ಕೆ. ಸೀತಾರಾಮ ರೈಯವರಿಂದ ಸ್ನಾನಗೃಹದ ಹಸ್ತಾಂತರ

0


ಪುತ್ತೂರು: ತಮ್ಮ 75ನೆ ಹುಟ್ಟುಹಬ್ಬದ ಪ್ರಯುಕ್ತವಾಗಿ ಕೆ. ಸೀತಾರಾಮ ರೈ ಸವಣೂರು ಅವರು ಸಾರ್ವಜನಿಕರ ಉಪಯೋಗಕ್ಕಾಗಿ ಸುಮಾರು 11 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಬಿಸಿನೀರಿನ ಸರಬರಾಜು ಸಹಿತವಾದ ಸುಸಜ್ಜಿತ ಸ್ನಾನಗೃಹ ಮತ್ತು ಶೌಚಾಲಯಗಳ ಸಂಕೀರ್ಣವನ್ನು ಸವಣೂರು ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಲಾಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ. ಶೆಟ್ಟಿ ಮತ್ತು ಅವರ ತಂಡಕ್ಕೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ್ ಸುಲಾಯರವರು ಮಾತನಾಡಿ ಸೀತಾರಾಮ ರೈಯವರು ಸುಮಾರು ೩೦ ವರ್ಷಗಳಿಂದ ಸವಣೂರಿನಲ್ಲಿ ಮಾಡಿದ ವಿವಿಧ ಸಾರ್ವಜನಿಕ ಸೇವೆಗಳನ್ನು ಸ್ಮರಿಸಿಕೊಂಡರು. ಇದೀಗ ಅವರು ನೀಡಿರುವ ಸ್ನಾನಗೃಹ ಮತ್ತು ಶೌಚಾಲಯಗಳ ಸಂಕೀರ್ಣವು ಸ್ವಚ್ಛ ಗ್ರಾಮ ಅಭಿಯಾನಕ್ಕೆ ಸಂಬಂಧಿಸಿದಂತೆ ಅಮೂಲ್ಯ ಮತ್ತು ಗಣನೀಯವಾದ ಕೊಡುಗೆಯಾಗಿದೆ ಎಂದರು. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇರುವಂತಹ ಸಾರ್ವಜನಿಕ ಸ್ನಾನಗೃಹ ಈ ಪರಿಸರದಲ್ಲಿ ಇದೇ ಮೊದಲು ಎಂದು ಘಟಕದ ವಿಶೇಷತೆಯನ್ನು ಉಲ್ಲೇಖಿಸಿದರು. ಸೀತಾರಾಮ ರೈಯವರಲ್ಲಿ ಸ್ವಚ್ಛತೆಯ ಕುರಿತಾದ ಮಾನಸಿಕತೆ ಎಲ್ಲರಿಗೂ ಮಾದರಿಯಾದುದು ಎಂದು ಅವರು ಪ್ರಶಂಸಿಸಿದರು.

ಅಶ್ವಿನ್ ಎಲ್. ಶೆಟ್ಟಿಯವರು ಮಾತನಾಡಿ ಸವಣೂರಿಗೆ ಇನ್ನು ಮುಂದೆ ಆಗಬೇಕಾದ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಪಂಚಾಯತ್‌ನೊಂದಿಗೆ ಸಹಕರಿಸಲಿವೆ ಎಂದರು. ಸವಣೂರಿನಲ್ಲಿ ಉದ್ಯಾನವನ ಮಾಡುವ ಯೋಜನೆ ಪಂಚಾಯತ್‌ನ ಮುಂದಿದ್ದು ಅದಕ್ಕೆ ನಮ್ಮ ಸಂಸ್ಥೆಗಳು ರಾಷ್ಟ್ರೀಯ ಸೇವಾ ಯೋಜನಾ ಘಟಕ ಸೇವೆ ನೀಡುತ್ತದೆ ಎಂದು ಘೋಷಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ, ಇತರ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here