ವಿವೇಕಾನಂದ ಕಾಲೇಜಿನಲ್ಲಿ ಪ್ರೇರಣ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭ

0

  • ದೇಶಕ್ಕಾಗಿ ಪರಿಪೂರ್ಣವಾದ ವ್ಯಕ್ತಿಗಳನ್ನು ತಯಾರಿಸಬೇಕಾಗಿದೆ: ಗಿರೀಶ್ ನಂದನ್

ಪುತ್ತೂರು: ಭಾರತದ ಭವಿಷ್ಯದ ಅಧಿಕಾರಿಗಳನ್ನು, ನ್ಯಾಯವಾದಿಗಳನ್ನು ಪ್ರೇರೇಪಿಸುವಂತಹ ಹಾಗೂ ಉತ್ತಮ ಮಾರ್ಗಗಳನ್ನು ಕಲ್ಪಿಸಿಕೊಡುವಲ್ಲಿ ಇಂತಹ ಪ್ರೇರಣ ಶಿಬಿರವು ಮಹತ್ತರ ಪಾತ್ರವನ್ನು ವಹಿಸುತ್ತದೆ. ನಮ್ಮಲ್ಲಿ ಧನಾತ್ಮಕತೆ, ಶ್ರದ್ಧೆ, ಛಲ, ಹುಮ್ಮಸು ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಜೀವನಕ್ಕೆ ಬೇಕಾದ ಎಲ್ಲಾ ಪಾಠಗಳನ್ನು ಹೇಳಿಕೊಡುತ್ತಿರುವ ಈ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ವಿವಿಧ ತರಬೇತಿ ಘಟಕದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ‘ಪ್ರೇರಣ’ ವಾರ್ಷಿಕ ಶಿಬಿರದ ಉದ್ಘಾಟಕರಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.

ನಮ್ಮಲ್ಲಿರುವ ಗುಣಗಳು ಹೃದಯದಿಂದ ಬರಬೇಕೇ ಹೊರತು ತೋರಿಕೆಗಾಗಿ ಅಲ್ಲ. ನಮ್ಮ ನಡವಳಿಕೆ ಹವ್ಯಾಸವಾಗಿ ಹೊರಬರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಕಷ್ಟು ಅವಕಾಶಗಳು ದೊರಕಲು ಸಾಧ್ಯ. ನಮ್ಮ ದೇಶದ ಉತ್ತಮ ಭವಿಷ್ಯಕ್ಕಾಗಿ ಈಗಾಗಲೇ ನಾವು ಪರಿಪೂರ್ಣವಾದ ಶಿಕ್ಷಕರನ್ನು, ಅಧಿಕಾರಿಗಳನ್ನು ತಯಾರಿಸಬೇಕಾಗಿದೆ ಹಾಗೂ ಮುಂದಿನ ಗುರಿಯ ಬಗ್ಗೆ ಸ್ಪಷ್ಟ ಯೋಚನೆಯನ್ನು ಇಂದೇ ನಿರ್ಧರಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್‌ಕಲ್ಲಡ್ಕ ಮಾತನಾಡಿ, ಅಂದು ಸೂಕ್ತ ಶಿಕ್ಷಣದ ಕೊರತೆಯಿಂದ ಹಿಂದುಳಿದ ಭಾರತ ಇಂದು ಹೊಸ ಶಿಕ್ಷಣ ನೀತಿಯಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಇತಿಹಾಸದಲ್ಲಿ ಮರೆಮಾಚಿದ ನೈಜ ಘಟನಧಾರಿತ ವಿಷಯಗಳು ಬೆಳಕಿಗೆ ಬರುತ್ತಿದ್ದು ಇಂದು ದೇಶವು ಪರಿವರ್ತನೆಯ ಹಾದಿಯಲ್ಲಿದೆ. ಭಾರತ ಬಲಿಷ್ಟ ಹಾಗೂ ಅಖಂಡವಾಗಿ ತಲೆಯೆತ್ತಿ ನಿಲ್ಲಬೇಕು. ತರುಣ ಶಕ್ತಿ ಜಾಗೃತವಾಗಿ ನಮ್ಮ ಪ್ರಯಾಣ ಪ್ರಗತಿಯತ್ತ ಸಾಗಬೇಕು. ನಮ್ಮ ದೇಶ,ಸಂಸ್ಕೃತಿ,ಮೌಲ್ಯ, ಇದರ ಆಧಾರದಲ್ಲಿ ನಡೆದು ನಮಗೆ ನಾವೇ ಮಾರ್ಗದರ್ಶಕರಾಗಿ ಭಾರತವನ್ನು ಉನ್ನತ ಮಟ್ಟಕ್ಕೆ ಏರಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಪ್ರೇರಣ ಶಿಬಿರದ ಸಂಯೋಜಕ ಗಣಪತಿ ಹೆಗಡೆ ಮಾತನಾಡಿ, ಭವಿಷ್ಯದಲ್ಲಿ ನಾವು ಪರಿಪೂರ್ಣ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಬೇಕು. ಆಂತರಿಕವಾಗಿ ನಾವೆಲ್ಲರು ಸದೃಢ ದೇಶಭಕ್ತರಾಗಬೇಕು, ಅಲ್ಲದೇ ಮೌಲ್ಯಗಳನ್ನು ಅರಿತುಕೊಂಡು, ಬದುಕಿನಲಿ ಯಾವ ರೀತಿ ಬದುಕಬೇಕು ಎಂಬ ಕಲ್ಪನೆಯನ್ನು ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಜಿ ಅಚ್ಚುತ ನಾಯಕ್ ಮಾತನಾಡಿ, ಒಬ್ಬ ವ್ಯಕ್ತಿಗೆ ಸಂಸ್ಕಾರಕೊಟ್ಟಾಗ ಮಾತ್ರ ಆತ ರಾಷ್ಟದ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸಲು ಸಾಧ್ಯ. ರಾಷ್ಟ್ರಭಕ್ತಿಯನ್ನು ಮೂಡಿಸಿ ಸಂಸ್ಕಾರವನ್ನು ನೀಡುವ ಕಾರ್ಯಕ್ರಮ ಇದಾಗಿದ್ದು ಇದರ ಫಲಶ್ರುತಿಯನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರನ್ನು ಆರತಿ ಬೆಳಗಿಸಿ ತಿಲಕವಿಟ್ಟು ಕಾಲೇಜಿನ ಉಪನ್ಯಾಸಕರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜಿನ ತರಬೇತಿ ಘಟಕಗಳಾದ ಯಶಸ್, ಭವಿಷ್, ಓಜಸ್, ತೇಜಸ್ ಸಾಮರ್ಥ ಹಾಗೂ ನ್ಯಾಯಧಾರ ದ ಪದಾಧಿಕಾರಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಯಶಸ್ ಘಟಕದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಯಶಸ್ ಅಧ್ಯಯನ ಕೇಂದ್ರದ ಸಂಯೋಜಕ ಕೃಷ್ಣ ನಾರಾಯಣ ಮುಳಿಯ ಸ್ವಾಗತಿಸಿ, ಯಶಸ್ ಘಟಕದ ಕಾರ್‍ಯದರ್ಶಿ ಉಮೇಶ್ ನಾಯಕ್ ವಂದಿಸಿದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ನಿರೂಪಿಸಿದರು. ಯಶಸ್ ಘಟಕದ ಸಂಯೋಜಕ ಗೋವಿಂದ ಶರ್ಮ ಸಹಕರಿಸಿದರು.

LEAVE A REPLY

Please enter your comment!
Please enter your name here