ಪುತ್ತೂರು : ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಎನ್ಎಸ್ಎಸ್ ಮತ್ತು ಯೂತ್ರೆಡ್ಕ್ರಾಸ್ ಇದರ ಸಂಯುಕ್ತ ಆಶ್ರಯದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ವಿದ್ಯಾಭಾರತಿ ದಕ್ಷಿಣ ಕನ್ನಡದ ಯೋಗ ಸಂಯೋಜಕ ಚಂದ್ರಶೇಖರ್ ಮಾತನಾಡಿ ನಮ್ಮ ಮನಸ್ಸು ಮತ್ತು ಶರೀರ ಬಲಗೊಂಡಷ್ಟು ಋಣಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ. ಆಗ ಮನಸ್ಸು ಸಂತುಲಿತವಾಗಿ ಶಕ್ತಿಪೂರ್ಣವಾಗುತ್ತದೆ. ಯೋಗ ಇಂದು ವಿಶ್ವವ್ಯಾಪಿಯಾಗಿದೆ. ವಿದೇಶಗಳೂ ಅದರ ಮಹತ್ವವನ್ನು ಅರಿತಿವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ. ಮಾತನಾಡಿ ಯಾಂತ್ರಿಕ ಜಗತ್ತಿನಲ್ಲಿ ನಿರಂತರ ಕೆಲಸ ಮತ್ತು ಒತ್ತಡದಿಂದ ಪ್ರತಿಯೊಬ್ಬರೂ ದಣಿಯುವುದು ಸಹಜ. ಆಗ ದೇಹಕ್ಕೆ ಶಕ್ತಿಯ ಪೂರೈಕೆಯು ಅಗತ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡುವುದರ ಮೂಲಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದರು. ಸಭಾಕಾರ್ಯಕ್ರಮದ ನಂತರ ಸರಳ ಆಸನಗಳನ್ನು ಅಭ್ಯಸಿಸಲಾಯಿತು.
ಕಾಲೇಜಿನ ಎನ್ಎಸ್ಎಸ್ ಸಂಯೋಜಕಿ ಪ್ರೊ.ನಿಶಾ ಜಿ.ಆರ್ ಸ್ವಾಗತಿಸಿದರು. ಯೂತ್ರೆಡ್ಕ್ರಾಸ್ ಸಂಯೋಜಕ ಪ್ರೊ. ಅಜಯ್ ಶಾಸ್ತ್ರಿ ವಂದಿಸಿದರು.