ಅಂಬಿಕಾ ವಿದ್ಯಾಲಯ(ಸಿ.ಬಿ.ಎಸ್.ಇ.)ದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯಲ್ಲಿ ಶಾಲಾ ಮಟ್ಟದಲ್ಲಿ ನಡೆದ ಚುನಾವಣೆಯ ಅಂಗವಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಶನಿವಾರದಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಉಪನ್ಯಾಸಕ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಐತಪ್ಪ ನಾಯ್ಕ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಶಾಲಾ ಆವರಣದಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಐತಪ್ಪ ನಾಯ್ಕ ಅವರು ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ, ಪ್ರತಿಯೊಬ್ಬರಲ್ಲು ನೈಪುಣ್ಯತೆಯಿದೆ. ನಾವು ಯಶಸ್ವಿಯಾಗ ಬೇಕಾದರೆ ಯೋಜನೆಗಳನ್ನು ಹಾಕಿಕೊಳ್ಳಬೇಕು . ನಮ್ಮ ಕೆಲಸವನ್ನು ಸ್ವತಃ ನಾವೇ ಮಾಡಿದಾಗ ಖಂಡಿತ ಸಾಫಲ್ಯತೆಯನ್ನು ಗಳಿಸಬಹುದು. ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡರೆ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎಂದರು.

ಪುರಾಣದಲ್ಲಿ ಬರುವ ಸೀತೆ, ಸತಿ ಸಾವಿತ್ರಿ, ಮಂಡೋದರಿಯಂತಹವರು ನಮಗೆ ಆದರ್ಶ ವ್ಯಕ್ತಿಗಳಾಗಬೇಕೆ ಹೊರತು ಸಿನಿಮಾ ತಾರೆಯರಲ್ಲ. ಹಾಗೆಯೇ ಜನರು ತಮ್ಮನ್ನು ಒಳ್ಳೆಯ ಕೆಲಸಗಳಿಂದ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ನಾವು ಮುಂದಾಗಬೇಕು. ರಾಷ್ಟ್ರವನ್ನು ಕಟ್ಟುವ ಉತ್ತಮ ನಾಯಕರು ಅಂಬಿಕಾ ವಿದ್ಯಾಲಯದಿಂದ ಹೊರಹೊಮ್ಮಬೇಕು ಎಂದರು.

ಈ ಸಂದರ್ಭದಲ್ಲಿ ಶಾಲಾ ನಾಯಕನಾಗಿ ಮನ್ವಿತ್ ಎಸ್., ಶಾಲಾ ನಾಯಕಿಯಾಗಿ ಸಂಸ್ಕೃತಿ ವಿ. ಶೆಟ್ಟಿ, ಗೃಹಸಚಿವನಾಗಿ ಜಸ್ವಿತ್, ಶಿಕ್ಷಣ ಮಂತ್ರಿಯಾಗಿ ಹಿತಾಲಿ ಪಿ. ಶೆಟ್ಟಿ, ಸ್ವಚ್ಛತಾ ಮಂತ್ರಿಯಾಗಿ ಸಮೃದ್ ಎಚ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರುಂದತಿ ಎಸ್. ಆಚಾರ್ಯ, ಸಂವಹನ ಮಂತ್ರಿಯಾಗಿ ರಕ್ಷಾ ಎಸ್., ಆರೋಗ್ಯ ಮಂತ್ರಿಯಾಗಿ ಅನಘಾ ವಿ. ಪಿ., ನೀರಾವರಿ ಮಂತ್ರಿಯಾಗಿ ಪ್ರಿಯಾಂಶು, ಶಿಸ್ತುಪಾಲನಾ ಮಂತ್ರಿಯಾಗಿ ಶ್ರೀಕೃಷ್ಣ ನಟ್ಟೋಜ, ಕ್ರೀಡಾ ಮಂತ್ರಿಯಾಗಿ ಆಕರ್ಶ್ ಬಿ. ಶೆಟ್ಟಿ ರವರು ಪ್ರಮಾಣವಚನ ಸ್ವೀಕರಿಸಿದರು. ಶಾಲಾ ತಂಡಗಳಾದ ಐರಾವತ, ಕಲ್ಪವೃಕ್ಷ, ಕಾಮದೇನು, ಅಮೃತ ಗುಂಪಿನ ನಾಯಕರಿಗೆ ಬಾವುಟಗಳನ್ನು ಹಸ್ತಾಂತರಿಸಲಾಯಿತು. ಪ್ರಾಚಾರ್ಯೆ ಮಾಲತಿ ಡಿ ಭಟ್ ಹಾಗೂ ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಖುಷಿ ಸ್ವಾಗತಿಸಿ, ಮೇಧಾ ವಂದಿಸಿದರು. ಚರಿಷ್ಮಾ ಹಾಗೂ ಭಾರ್ಗವಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here