ಕ್ಲಬ್ ಹೌಸ್ ಚರ್ಚೆಯಲ್ಲಿ ಶ್ರೀರಾಮಚಂದ್ರ, ಸೀತಾಮಾತೆ, ಹನುಮಂತ ದೇವರ ಅವಹೇಳನ-ಆರೋಪ

0

  • ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್ ವಿರುದ್ಧ ಹಿಂದೂ ಸಂಘಟನೆಗಳಿಂದ ದೂರು

ಪುತ್ತೂರು: ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್‌ನ ಚರ್ಚೆಯಲ್ಲಿ ಹಿಂದೂ ಧರ್ಮದ ಆರಾಧ್ಯ ದೇವರುಗಳಾದ ಶ್ರೀರಾಮಚಂದ್ರ, ಸೀತಾ ಮಾತೆ ಮತ್ತು ಹನುಮಂತ ದೇವರ ಕುರಿತು  ಕೆಟ್ಟ ಪದಗಳನ್ನು ಬಳಸಿ ಅವಹೇಳನ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಲ್ಲದೆ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿ ಕೋಮು ಭಾವನೆಗಳನ್ನು ಕೆರಳಿಸಿದ ಆರೋಪದಡಿ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿಯಾಗಿರುವ ಪುತ್ತೂರು ಬಪ್ಪಳಿಗೆ ನಿವಾಸಿ, ನ್ಯಾಯವಾದಿ ಶೈಲಜಾ ಅಮರನಾಥ್ ಮತ್ತು ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಯಾನೆ ಮಹಾಲಕ್ಷ್ಮೀ, ಕಾಂಗ್ರೆಸ್ ಐಟಿ ಸೆಲ್‌ನ ಅನಿಲ್, ಪ್ರವೀಣ್, ಪುನೀತ್ ಮುಂತಾದವರು ಸೇರಿಕೊಂಡು ಕ್ಲಬ್ ಹೌಸ್‌ನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ವಿಶ್ವಹಿಂದೂ ಪರಿಷದ್, ಬಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಯ ನೇತೃತ್ವದಲ್ಲಿ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

ದೂರಿನ ವಿವರ:
16 ಜೂನ್ 2022 ಗುರುವಾರ ರಾತ್ರಿ 9ಗಂಟೆಗೆ ಸಾಮಾಜಿಕ ಜಾಲತಾಣ ಕ್ಲಬ್ ಹೌಸ್‌ನಲ್ಲಿ `ಸಂಡೇ ಅಂಕಲ್ಸ್ ಆರ್ ಮಂಡೇ ನಸ್ಸ್’ ಎಂಬ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಉರುವ ಯಾನೆ ಮಹಾಲಕ್ಷ್ಮೀ ಶೆಟ್ಟಿ, ಅನಿಲ್, ಪ್ರವೀಣ್ ಮುಂತಾದವರು ಸೇರಿಕೊಂಡು ನಾವೆಲ್ಲಾ ಭಕ್ತಿಯಿಂದ ಪೂಜಿಸುವ ಆರಾಧ್ಯ ದೇವರುಗಳಾದ ಶ್ರೀ ರಾಮಚಂದ್ರ, ಸೀತಾ ಮಾತೆ ಮತ್ತು ಹನುಮಂತ ದೇವರನ್ನು ಕಟ್ಟ ಪದಗಳಿಂದ ನಿಂದಿಸಿ ಅವಹೇಳನ ಮಾಡಿದ್ದಾರೆ. ಇಂತಹ ಅವಮಾನದಿಂದ ನಮಗೆ ಅತೀವ ಸಂಕಟ ಮತ್ತು ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟಾಗಿರುತ್ತದೆ. ಉದ್ದೇಶ ಪೂರ್ವಕವಾಗಿ ದುರುದ್ದೇಶದಿಂದ ಹಿಂದೂಗಳ ಧಾರ್ಮಿಕ ನಂಬಿಕೆಗೆ ಹಾಗೂ ಭಾವನೆಗಳಿಗೆ ಧಕ್ಕೆ ತರಲು ಹಿಂದೂಗಳ ದೇವರನ್ನು ಅವಮಾನಿಸಿರುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿರುವುದಲ್ಲದೆ ಬೇರೆ ಬೇರೆ ಜಾತಿ, ಧರ್ಮಗಳ ಬಗ್ಗೆ ದ್ವೇಷವನ್ನು ಪ್ರಚೋದಿಸುವ ಹಾಗೂ ಸಾಮಾಜಿಕ ಶಾಂತಿ ಭಂಗ ತರುವ ದುರುದ್ದೇಶದಿಂದ ಮಾಡಿರುವ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಪರಾಧಿಕ ಕೃತ್ಯವನ್ನು ಎಸಗಿದ ಇವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಬಜರಂಗದಳ ಪುತ್ತೂರು ನಗರ ಪ್ರಖಂಡ ಸಹಸಂಯೋಜಕ ಪ್ರವೀಣ್ ಕುಮಾರ್ ಮತ್ತು ಬನ್ನೂರು ಶ್ರೇಯಾ ನಿಲಯದ ಮನೀಶ್‌ರವರು ಪ್ರತ್ಯೇಕ ದೂರು ನೀಡಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ದೂರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್, ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here