- ಖಾಸಗಿ ಬಸ್ನಿಲ್ದಾಣದ ಬಳಿಯ ಚರಂಡಿಯಲ್ಲಿ ತುಂಬಿದ್ದ ಬಾಟಲಿಗಳು.. !
ಪುತ್ತೂರು: ಮಳೆಗೆ ಮೊದಲೇ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆ ಕೈಗೊಂಡಿದ್ದ ರಾಜ ಕಾಲುವೆಯಿಂದ ಹೂಳೆತ್ತುವ ಕೆಲಸ ಪೂರ್ಣಗೊಂಡಿದ್ದು ಇದೀಗ ವಾರ್ಡ್ಗಳ ಚರಂಡಿಯಿಂದ ಹೂಳೆತ್ತುವ ಕೆಲಸ ಆರಂಭಗೊಂಡಿದೆ. ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯ ಚರಂಡಿಯಿಂದ ಹೂಳೆತ್ತುವ ಸಮಯ ಲೋಡುಗಟ್ಟಲೇ ಪ್ಲಾಸ್ಟಿಕ್ ಬಾಟಲಿಗಳು ಪತ್ತೆಯಾಗಿವೆ.
ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯ ವಾರ್ಡ್ಗಳಲ್ಲಿನ ಎಲ್ಲಾ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ಉದ್ದೆಶದಿಂದ ಹೂಳು ತೆಗೆಯುವ ಕೆಲಸ ಆರಂಭಿಸಲಾಗಿದೆ. ಜೂ.11ರಂದು ಬೆಳಿಗ್ಗೆ ನೆಲ್ಲಿಕಟ್ಟೆ ಖಾಸಗಿ ಬಸ್ನಿಲ್ದಾಣದ ಬಳಿಯ ಚರಂಡಿ ಸ್ಲ್ಯಾಬ್ ಅನ್ನು ಹಿಟಾಚಿ ಮೂಲಕ ತೆರೆದಾಗ ಲೋಡುಗಟ್ಟಲೇ ಪ್ಲಾಸ್ಟಿಕ್ ಬಾಟಲಿಗಳು ಸೇರಿಕೊಂಡಿದ್ದು ನೀರು ಬ್ಲಾಕ್ ಆಗಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಚಿಂದಿ ಬಟ್ಟೆಗಳು ಚರಂಡಿಯಲ್ಲಿ ಸಿಲುಕಿಕೊಂಡು ಮಳೆ ನೀರು ಹರಿಯಲು ಅಡ್ಡಿಯಾಗಿರುವುದು ಕಂಡು ಬಂದಿದೆ.
ಹೂಳೆತ್ತಿ ವಿಲೇವಾರಿಗೆ ಸೂಚನೆ
ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚರಂಡಿ, ರಾಜಕಾಲುವೆಗಳಲ್ಲಿ ತುಂಬಿರುವ ಕಸಗಳನ್ನು ತೆಗೆದು ಅಲ್ಲೇ ರಾಶಿ ಹಾಕದೆ, ಸೂಕ್ತ ಜಾಗಕ್ಕೆ ಸಾಗಿಸಿ ವಿಲೇವಾರಿ ಮಾಡಬೇಕು. ಮಳೆ ನೀರು ಚರಂಡಿ, ಕಾಲುವೆಗಳಲ್ಲಿ ಸರಾಗವಾಗಿ ಹರಿದು ಹೋಗುವಂತೆ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.