- ಉದ್ಯೋಗ ಖಾತರಿ ಯೋಜನೆಯಲ್ಲಿ ಬೆಳಂದೂರು ಗ್ರಾ.ಪಂ. ಅತ್ಯುನ್ನತ್ತ ಸಾಧನೆ- ಡಾ.ಅಜಿತ್
ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕ್ರೀಯಾ ಯೋಜನೆಯ 2022-23ನೇ ಸಾಲಿನ ಪ್ರಥಮ ಹಂತದ ಮತ್ತು 2021-22ನೇ ಸಾಲಿನ 14/15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆಯು ಬೆಳಂದೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ ಕಡಬ ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ಅಜಿತ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕ್ರೀಯಾ ಯೋಜನೆಯಲ್ಲಿ ಬೆಳಂದೂರು ಗ್ರಾ.ಪಂ. ಅತ್ಯುನ್ನತ್ತ ಸಾಧನೆ ಮಾಡಿದೆ. ಯಾವುದೇ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಜನತೆಯ ಸಹಕಾರವು ಅತೀ ಅಗತ್ಯ ಎಂದವರು, ಉದ್ಯೋಗ ಖಾತರಿ ಯೋಜನೆಯ ಮುಖಾಂತರ ಗ್ರಾಮಗಳು, ಅಭಿವೃದ್ಧಿಗೊಳ್ಳುತ್ತಾ ಇದೆ ಎಂದರು. ಬೆಳಂದೂರು ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಯೋಜನೆಯ ಕಡಬ ತಾಲೂಕು ಸಂಯೋಜಕ ಪ್ರವೀಣ್, ತಾಂತ್ರಿಕ ಸಹಾಯಕರಾದ ಮನೋಜ್, ಹೃತಿಕ್, ಕಡಬ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯರಾದ ಮೋಹನ್ ಅಗಳಿ, ಜಯಂತ ಅಬೀರ, ವಿಠಲ ಗೌಡ ಅಗಳೀ, ಪ್ರವೀಣ್ ಕೆರೆನಾರ್, ಗೀತಾ ಕುವೇತ್ತೋಡಿ, ಗೌರಿ ಮಾದೋಡಿ, ಉಮೇಶ್ವರಿ ಅಗಳಿ, ಪಾರ್ವತಿ ಮರಕ್ಕಡ, ಕುಸುಮ ಅಂಕಜಾಲು, ತಾರಾ ಅನ್ಯಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಗ್ರಾ.ಪಂ. ಸಿಬ್ಬಂದಿಗಳಾದ ಗೀತಾ, ಮಮತಾ, ಹರ್ಷಿತ್, ಸಂತೋಷ್ ಸಹಕರಿಸಿದರು.
ನರೇಗಾ ಯೋಜನೆಯಡಿ ಆರು ತಿಂಗಳಲ್ಲಿ ಸುಮಾರು ೩೭ಲಕ್ಷದ ಕಾಮಗಾರಿ ನಡೆದು ದಾಖಲೆ ನಿರ್ಮಿಸಿದರೂ ಸಿಬ್ಬಂದಿಯ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಕೂಡಲೇ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥ ನವಾಜ್ ಸಖಾಫಿ ಹೇಳಿದರು. ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಾಗುವುದು ಎಂದು ಪಂಚಾಯತ್ ಪ್ರಭಾರ ಅಭಿವೃದ್ಧಿ ನಾರಾಯಣ ಅವರು ಭರವಸೆ ನೀಡಿದರು.