ಉಪ್ಪಿನಂಗಡಿ: ಇಲಾಖಾ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಗ್ರಾಮಸ್ಥರು ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜೂ. ೧೩ರಂದು ಕರೆಯಲಾದ ಗ್ರಾಮ ಸಭೆಯನ್ನು ರದ್ದುಗೊಳಿಸಿದ ಘಟನೆ ಪೆರ್ನೆ ಗ್ರಾಮ ಪಂಚಾಯತಿನಿಂದ ವರದಿಯಾಗಿದೆ.
ಪಂಚಾಯಿತಿ ಅಧ್ಯಕ್ಷ ಸುನೀಲ್ ನೆಲ್ಸನ್ ಪಿಂಟೋ ಅಧ್ಯಕ್ಷತೆ ವಹಿಸಿ ಸಭೆ ಆರಂಭವಾಗುವುದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿಯವರು ಗ್ರಾಮಸ್ಥರನ್ನು ಸಭೆಗೆಆಗಮಿಸುತ್ತಿದ್ದಂತೆ ಅಧಿಕಾರಿಗಳು ಇಲ್ಲದೆ ಸಭೆ ನಡೆಸುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಅದರಂತೆ ಸಭೆಯನ್ನು ರದ್ದುಪಡಿಸಲಾಯಿತು.
ಸಭೆ ಆರಂಭ ಆಗುತ್ತಿದ್ದಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಜಾಕ್ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರಾದ ಕಿರಣ್ ಶೆಟ್ಟಿ, ಮಹೇಶ ಪಡಿವಾಳ್, ರಮೇಶ ನಾಯ್ಕ, ಶ್ರೀಧರ್ ಗೌಡ, ಗೋಪಾಲ ಸಪಲ್ಯ ಮತ್ತಿತರರು ಆರು ತಿಂಗಳಿಗೊಮ್ಮೆ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸಲುವಾಗಿ ಕರೆಯುವ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಇಲ್ಲದಿದ್ದಾಗ ನಾವುಗಳು ನಮ್ಮ ಅಹವಾಲುಗಳನ್ನು ಯಾರಲ್ಲಿ ಹೇಳುವುದು. ಈ ಸಭೆಯಲ್ಲಿ ೨೩ ಇಲಾಖೆಯ ಅಧಿಕಾರಿಗಳು ಇರಬೇಕಾಗಿದ್ದರೂ ಕೇವಲ ಎಂಟು ಇಲಾಖಾಧಿಕಾರಿಗಳು ಇದ್ದರೆ ಏನು ಪ್ರಯೋಜನ, ಆದ ಕಾರಣ ಕೇವಲ ಕಾಟಾಚಾರಕ್ಕೆ ನಡೆಯುವ ಈ ಸಭೆಯ ಅಗತ್ಯ ಇಲ್ಲ, ಇದನ್ನು ರದ್ದುಪಡಿಸಿ ಎಂದು ಆಗ್ರಹಿಸಿದರು.
ಆಗ ಸಭೆಯ ಚರ್ಚಾ ನಿಯಂತ್ರಣಾಧಿಕಾರಿಯೂ ಆಗಿರುವ ಬಂಟ್ವಾಳ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಸಭೆ ರದ್ದು ಪಡಿಸುವಂತೆ ಪಟ್ಟುಹಿಡಿದು ಆಗ್ರಹಿಸಿದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅವರು ಗ್ರಾಮ ಸಭೆ ರದ್ದುಗೊಳಿಸುವುದಾಗಿ ತಿಳಿಸಿ, ನಿರ್ಣಯ ಅಂಗೀಕರಿಸಿ ಓದಿ ಹೇಳಿ ಸಭೆಯನ್ನು ರದ್ದುಗೊಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವನಿತಾ, ಸದಸ್ಯರಾದ ತನಿಯಪ್ಪ ಪೂಜಾರಿ, ಭಾರತಿ, ಪ್ರಕಾಶ ನಾಯಕ್, ಮುತ್ತಪ್ಪ ಸಾಲಿಯಾನ್, ಮಹಮ್ಮದ್ ಫಾರೂಕ್, ವಿಜಯ, ಐರಿನ್ ಮಸ್ಕರೇನಿಯಸ್, ಸುಮತಿ, ಜಯಂತಿ, ರೇವತಿ, ಶಾರದಾ, ನವೀನ್ ಬರೆಪದಿ, ಕೇಶವ ಉಪಸ್ಥಿತರಿದ್ದರು.