಯಿ ಕೀಳುವ ಕೆಲಸ ಎಲ್ಲಡೆ ನಡೆಯುತ್ತಿದೆ. ಬಹುತೇಕ ಕ್ರ್ಷಿಕರು ಮೇ ತಿಂಗಳ ಅಂತ್ಯದಲ್ಲಿ ತೆಂಗಿನ ಕಾಯಿ ಕೊಯ್ದು ಅದನ್ನು ಶೇಖರಿಸಿಡುವ ಪರಿಪಾಠವಿದೆ. ಮಳೆಗಾಲದಲ್ಲಿ ಬೀಳುವ ತೆಂಗಿನ ಕಾಯಿ ಮಳೆ ನೀರಿಗೆ ಬೊಳ್ಳಕ್ಕೆ ಹೋಗುವುದೇ ಅಧಿಕ. ಈ ಕಾರಣಕ್ಕೆ ಕರಾವಳಿಯ ಬಹುತೇಕ ಕೃಷಿಕರು ಈಗ ತೆಂಗಿನ ಕಾಯಿ ಕೀಳುವ ಕೆಲಸದಲ್ಲಿ ನಿರತರಾಗಿದ್ದು ಇದಕ್ಕಾಗಿ ಕಾರ್ಮಿಕರ ಕೊರತೆ ಎಲ್ಲಡೆ ಕಂಡು ಬರುತ್ತಿದೆ.
ತೆಂಗಿನ ಮರಕ್ಕೆ ಹತ್ತಿ ಕಾಯಿ ಕೀಳುವ ವೃತ್ತಿ ಅದೊಂದು ಸಾಹಸಮಯಿ ಕೆಲಸವಾಗಿದೆ. ಈ ಕಾಯಕ ಎಲ್ಲರಿಗೂ ಬರುವುದಿಲ್ಲ. ತೆಂಗಿನ ಮರಕ್ಕೆ ಹತ್ತಿ ರೂಡಿಯಲ್ಲಿದ್ದವರು ಮತ್ರ ಆ ಕೆಲಸವನ್ನು ಮಾಡಬೇಕಿದೆ. ಮರ ಹತ್ತಿ ಅಭ್ಯಾಸ ಇಲ್ಲದವರನ್ನು ಕರೆಸಿ ಕಾಯಿ ಕೀಳಿಸಲು ಬಹುತೇಕರಿಗೆ ಧೈರ್ಯವಿಲ್ಲ. ಕಾಯಿ ಕೊಯ್ಯುವ ದೋಂಟಿ ಮಾರುಕಟ್ಟೆಯಲ್ಲಿದ್ದರೂ ಎತ್ತರಕ್ಕೆ ಬೆಳೆದ ತೆಂಗಿನ ಮರದಿಂದ ಕಾಯಿ ಕೊಯ್ಯಬೇಕಾದರೆ ಮರಕ್ಕೆ ಹತ್ತಲೇ ಬೇಕಾಗಿದೆ. ಮಳೆಗಾಲದಲ್ಲಿ ಅಡಕೆ ಮರಕ್ಕೆ ಔಷದಿ ಬಿಡುವ ಕಾರ್ಮಿಕರ ಕೊರತೆಯಂತೆಯೇ ತೆಂಗಿನ ಕಾಯಿ ಕೀಳುವ ಕಾರ್ಮಿಕರ ಕೊರತೆಯು ಉಂಟಾಗಿದೆ.