- ಬಿಜೆಪಿ ಅಧಿಕಾರಕ್ಕೋಸ್ಕರ ಬಂದ ಪಾರ್ಟಿಯಲ್ಲ ಸುದರ್ಶನ್ ಮೂಡಬಿದ್ರೆ
- ಸರಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸವಾಗಬೇಕು-ಎಸ್. ಅಂಗಾರ
ಆಲಂಕಾರು: ಭಾರತೀಯ ಜನತಾ ಪಾರ್ಟಿ ಸುಳ್ಯಮಂಡಲ, ರೈತ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಆಲಂಕಾರಿನಲ್ಲಿ ಬೆಳೆ ವಿಮೆ ಹಾಗೂ ಕಿಸಾನ್ ಸಮ್ಮಾನ್ ಫಲಾನುಭವಿಗಳ ಸಮಾವೇಶ ಹಾಗು ವಿಚಾರ ಸಂಕಿರಣ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಜೆ.ಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ನೆರವೆರಿಸಿ ಮಾತನಾಡಿ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ ಸರಕಾರ ಎಂಟು ವರ್ಷದ ಅವಧಿ ಪೂರೈಸಿದೆ. ಸುಮಾರು ೧೫೦ ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರ ಜಗತ್ ವಂಧ್ಯಾ ಭಾರತದ ಕನಸ್ಸನ್ನು ಸಾಕಾರ ಮಾಡುವ ಕಾರ್ಯ, ಜಗತ್ತಿನ ಎತ್ತರದಲ್ಲಿ ಭಾರತಕ್ಕೆ ಗೌರವ ತರುವ ಕಾರ್ಯ, ಪಂಡಿತ್ ದೀನ್ ದಯಾಳ್ ಕಂಡಿರುವ ಅಂತ್ಯೋದಯದ ಪರಿಕಲ್ಪನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯ ಬಿ.ಜೆ.ಪಿ ನೇತೃತ್ವದ ನರೇಂದ್ರ ಮೋದಿ ಸರಕಾರದಿಂದ ಆಗಿದೆ. ಯು.ಪಿ.ಎ ಕಾಲಘಟ್ಟದಲ್ಲಿ ಎಲ್ಲಾ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿತ್ತು, ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರ ರಹಿತ, ಕಳಂಕ ರಹಿತ ಅಡಳಿತ ನಡೆಸಿದೆ ಎಂದರು.
ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುವ ಕಿಸಾನ್ ಸಮ್ಮಾನ್ ಯೋಜನೆ, ಹವಾಮಾನ ನಿಯಂತ್ರಿತ ಫಸಲ್ ಭೀಮಾ ಬೆಳೆವಿಮೆಯೋಜನೆ ಹಾಗು ಇನ್ನಿತರ ಮಹತ್ತರವಾದ ಯೋಜನೆಗಳನ್ನು ಈ ದೇಶದಲ್ಲಿ ಜಾರಿ ಮಾಡುವ ಮೂಲಕ ನರೇಂದ್ರ ಮೋದಿಯವರು ರೈತರ ಪಾಲಿನ ದೇವರಾಗಿದ್ದಾರೆ ಎಂದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಎಂಟನೇ ವರ್ಷಾಚರಣೆಯ ಸೇವೆ ಸುಶಾಸನ ಬಡವರ ಕಲ್ಯಾಣ ಅಭಿಯಾನ ಮೂಲಕ ಆಚರಣೆ ಮಾಡುವುದಾಗಿ ತಿಳಿಸಿ ಕಳೆದ ಎಂಟು ವರ್ಷಗಳಲ್ಲಿ ಭ್ರಷ್ಟಾಚಾರ, ಕಳಂಕ ರಹಿತ ಆಡಳಿತ ನೀಡಿ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ತಂದು ಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿನ ಬಡವರು, ರೈತರು, ನಿರುದ್ಯೋಗಿಗಳ ಅಭ್ಯುದಯಕ್ಕಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ಅತೀ ಹೆಚ್ಚು ಯೋಜನೆಗಳನ್ನು ಅನುಷ್ಠಾನ ಮಾಡಿದ ಹೆಗ್ಗಳಿಕೆಗೆ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ ಸರಕಾರಕ್ಕಿದೆ ಎಂದರು. ಕೋವಿಡ್ ಸಂಧರ್ಭದಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಗು ಆಸ್ಪತ್ರೆಗಳಲ್ಲಿ ಮೂಲ ಭೂತ ಸೌಕರ್ಯ ಕೊರತೆಯಾಗಲು ಮೂಲ ಕಾರಣ ಇಷ್ಟು ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಆಗಿದ್ದು. ಕಾಂಗ್ರೆಸ್ ಭ್ರಷ್ಟಾಚಾರದ ಇನ್ನೊಂದು ಮುಖ ಎಂದರು. ಈಗ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ಗಳು ಹಾಗು ಬೆಡ್ಗಳ ವ್ಯವಸ್ಥೆಗೆ ಬೇಕಾದ ಪೂರ್ವ ತಯಾರಿಯನ್ನು ಮಾಡಿದೆ. ಈ ದೇಶದಲ್ಲಿ ಒಟ್ಟು ೮೦ ಕೋಟಿ ಜನ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿ ದ.ಕ ಜಿಲ್ಲೆಗೆ ಒಟ್ಟು ೧೯೦೦೦ ಕೋಟಿ ರೂಪಾಯಿಗಳ ಅನುದಾನ ಕೇಂದ್ರದಿಂದ ಬಂದಿದೆ ಎಂದು ತಿಳಿಸಿದರು.
