ಪುತ್ತೂರು: ಮುಂಡೂರು ಶ್ರೀ ಮೃತ್ಯಂಜಯೇಶ್ವರ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ ವಿಚಾರದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ, ವಿವಾದಗಳ ಹಿನ್ನೆಲೆಯಲ್ಲಿ ಜೂ.23ರಂದು ದೇವಸ್ಥಾನದಲ್ಲಿ `ನಾಗಪತಿಷ್ಠಾ ಕಾರ್ಯದ ಗೊಂದಲ ನಿವಾರಣಾ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ ಎಂದು ಮುಂಡೂರು ಶ್ರೀ ಮೃತ್ಯಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ತಿಳಿಸಿದರು. ಜೂ.18ರಂದು ಸುದ್ದಿ ಮೀಡಿಯಾ ಸೆಂಟರ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳಿಂದ ಭಕ್ತರಲ್ಲಿ ಗೊಂದಲ ಸೃಷ್ಟಿಯಾಗಿದ್ದಲ್ಲಿ ಅದನ್ನು ನಿವಾರಿಸುವ ಕಾರ್ಯ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ. ದೇವಸ್ಥಾನದಲ್ಲಿ ಈ ಬಾರಿ ಅಷ್ಟಮಂಗಳ ಪ್ರಶ್ನೆ ನಡೆಸಿಕೊಟ್ಟ ದೈವಜ್ಞ ಕುತ್ತಿಗೋಳು ಶಶೀಂದ್ರ ನಾಯರ್, ವಾಸ್ತುತಜ್ಞ ಕೃಷ್ಣಪ್ರಸಾದ್ ಮುನಿಯಂಗಳ, ಮಾಡಾವು ವೆಂಕಟ್ರಮಣ ಜೋಯಿಸರು ಹಾಗೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಗೊಂದಲಕ್ಕೆ ತೆರೆ ಎಳೆಯಬೇಕೆನ್ನುವ ಉದ್ದೇಶಕ್ಕೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಊರವರು, ಭಕ್ತಾದಿಗಳು ಅಂದಿನ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಎಲ್ಲವೂ ಸರಿಯಾಗಿ ನಡೆದು ಒಪ್ಪಿಗೆಯಾದಲ್ಲಿ ಆ ದಿನವೇ ಪ್ರತಿಷ್ಠಾಪನೆಯ ದಿನ ನಿಗದಿಪಡಿಸಲಾಗುವುದು ಎಂದು ಲೋಕಪ್ಪ ಗೌಡ ಹೇಳಿದರು. ಗ್ರಾಮಸ್ಥರಾದ ಗಣೇಶ್ ಸಾಲ್ಯಾನ್ ಕೈಪಂಗಳದೋಳ ಹಾಗೂ ಬಾಳಪ್ಪ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.