ಮಂಗಳೂರು: ಕರಾವಳಿ ರಾಜಕೀಯ ಕ್ಷೇತ್ರದ ಭೀಷ್ಮ ಎಂದೇ ಪರಿಗಣಿಸಲ್ಪಟ್ಟ, ದೂರದರ್ಶಿತ್ವದ ಮುತ್ಸದ್ಧಿ ಎ.ಜಿ.ಕೊಡ್ಗಿ ಎಂದೇ ಜನ ಮಾನಸದಲ್ಲಿ ಚಿರಪರಿಚಿತರಾಗಿದ್ದ ಅಮಾಸೆ ಬೈಲು ಗೋಪಾಲಕೃಷ್ಣ ಕೊಡ್ಗಿ (೯೩ ವ.) ಯವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಸ್ವಾತಂತ್ರ್ಯಹೋರಾಟಗಾರ ದಿವಂಗತ ಶ್ರೀಕೃಷ್ಣರಾಯ ಕೊಡ್ಗಿಯವರ ಮಗನಾಗಿ ಕೃಷಿಕ ಕುಟುಂಬದಲ್ಲಿ ಜನಿಸಿದ ಎ.ಜಿ. ಕೊಡ್ಗಿಯವರು ಪ್ರಸ್ತುತ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಕೊಡ್ಗಿಯವರು ಕರ್ನಾಟಕ ೩ನೇ ಹಣಕಾಸು ಅಯೋಗದ ಅನುಷ್ಠಾನ ಕಾರ್ಯ ಪಡೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯಉಪಾಧ್ಯಕ್ಶರಾಗಿ ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿರುತ್ತಾರೆ. ಅಮಾಸೆಬೈಲು ಗ್ರಾಮದ ಎಲ್ಲಾ ಬಡ ಜನರ ಮನೆಗಳಿಗೆ ಸೌರವಿದ್ಯುದ್ದೀಪ ಅಳವಡಿಸಿದ ಕೀರ್ತಿಎ.ಜಿ ಕೊಡ್ಗಿಯವರಿಗೆ ಸಲ್ಲುತ್ತದೆ.
ಮೃತರು ಪತ್ನಿ, ಐವರು ಪುತ್ರರು, ಓರ್ವಪುತ್ರಿ, ಮೊಮ್ಮಕ್ಕಳನ್ನು ಅಗಲಿರುತ್ತಾರೆ. ಜೂ.೧೪ ಮಧ್ಯಾಹ್ನ ೨ ಗಂಟೆಯ ತನಕ ಅಮಾಸೆಬೈಲಿನಲ್ಲಿರುವ ಗೋಕುಲ್ಫುಡ್ ಇಂಡಸ್ಟ್ರೀಸ್ನ ಕಚೇರಿಯಲ್ಲಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುವುದು ಎಂದು ಪುತ್ರ ಹಾಗೂ ಕ್ಯಾಂಪ್ಕೋ ಅಧ್ಯಕ್ಷರಾದ ಎ. ಕಿಶೋರ್ ಕೊಡ್ಗಿಯವರು ತಿಳಿಸಿರುತ್ತಾರೆ.