ವಿಚಾರ ಮಂಡನೆ ಮಾಡಿದ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡಬಿದ್ರೆ ಮಾತನಾಡಿ ಭಾರತೀಯ ಜನತಾ ಪಾರ್ಟಿ ತ್ಯಾಗ ಬಲಿದಾನ ಹಾಗು ವಿಚಾರದ ಆಧಾರದ ಮೇಲೆ ಬಂದ ಪಾರ್ಟಿ,ಅಧಿಕಾರಕೋಸ್ಕರ ಬಂದಂತಹ ಪಾರ್ಟಿ ಬಿಜೆಪಿ ಆಲ್ಲ ನಾವು ಭಾರತ ಮಾತಾ ಕೀ ಜೈ ಎನ್ನುವವರು. ರಾಷ್ಟ್ರೀಯ ವಿಚಾರ ದಾರೆಯನ್ನು ಮನೆ ಮನೆಗೆ ಮುಟ್ಟಿಸುವ ದೃಡವಾದ ಸಂಕಲ್ಪ ಹಾಗು ಅತ್ಮವಿಶ್ವಾಸ, ಸಂಕಲ್ಪ ಕಾರ್ಯಕರ್ತರಲ್ಲಿ ಇದ್ದ ಕಾರಣ ಪಾರ್ಟಿ ಇಷ್ಟು ಎತ್ತರಕ್ಕೆ ಏರಿ ಬಂತು. ಇದನ್ನು ಚುನಾಯಿತ ಜವಾಬ್ದಾರಿ ಇರುವ ಜನಪ್ರತಿನಿಧಿಗಳು ಅರಿತು ಕೆಲಸ ಮಾಡುಬೇಕು, ಇಲ್ಲದಿದ್ದರೆ ಜನಪ್ರತಿನಿಧಿಗಳು ಸಂಘಟನೆಗೆ ದ್ರೋಹ ಮಾಡಿದಂತಾಗುತ್ತದೆ ಎಂದರು. ಬಿ.ಜೆ.ಪಿ ಸೇವೆ ಮಾಡಲು ಇರುವ ಪಾರ್ಟಿ ಎಂದು ಜನಪ್ರತಿನಿಧಿಗಳಿಗೆ ತಮ್ಮ ಜವಾಬ್ದಾರಿಯ ಅರಿವನ್ನು ತಿಳಿಸಿದ ಅವರು ಬಿ.ಜೆ.ಪಿ. ರೈತರ ಜೊತೆ ಜೊತೆಯಲ್ಲಿ ಹೋಗಬೇಕೆಂದರು.
ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರೂ ಇದು ಅರ್ಹ ಫಲಾನುಭವಿಗಳಿಗೆ ಇನ್ನೂ ತಲುಪುತ್ತಿಲ್ಲ, ಕಾರ್ಯಕರ್ತರು ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸ ಕಾರ್ಯ ಮಾಡಬೇಕೆಂದರು. ಸಭೆಯ ಅಧ್ಯಕ್ಷತೆಯನ್ನು ಬಿ.ಜೆ.ಪಿ ಸುಳ್ಯ ಮಂಡಲ ಇದರ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ವಹಿಸಿದ್ದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ, ಕೃಷಿಯಲ್ಲಿ ಸಾಧನೆ ಮಾಡಿದ ಲಕ್ಷ್ಮೀ ಯವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ದ.ಕ ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎ.ವಿ. ತೀರ್ಥಾರಾಮ, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಕಾರ್ಯದರ್ಶಿ ಕೇಶವ ಭಟ್ ಮುಳಿಯ, ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಪ್ರಧಾನ ಕಾರ್ಯದರ್ಶಿ ವಸಂತ ಅಣ್ಣಳಿಕೆ, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರುಗಳಾದ ಧರ್ಮಪಾಲ ರಾವ್ ಕೆ, ಶಿವಪ್ರಸಾದ್ ಪುತ್ತಿಲ, ಗಣೇಶ್ ನಿಡ್ವಣ್ಣಾಯ, ದಾಮೋದರ ಐ.ಎಂ, ಉಮೇಶ್ ಶೆಟ್ಟಿ ಪಟ್ಟೆ,, ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ ಕುಳ, ಜಯಪ್ರಕಾಶ್ ಕೂಜುಗೋಡು, ಆನಂದ ಗೌಡ ಮೇಲ್ಮನೆ, ವಸಂತ ಗೌಡ ಹುದೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ಮಂಡಲ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ರಮೇಶ್ ಕಲ್ಪುರೆ ಸ್ವಾಗತಿಸಿ ಸುಳ್ಯ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ವಂದೇಮಾತರಂನ್ನು ಅಶಾ ತಿಮ್ಮಪ್ಪ ಗೌಡ, ರೈತ ಗೀತೆಯನ್ನು ಮಯೂರಿ ಹಾಡಿದರು. ಪ್ರದೀಪ್ ರೈ ಮನವಳಿಕೆ ವಂದಿಸಿದರು. ಬಿ.ಜೆ.ಪಿ ಪ್ರಮುಖರು, ಕಾರ್ಯಕರ್ತರು ಸಹಕರಿಸಿದರು.