ಪುತ್ತೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿದವರನ್ನು ಕೂಡಲೇ ಬಂಧನ ಮಾಡಬೇಕೆಂದು ಆಗ್ರಹಿಸಿ ಬೀಟಿಗೆ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಜೂ.10ರಂದು ಪ್ರತಿಭಟನೆ ನಡೆಯಿತು. ಜಮಾಅತ್ ಕಮಿಟಿ ಅಧ್ಯಕ್ಷ ಸುಲೈಮಾನ್ ಬೀಟಿಗೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬೀಟಿಗೆ ಜುಮಾ ಮಸೀದಿಯ ಖತೀಬ್ ದಾವೂದ್ ಇಸ್ಮಾಯಿಲ್ ಪೈಝಿ ಮಾತನಾಡಿ ಪ್ರವಾದಿಯವರ ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ತಾಳ್ಮೆಯನ್ನು ಯಾರೂ ಪರೀಕ್ಷಿಸಬೇಡಿ, ಕೋಟ್ಯಾಂತರ ಮುಸಲ್ಮಾನರ ಹೃದಯದಲ್ಲಿ ಪ್ರೀತಿಸುವ ಒಂದು ವ್ಯಕ್ತಿಇದ್ದರೆ ಅದು ಪ್ರವಾದಿ ಮಹಮ್ಮದ್ ಪೈಗಂಬರ್ ಆಗಿದ್ದು ಅಂತಹ ಪ್ರವಾದಿಯವರನ್ನು ಅವಹೇಳನ ಮಾಡಿರುವ ದುಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಇಬ್ರಾಹಿಂ ಮದನಿ ಬೀಟಿಗೆ, ಕುತುಬಿಯತ್ ಕಮಿಟಿ ಕಾರ್ಯದರ್ಶಿ ಸಿದ್ದೀಕ್ ಬೀಟಿಗೆ ಮಾತನಾಡಿ ಪ್ರವಾದಿಯವರನ್ನು ನಿಂದಿಸಿದ ಘಟನೆಯನ್ನು ಖಂಡಿಸಿದರು. ಉಮ್ಮರ್ ಮುಸ್ಲಿಯಾರ್ ಹಾಗೂ ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಕುತುಬಿಯತ್ ಕಮಿಟಿಯ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ನಾಯಕರು ಜಮಾಅತರು ಉಪಸ್ಥಿತರಿದ್ದರು.