ಬೆಟ್ಟಂಪಾಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೂ. 5ರಂದು ವನಪರ್ವ ಅಭಿಯಾನದ ಸರಣಿ ಕಾರ್ಯಕ್ರಮದ ಭಾಗವಾಗಿ ಮರಗಣತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಚಾಲನೆ ನೀಡಿದರು.
ಕಾರ್ಯಕ್ರಮದ ಸಂಘಟಕ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಹರಿಪ್ರಸಾದ್ ಎಸ್. ಇವರು ಮಾತನಾಡುತ್ತಾ ‘ಮರಗಣತಿಯ ಮೂಲಕ ಕಾಲೇಜು ಆವರಣದಲ್ಲಿ ಇರುವ ವಿವಿಧ ಪ್ರಬೇಧಗಳ ಮರಗಳನ್ನು ಗುರುತಿಸಿ ನಾಮಫಲಕ ಹಾಕಲಾಗುವುದು, ಈ ಮೂಲಕ ಯುವಜನರಿಗೆ ಬೇರೆ ಬೇರೆ ಮರಗಳ ಪರಿಚಯಿಸುವುದಲ್ಲದೆ ಮರಗಳನ್ನು ಉಳಿಸಿ ಬೆಳೆಸುವ ಧನಾತ್ಮಕ ಮನೋಭಾವ ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಶಶಿಕುಮಾರ, ಉಪನ್ಯಾಸಕರಾದ ಉದಯರಾಜ್ ಎಸ್., ಡಾ. ಪೊಡಿಯ, ರಾಮ ಕೆ. ಹಾಗೂ ನೂರಕ್ಕೂ ಅಧಿಕ ಎನ್ಎಸ್ಎಸ್ ಸ್ವಯಂಸೇವಕರು ಪಾಲ್ಗೊಂಡರು.
ಮೂರು ವರ್ಷಗಳಿಂದ ವನಪರ್ವ ಅಭಿಯಾನ
2020ರಲ್ಲಿ ಆರಂಭಗೊಂಡ ವನಪರ್ವ ಅಭಿಯಾನ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ವಿವಿಧ ಸಂದರ್ಭಗಳಲ್ಲಿ ಕಾಲೇಜು ಆವರಣದಲ್ಲಿ ಗಿಡ ನೆಡುವ ಮತ್ತು ಅವುಗಳನ್ನು ಪೋಷಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮೂರನೇ ವರ್ಷವಾದ ಈ ಬಾರಿಯೂ ಅಭಿಯಾನವು ಮುಂದುವರಿಯುತ್ತಿದ್ದು ಎಲ್ಲ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಅನುಷ್ಠಾನಗೊಳ್ಳುತ್ತಿದೆ. ಇದುವರೆಗೆ ಕಾಲೇಜು ಆವರಣದಲ್ಲಿ ನೆಟ್ಟು ಬೆಳೆಸಿರುವ ಗಿಡ ಮರಗಳಿಗೆ ಹೆಸರು, ವೈಜ್ಞಾನಿಕ ಹೆಸರುಗಳನ್ನು ನೀಡಿ ಗಣತಿ ಮಾಡಲಾಯಿತು.