ಪುತ್ತೂರು: ತೆಂಕಿಲದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಶಾಲಾ ‘ಸ್ವಸ್ಥ-ಸ್ವಾಸ್ಥ್ಯ ‘ ಸಂಘದ ಆಶ್ರಯದಲ್ಲಿ ಮಾನವೀಯತೆಗಾಗಿ ಯೋಗ ಧ್ಯೇಯವನ್ನಿರಿಸಿ ಯೋಗ ದಿನಾಚರಣೆ ಕಾರ್ಯಕ್ರಮ ಜೂ.21 ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ| ಚೇತನಾ ಮುದ್ರಾಜೆ ಇವರು ಮಾತನಾಡಿ ಯೋಗದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟರು. ಜೂನ್ 15 ರಿಂದ 25ರವರೆಗೆ ಶಾಲಾ ವತಿಯಿ೦ದ ಹಮ್ಮಿಕೊಳ್ಳಲಾದ ಯೋಗ ಸಪ್ತಾಹದಲ್ಲಿ ಪ್ರಾಥಮಿಕ ತರಗತಿಯ ಮಕ್ಕಳಿಗೆ ಕಥಾ ಯೋಗ, ಪ್ರೌಢ ವಿಭಾಗದ ಮಕ್ಕಳಿಗೆ ‘ಪ್ರಾಣಾಯಾಮ-ಏಕಾಗ್ರತಾ ಸೂತ್ರ’, ಪೋಷಕರಿಗೆ ಚಿಕಿತ್ಸಾತ್ಮಕ ಯೋಗಾಸನಾ ಹಾಗೂ ಶಿಕ್ಷಕರಿಗೆ ವಿಭಿನ್ನ ಆಸನಗಳ ಪರಿಚಯ ಮಾಡಿಸಲಾಯಿತು.
ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಮಾತನಾಡಿ “ವಿದ್ಯಾಭಾರತಿ ಕರ್ನಾಟಕ ನಿರ್ದೇಶಿತ ಸಂವಿತ್ ಪಠ್ಯಕ್ರಮದಂತೆ ಯೋಗಾಸನಾ ಅವಧಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಧ್ಯಾನ, ಪ್ರಾಣಾಯಾಮ, ಆಸನ ಅಭ್ಯಾಸ ತರಗತಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕಿ ಶರಾವತಿ ಹಾಗೂ ಸಂಜಯ್, ಚಂದ್ರಶೇಖರ್ ಮಾರ್ಗದರ್ಶನ ನೀಡುತ್ತಿದ್ದು, ಶಾಲಾ ಯೋಗ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ವೀಣಾ ಸರಸ್ವತಿ, ಅನುರಾಧ, ರಂಗಪ್ಪ, ದಾಮೋದರ, ಹರಿಣಾಕ್ಷಿ ಇವರ ಸಂಯೋಜನೆಯಲ್ಲಿ ಯೋಗ ಸಪ್ತಾಹದ ಕಾರ್ಯಕ್ರಮಗಳು ನಿರ್ದೇಶಿಸಲ್ಪಟ್ಟಿದ್ದು ಇಂದು ಕಾರ್ಯಕ್ರಮ ಸಮಾಪನಗೊಳ್ಳುತ್ತಿದೆ ಎಂದರು. ಈ ಸಂದರ್ಭದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಅಧ್ಯಕ್ಷ ರಮೇಶ್ಚಂದ್ರ,ಆಡಳಿತ ಮಂಡಳಿಯ ಸದಸ್ಯರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.